News Karnataka Kannada
Saturday, April 27 2024
ಕರ್ನಾಟಕ

ಮಹಿಳೆಯರ ಅತ್ಯಾಚಾರ ಮಾಡಿ ಕೊಂದು ದೇಹವನ್ನು ನಾಯಿಗೆ ಎಸೆಯುತ್ತಾರೆ’: ಕಣ್ಣು ಕಳೆದುಕೊಂಡ ಮಹಿಳೆ ಹೇಳಿದ ತಾಲಿಬಾನಿಗಳ ಕ್ರೌರ್ಯದ ಕಥೆ

Talibans Rule
Photo Credit :

ನವದೆಹಲಿ: ತಾಲಿಬಾನಿಗಳ ದೃಷ್ಟಿಯಲ್ಲಿ ಮಹಿಳೆಯರೆಂದರೆ ಬದುಕುವ, ಉಸಿರಾಡುವ ಜೀವಿಗಳಲ್ಲ. ಕೇವಲ ಮಾಂಸ ತುಂಬಿದ ದೇಹವಷ್ಟೇ. ಮಹಿಳೆಯರನ್ನು ಮನಬಂದಂತೆ ಹಿಂಸಿಸಿ ಕೊಂದು, ಅವರ ದೇಹವನ್ನ ನಾಯಿಗೆ ಎಸೆಯುತ್ತಾರೆ ಎಂದು ತಾಲಿಬಾನಿಗಳಿಂದ ದೌರ್ಜನ್ಯದಿಂದ ಕಣ್ಣು ಕಳೆದುಕೊಂಡ ಮಹಿಳೆಯೊಬ್ಬರು ದೆಹಲಿಗೆ ಬಂದು ಉಗ್ರ ಸಂಘಟನೆಯ ಭಯಾನಕತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡುತ್ತೇವೆ ಎಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಇಡೀ ವಿಶ್ವವೇ ಕೇಳುವಂತೆ ಘೋಷಣೆ ಮಾಡಿದ್ದಾರೆ. ಆದರೆ ಈ ರಕ್ಕಸರ ಕೈಯಲ್ಲಿ ಸಿಲುಕಿ ನಲುಗಿರುವ ಮಹಿಳೆಯರಿಗೆ ಲೆಕ್ಕವೇ ಇಲ್ಲ. ಈ ತಾಲಿಬಾನಿಗಳು ಅಫ್ಘಾನ್‌ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಸಿರುವ ಅತ್ಯಾಚಾರ, ದೌರ್ಜನ್ಯ ಅಷ್ಟಿಷ್ಟಿಲ್ಲ.
ಕೆಲವು ಮಹಿಳೆಯರು ಮುಂದೆ ಬಂದು ತಾವು ಅನುಭವಿಸಿರುವ ಹಿಂಸೆಗಳ ಬಗ್ಗೆ ಹೇಳಿದ್ದಾರೆ. ಆದರೆ ಅಫ್ಘಾನಿಸ್ತಾನದ ಖತೇರಾ ಎಂಬ ಮಹಿಳೆ ತಮಗಾಗಿರುವ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಜತೆಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಭವಿಷ್ಯದ ಬಗ್ಗೆ ಅವರು ಹೇಳುತ್ತಿರುವುದು ಕೇಳಿದರೆ ಕೇಳುಗರ ಮೈಯಲ್ಲಿ ನಡುಕ ಹುಟ್ಟುತ್ತದೆ.‘ನಾನು ಉದ್ಯೋಗಸ್ಥೆಯಾಗಿದ್ದೆ. ಎರಡು ತಿಂಗಳ ಗರ್ಭಿಣಿ. ಘಜ್ನಿಯ ಕಂಪೆನಿಯೊಂದರಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ತಾಲಿಬಾನ್​ ಉಗ್ರರು ನನ್ನನ್ನು ಸುತ್ತುವರೆದರು. ನನ್ನ ಬಳಿ ಇದ್ದ ಕಚೇರಿಯ ಐ ಕಾರ್ಡ್‌ ನೋಡಿದರು. ನಾನು ಉದ್ಯೋಗಸ್ಥೆ ಎಂದು ತಿಳಿಯುತ್ತಲೇ ಬಂದೂಕನ್ನು ತೆಗೆದುಕೊಂಡರು. ಅದರಿಂದ ನೇರವಾಗಿ ನನ್ನ ಕಣ್ಣಿಗೆ ಇರಿದು ಕಿತ್ತರು. ನೋವಿನಿಂದ ಚೀರಿದರೂ, ಜೀವದ ಭಿಕ್ಷೆ ಬೇಡಿದರೂ ಆ ರಕ್ಕಸರು ಕೇಳಲಿಲ್ಲ’ ಎಂದಿದ್ದಾರೆ.
ಕಾಬುಲ್​ನಿಂದ ತಪ್ಪಿಸಿಕೊಂಡು ದೆಹಲಿಗೆ ಬಂದಿರುವ ಖತೇರಾ ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಕೆಯ ಪತಿ ಹಾಗೂ ಮಗು ಕೂಡ ದೆಹಲಿಯಲ್ಲಿದ್ದು ಮಾಧ್ಯಮಗಳ ಎದುರು ಭಯಾನಕ ದಿನಗಳನ್ನು ಅವರು ಬಿಚ್ಚಿಟ್ಟಿದ್ದಾರೆ.ತಾಲಿಬಾನಿಗಳಿಗೆ ಮಹಿಳೆಯರು ಎಂದರೆ ಮನುಷ್ಯರಲ್ಲ. ಮಾಂಸ ತುಂಬಿದ ದೇಹವಷ್ಟೇ. ಆಕೆಯನ್ನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳುತ್ತಾರೆ. ಪುರುಷರು ಇಲ್ಲದೇ ಮಹಿಳೆ ಮನೆಯಿಂದ ಹೊರಕ್ಕೆ ಬಂದರೆ ನಿರ್ದಯವಾಗಿ ಕೊಂದು ಅವರ ದೇಹವನ್ನು ನಾಯಿಗೆ ಎಸೆಯುತ್ತಾರೆ ಎಂದು ಕ್ರೌರ್ಯದ ಪರಮಾವಧಿ ಎನಿಸುವ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ ಖತೇರಾ.
‘ನನ್ನ ತಂದೆ ತಾಲಿಬಾನ್​ ಸಂಘಟನೆಯ ಮಾಜಿ ಸದಸ್ಯ. ನನ್ನ ಮೇಲೆ ದಾಳಿ ನಡೆಸಲು ಇವರೇ ಪಿತೂರಿ ನಡೆಸಿರುವ ಸಾಧ್ಯತೆ ಇದೆ. ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರು ಎಂತಹ ಕೆಟ್ಟ ನರಕವನ್ನು ಅನುಭವಿಸುತ್ತಿದ್ದಾರೆ. ಇದು ಯಾವ ರೀತಿ ಭಯಾನಕವಾಗಿರುತ್ತದೆ ಎಂದು ತಾಲಿಬಾನಿಗಳ ಕಾಲಿನ ಕೆಳಗೆ ಜೀವಿಸಿಯೇ ತಿಳಿದು ಕೊಳ್ಳಬೇಕಿದೆ. ಆದರೆ ನಾನು ಬದುಕಿರುವುದೇ ನನ್ನ ಅದೃಷ್ಟ’ ಎಂದಿದ್ದಾರೆ.ಅಫ್ಘಾನಿಸ್ತಾನದಲ್ಲಿ ದೊಡ್ಡ ದೊಡ್ಡ ಪದವಿ ಪಡೆದು ಉನ್ನತ ಹುದ್ದೆ ಏರಿರುವ ಸಹಸ್ರಾರು ಮಹಿಳೆಯರು ಇದ್ದಾರೆ. ಆದರೆ ಅವರೆಲ್ಲಾ ಈಗ ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಪ್ರಮಾಣಪತ್ರಗಳನ್ನು ಸುಡುತ್ತಿದ್ದಾರೆ. ಅಲ್ಲಿ ಹೇಗಿದೆ ಸ್ಥಿತಿ ಎಂದರೆ, ಮಹಿಳೆಯರಿಗೆ ಸಮಸ್ಯೆಯಾದರೆ ಪುರುಷ ವೈದ್ಯರನ್ನೂ ಭೇಟಿ ಆಗಲು ಆಗುವುದಿಲ್ಲ. ಮಹಿಳೆಯರು ಉದ್ಯೋಗ ಮಾಡಲು ಅವರು ಬಿಡುತ್ತಿಲ್ಲ. ಆದ್ದರಿಂದ ಮಹಿಳೆಯರಿಗೆ ಸಾವು ಬಿಟ್ಟು ಬೇರೇನೂ ಉಳಿದಿಲ್ಲ ಎಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು