ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಎರಡು ಹಂತದ ಗ್ರಾ.ಪಂ. ಚುನಾವಣೆಯ ಮತ ಎಣಿಕಾಕಾರ್ಯ ಜಿಲ್ಲೆಯ 12 ಕೇಂದ್ರದಲ್ಲಿ ಏಕಕಾಲದಲ್ಲಿ ಶಾಂತಿಯುತವಾಗಿ ನಡೆಯಿತು. ಕಾರವಾರ ಸೇಂಟ್ ಮೈಕಲ್ ಕಾನ್ವೇಂಟ್ ನಲ್ಲಿ ಕಾರವಾರದ ಒಟ್ಟೂ 18 ಪಂಚಾಯತ್ ಗಳ ಎಣಿಕೆ ನಡೆದಿದೆ.
ಕಾರವಾರದ ವಿವಿಧ ಗ್ರಾಪ ಪಂಚಾಯತ್ ಗಳಿಗೆ ಗಂಡ-ಹೆಂಡತಿ, ಹಾಲಿ ತಾಪಂ ಸದಸ್ಯರು, ಸಹೋದರರು ಸೇರಿದಂತೆ ಎಂಜಿನಿಯರಿಂಗ್ ಪದವೀಧರೆಯೂ ಸಹ ಈ ಬಾರಿ ಗೆಲುವಿನ ಮಾಲೆ ಧರಿಸಿದ್ದಾರೆ. ಅದರಂತೆ ಅನೇಕ ಗ್ರಾಪಂಗಳಿಗೆ ಹೊಸ ಮುಖಗಳಿಗೆ ಮತದಾರರು ಮಣೆ ಹಾಕಿದ್ದರೇ ವಿವಿಧ ಪಂಚಾಯತ್ ಗಳಿಗೆ ಈ ಹಿಂದೆ ಗೆಲುವು ಸಾಧಿಸಿದರೆ ಮತ್ತೇ ಗೆದ್ದು ಹರ್ಷ ವ್ಯಕ್ತಪಡಿಸಿದ್ದಾರೆ.
ಎಂಜಿನಿಯರ್ ಆಗಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಗೆಲುವು ಸಾಧಿಸಿದ್ದಾರೆ. ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತ್ನ ಸಾನ್ ಮುಡಗೇರಿ ವಾರ್ಡ್ವೊಂದರಲ್ಲಿ ಸ್ಪರ್ಧಿಸಿದ್ದ ವೆಲಿಂಡಾ ಡಿಸೋಜಾ ಎನ್ನುವ ಯುವತಿ 12 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇವರು ಕಾರವಾರದ ನೆವೆಲ್ ಬೇಸ್ ನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೆದ್ದು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಮುನ್ನುಡಿ ಹಾಕುವುದಾಗಿ ಹೇಳಿಕೊಂಡಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಇವರು ಅತಿ ಕಿರಿಯ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಸಿ ಯಶಸ್ಸು ಕಂಡಿದ್ದಾರೆ.
ಸಹೋದರರಿಬ್ಬರಿಗೆ ಗೆಲುವು: ಕಾರವಾರದ ಘಾಡಸಾಯಿ ಪಂಚಾಯತ್ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಸಹೋದರರಿಬ್ಬರು ಗೆಲುವು ಸಾಧಿಸಿದ್ದಾರೆ. ಘಾಡಸಾಯಿ ಪಂಚಾಯತ್ಗೆ ಸ್ಪರ್ಧಿಸಿದ್ದ ಬೋಳಶಿಟ್ಟಾ ವಾರ್ಡ್ನ ಗಿರೀಶ್ ಕೊಠಾರಕರ್ 181 ಮತ ಪಡೆದು 61 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಇವರು ಸತತ ಮೂರನೇ ಬಾರಿಗೆ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ವಿಜಯಶಾಲಿಯಾಗಿ ಹ್ಯಾಟ್ರಿಕ್ ಮಾಡಿದ್ದಾರೆ. ಅದರಂತೆ ಅವರ ಸಹೋದರ ಅವಿನಾಶ್ ಅಣ್ಣನ ಮಾರ್ಗದರ್ಶನದಲ್ಲೇ ಮೊದಲ ಸಲ ಚುನಾವಣಾ ಕಣಕ್ಕೆ ಇಳಿದು ಚೊಚ್ಚಲು ಗೆಲುವು ಸಾಧಿಸಿದ್ದಾರೆ. ಸಹೋದರ ಅವಿನಾಶ್ ಕೋಠಾರಕರ್ ಅವರು ಘಾಡಸಾಯಿ ಪಂಚಾಯತ್ ನ ಹಳಗೇಜೂಗ್ ಕ್ಷೇತ್ರಕ್ಕೆ ಸ್ಪರ್ಧಿಸಿ 221 ಮತಗಳನ್ನು ಪಡೆದು 19 ಮತಗಳ ಅಂತರದಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.
ಮಾಜಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಸೋಲಿಸಿದ ಪತಿ-ಪತ್ನಿಮಾಜಿ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕರನ್ನು ಸೋಲಿಸುವ ಮೂಲಕ ದಂಪತಿಗಳಿಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾ.ಪಂ.ನ ಕಿಲ್ಲೆ ವಾಡಾ ನಿಂದ ಸ್ಪರ್ಧಿಸಿದ್ದ ಸೂರಜ್ ದೇಸಾಯಿ 109 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚಿತ್ತಾಕುಲ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜು ತಾಂಡೇಲ್ ವಿರುದ್ಧ ಸ್ಪರ್ಧಿಸಿದ್ದ ಅವರು 440 ಮತಗಳನ್ನು ಪಡೆದಿದ್ದು, ರಾಜು ತಾಂಡೇಲ್ 331 ಮತಗಳನ್ನು ಪಡೆದುಕೊಂಡಿದ್ದಾರೆ. ಅದರಂತೆ ಸೂರಜ್ ದೇಸಾಯಿ ಪತ್ನಿ ಸ್ವಾತಿ ದೇಸಾಯಿ ಕೂಡ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಮಡಿವಾಳಶಿಟ್ಟಾ ವಾರ್ಡ್ ನಿಂದ ಆಯ್ಕೆಯಾಗಿದ್ದಾರೆ. ಒಟ್ಟು 311 ಮತಗಳನ್ನು ಪಡೆದಿದ್ದ ಸ್ವಾತಿ ಚಿತ್ತಾಕುಲ ಗ್ರಾ.ಪಂನ ಮಾಜಿ ಉಪಾಧ್ಯಕ್ಷೆ ದಿಲ್ಶಾದ್ ಶೇಖ್ ವಿರುದ್ಧ 231 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ದಿಲ್ಶಾದ್ ಶೇಖ್ 98 ಮತಗಳನ್ನು ಪಡೆದಿದ್ದಾರೆ. ಚಿತ್ತಾಕುಲದ ಬೇತುನಾಯ್ಕ ವಾಡದ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವಾತಿ ದೇಸಾಯಿ 5 ಮತಗಳಿಂದ ಸೋಲು ಅನುಭವಿಸಿದ್ದಾರೆ.
ತಾ.ಪಂ. ಸದಸ್ಯರಿಗೆ ಗೆಲುವು: ತಾಪಂ ಸದಸ್ಯರಾಗಿದ್ದ ಅಮದಳ್ಳಿಯ ಪುರುಷೋತ್ತಮ್ ಗೌಡ ಹಾಗೂ ಮುಡಗೇರಿ ಪಂಚಾಯತ್ ನ ಸುರೇಂದ್ರ ಗಾಂವಕಾರ್ ತಾಪಂನಿಂದ ಗ್ರಾಮ ಪಂಚಾಯತ್ ಗೆ ಸ್ಪರ್ಧಿಸಿದ್ದರು. ಅಮದಳ್ಳಿಯ ಪಂಚಾಯತ್ ನ ಸಾಣಿಮಕ್ಕಿ ಕ್ಷೇತ್ರದಿಂದ ಪುರಷೋತ್ತಮ್ ಗೌಡ ಸ್ಪರ್ಧಿಸಿದ್ದರು. ಅದರಂತೆ ಮುಡಗೇರಿ ಪಂಚಾಯತ್ ನ ಅಂಗಡಿಯಿಂದ ಸುರೇಂದ್ರ ಗಾಂವಕಾರ್ ಗೆಲುವು ಸಾಧಿಸಿದ್ದಾರೆ.