‘ಭ್ರಷ್ಟಾಧ್ಯಕ್ಷ’ ಬಹುಕೋಟಿ ಮೊತ್ತದ ಬಹುಭಾಷಾ ರಾಜಕೀಯ ಚಲನಚಿತ್ರದ ಚಿತ್ರೀಕರಣ ಆರಂಭಗೊಂಡಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದು ಕಾಂಗ್ರೆಸ್ ನಾಯಕರೇ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟ್ವೀಟಾಸ್ತ್ರ ಮುಂದುವರೆಸಿರುವ ರಾಜ್ಯ ಬಿಜೆಪಿ , ಭ್ರಷ್ಟಾಧ್ಯಕ್ಷ ರಾಜಕೀಯ ಚಿತ್ರದ ನಿರ್ಮಾಣ, ನಿರ್ದೇಶನ ಸಿದ್ದರಾಮಯ್ಯ, ತಾರಾಗಣ ಉಗ್ರಪ್ಪ, ಸಲೀಂ, ಅಕ್ರಮ ಸಂಪಾದನೆಯ ಅಸಲಿ ಕಥೆಯ ಟ್ರೈಲರ್ ಕೆಪಿಸಿಸಿ ಕಚೇರಿಯಿಂದಲೇ ಬಿಡುಗಡೆಯಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಬಹುಭಾಷಾ, ಬಹುಕೋಟಿ, ಬಹುತಾರಾಗಣದ ಚಿತ್ರಕ್ಕೆ ಕಾಂಗ್ರೆಸ್ ನಾಯಕರೇ ಪಕ್ಷದ ಕಚೇರಿಯಲ್ಲಿ ಮುಹೂರ್ತ ಮಾಡಿದ್ದಾರೆ. ನಿಮ್ಮ ಹೊಸ 27 ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡಬಹುದು. ಸಿದ್ದರಾಮಯ್ಯ ಹೆಣೆದ ಡಿಕೆಶಿ ಪದಚ್ಯುತಿ ಎಂಬ ಆಟ ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಟೀಕಿಸಿದೆ.
ಸಲೀಂ ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಿ ಏನು ಪ್ರಯೋಜನ? ಅವರು ಹೇಳಿದ್ದು ಸತ್ಯ. ಅದಕ್ಕಾಗಿಯೇ ಈ ಹಿಂದೆ ತೆರಿಗೆ ಸಂಸ್ಥೆಗಳು ದಾಳಿ ಮಾಡಿದ್ದು, ಅಕ್ರಮ ಸಂಪಾದನೆಯ ಕಾರಣದಿಂದ ತಿಹಾರ್ ಜೈಲು ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಓಡಾಡುತ್ತಿರುವುದು. ಸ್ವಪಕ್ಷದವರೇ ಪಕ್ಷದ ಕಚೇರಿಯಲ್ಲಿ ಮಾಡಿದ ಆರೋಪದಿಂದಲಾದರೂ ಡಿಕೆಶಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹಿಸಿದೆ.