ಶಿವಮೊಗ್ಗ, : ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಸರಿಸುಮಾರು ಒಂದು ತಿಂಗಳ ಕಾಲ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು, ಮತ್ತೆ ಸಕ್ರಿಯ ರಾಜಕಾರಣದತ್ತ ಮುಖ ಮಾಡಿದ್ದಾರೆ. ಗಣೇಶ ಹಬ್ಬದ ನಂತರ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುವ ಘೋಷಣೆ ಮಾಡಿರುವುದು.ಇದು ಬಿಜೆಪಿ ಪಾಳೇಯದಲ್ಲಿ ಸಂಚಲನ ಸೃಷ್ಟಿಸಿದೆ.
ಬಿ.ಎಸ್.ವೈ. ಈ ನಡೆಯು ಪಕ್ಷದ ವರಿಷ್ಠರಿಗೆ, ಅದರಲ್ಲಿಯೂ ಅವರ ವಿರೋಧಿ ಪಾಳೇಯಕ್ಕೆ ತಲೆನೋವಾಗಿ ಪರಿಣಮಿಸಿದೆ. ನುಂಗಲಾರದ ಬಿಸಿ ತುಪ್ಪದಂತಾಗಿದೆ. ಶತಾಯಗತಾಯ ಪಕ್ಷದ ಚಟುವಟಿಕೆಗಳಿಂದ ಬಿ.ಎಸ್.ವೈ. ರನ್ನು ದೂರವಿಡುವ ತೆರೆಮರೆಯ ಯತ್ನ ಬಿರುಸುಗೊಳಿಸಲಾಗಿದೆ.
ಈ ಕಾರಣದಿಂದ ಬಿ.ಎಸ್.ವೈ. ನಕಾರದ ಹೊರತಾಗಿಯೂ, ಮತ್ತೆ ರಾಜ್ಯಪಾಲ ಹುದ್ದೆಯ ಆಫರ್ ಮುಂದಿಡಲಾಗಿದೆ. ಆಪ್ತರ ಮೂಲಕ ಮನವೊಲಿಸುವ ಯತ್ನ ನಡೆಸಲಾಗುತ್ತಿದೆ. ಈ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ವಹಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ವೇಳೆಯೇ, ರಾಜ್ಯಪಾಲ ಹುದ್ದೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯದಲ್ಲಿಯೇ ಇದ್ದು ಪಕ್ಷ ಸಂಘಟನೆ ಮಾಡುತ್ತೆನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಬಿಎಸ್ವೈ ಶಪಥ ಮಾಡಿದ್ದಾರೆ.
ಇಷ್ಟೆಲ್ಲದರ ಹೊರತಾಗಿಯೂ ಪಕ್ಷದಲ್ಲಿನ ಬಿ.ಎಸ್.ವೈ. ವಿರೋಧಿ ಪಾಳೇಯವು, ಅವರ ರಾಜ್ಯ ಪ್ರವಾಸಕ್ಕೆ ತಡೆ ಹಾಕಲು ಹರ ಸಾಹಸ ನಡೆಸುತ್ತಿದೆ. ವರಿಷ್ಠರ ಮೂಲಕ ಸಂದೇಶ ರವಾನಿಸಲು ಮುಂದಾಗಿದೆ. ಈ ಕಾರಣದಿಂದ ಪ್ರವಾಸ ಆರಂಭಿಸುವುದಕ್ಕೂ ಮುನ್ನವೇ ಬಿ.ಎಸ್.ವೈ. ರನ್ನು ದೆಹಲಿಗೆ ಕರೆಯಿಸಿಕೊಂಡು, ಅವರ ಅಭಿಪ್ರಾಯ ಆಲಿಸಿ ನಿರ್ಧಾರ ಕೈಗೊಳ್ಳಲು ವರಿಷ್ಠರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಎಡರುತೊಡರು: ಬಿ.ಎಸ್.ವೈ. ರಾಜ್ಯ ಪ್ರವಾಸ ಆರಂಭಿಸಿದರೆ ಪಕ್ಷ ಮಾತ್ರವಲ್ಲ, ಸರ್ಕಾರದ ಮೇಲೆಯೂ ಪರಿಣಾಮ ಬೀರಲಿದೆ. ಹಲವು ಎಡರುತೊಡರು ಸೃಷ್ಟಿಯಾಗಲಿದೆ. ಭವಿಷ್ಯದಲ್ಲಿ ಇದು ಹಲವು ರೀತಿಯ ರಾಜಕೀಯ ಹೈಡ್ರಾಮಾಗಳಿಗೂ ಆಸ್ಪದವಾಗುವ ಸಾಧ್ಯತೆಗಳಿವೆ. ಈ ಕಾರಣದಿಂದ ಅವರನ್ನು ರಾಜ್ಯ ರಾಜಕಾರಣದಿಂದ ದೂರವಿಡುವ ಸನ್ನಾಹ ಪಕ್ಷದಲ್ಲಿನ ಅವರ ವಿರೋಧಿ ಪಾಳೇಯದ್ದಾಗಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ವರಿಷ್ಠರ ಒತ್ತಡಕ್ಕೆ ಮಣಿದು ಬಿ.ಎಸ್.ವೈ. ರಾಜ್ಯಪಾಲ ಹುದ್ದೆ ಒಪ್ಪಿಕೊಂಡರೆ, ಅವರ ರಾಜೀನಾಮೆಯಿಂದ ತೆರವಾಗುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ವೇಳೆಯೇ, ಪುತ್ರ ವಿಜಯೇಂದ್ರಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಬಿ.ಎಸ್.ವೈ. ಪಕ್ಷದ ವರಿಷ್ಠರ
ಮುಂದಿಟ್ಟಿದ್ದರು ಎಂಬ ವದಂತಿ ರಾಜಕೀಯ ವಲಯದಲ್ಲಿ ಹಬ್ಬಿತ್ತು. ಆದರೆ ವಿಜಯೇಂದ್ರಗೆ ಸಚಿವ ಸ್ಥಾನ ಲಭ್ಯವಾಗಿರಲಿಲ್ಲ. ಈ ಎಲ್ಲ ಕಾರಣಗಳಿಂದ, ಬಿ.ಎಸ್.ವೈ. ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವ ಹಾಗೂ ಯಾವುದೇ ಸಾಂವಿಧಾನಿಕ ಹುದ್ದೆ ಒಪ್ಪಿಕೊಳ್ಳದಿರುವ ನಿಲುವು ತಳೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.