ಕಾರವಾರ: ಸಂಘಟನೆ, ಹೋರಾಟ, ಸೇವೆಯನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡು ಸಮಾಜವಾದಿ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ನೆಲೆಯಲ್ಲಿ ಸುಸ್ಥಿತ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್ ಅವರಿಗೆ ಮತದಾತರು ಸಂಪೂರ್ಣವಾಗಿ ಬೆಂಬಲ ನೀಡಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾದ್ಯ ವಿ. ಪಿ. ಮನವಿ ಮಾಡಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದ ವಿಧಾನ ಪರಿಷತ್ತಿಗೆ ಅನತ್ಯ ಇತಿಹಾಸವಿದೆ. ವಿಧಾನ ಪರಿಷತ್ತಿನ ಮೂಲ ಉದ್ದೇಶ ಕೆಲವು ಅಧಿಕಾರೇತರ ಮತ್ತು ಪ್ರಾಯೋಗಿಕವಾಗಿ ನಿರ್ದಿಷ್ಟ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ತಜ್ಞರನ್ನು ಆರಿಸಿ, ನೀತಿ-ಕಾನೂನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಾಗ ಆಳವಾಗಿ ಚರ್ಚಿಸಿ ಅತ್ಯುತ್ತಮ ಕಾನೂನುಗಳನ್ನು ರೂಪಿಸಬೇಕು.
ಇಂಥ ಘನ ಉದ್ದೇಶವನ್ನು ಹೊಂದಿರುವ ವಿಧಾನ ಪರಿಷತ್ತಿಗೆ ಆಯ್ಕೆಯಾದ ಸದಸ್ಯರು ಪದವೀಧರ, ಶಿಕ್ಷಕರ ಮತ್ತು ನಿರುದ್ಯೋಗ ಪದವೀಧರರ ಹಿತ ಕಾಯುವ ಜೊತೆಗೆ ರಾಜ್ಯ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕ ಬಲಾಢ್ಯವಾದ ಮತ್ತು ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯ ಕರ್ನಾಟಕ ಕಟ್ಟಿಕೊಳ್ಳಲು ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕಿದೆ.
ಕಳೆದ ಎರಡು-ಮೂರು ದಶಕಗಳಿಂದ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು, ಮತದಾನ ಮಾಡಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಮತ್ತು ಪದವೀಧರರ ಹಿತ ಕಾಪಾಡಿದ್ದಾರೆಯೇ ಎನ್ನುವ ಪ್ರಶ್ನೆ ವ್ಯಕ್ತವಾಗಿದೆ. ಪದವೀಧರರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಮುಖಾಂತರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನೇ ಪ್ರಧಾನವನ್ನಾಗಿಸಿಕೊಂಡಿರುವ ಸಂವಿಧಾನವು ಪರಿಷತ್ತಿನ ಪದವೀಧರ ಕ್ಷೇತ್ರಗಳು ಪಕ್ಷಾತೀತವಾಗಿರಬೇಕು ಎಂಬ ಉದ್ದೇಶದಿಂದ ಪದವೀಧರ ಕ್ಷೇತ್ರದ ಚುನಾವಣೆಯನ್ನು ಪಕ್ಷಾತೀತವಾಗಿ ವಿಷಯಾಧಾರಿತ ನೆಲೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಆದ್ಯತೆಯ ಮೇಲೆ ಮತದಾನ ಮಾಡುವ ಪದ್ಧತಿ ರೂಪಿಸಿದೆ ಎಂದರು.
ಇಂದು ಕನ್ನಡ ಶಾಲೆಗೆ ಉಳಿವಿಗೆ ಹೋರಾಟವಾಗಬೇಕಾಗಿದೆ. ಜೊತೆಗೆ ನಿರುದ್ಯೋಗ ಪದವೀಧರರ, ಸೇವೆಯಲ್ಲಿರುವ ನೌಕರರ ಶಿಕ್ಷಕರ ಗುರುತರವಾದ ಜ್ವಲಂತ ಸಮಸ್ಯೆಗಳನ್ನು ತರಿವಾಗಿ ಬಗೆಹರಿಸುವ ಮೂಲಕ ಬಲಿಷ್ಠ ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ಭದ್ರತೆಯ ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಿದೆ. ಪದವಿಧರ ಕ್ಷೇತ್ರದಿಂದ ಆಯ್ಕೆಯಾಗುವ ಪ್ರತಿನಿಧಿ ಪಕ್ಷಾತೀತವಾಗಿದ್ದರೆ ಮಾತ್ರ ಇದು ಸಾಧ್ಯ. ಈ ನಿಟ್ಟಿನಲ್ಲಿ ಪಧವಿಧರ ಕ್ಷೇತ್ರದಿಂದ ಸ್ಪರ್ಧಿಸುವತ್ತಿರುವ ಸ್ವತಂತ್ರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಎಲ್ಲ ಮತದಾರರ ಬೆಂಬಲ ನೀಡಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ. ಪಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹರಿಪ್ರಸಾದ್ ಎ. ಸಿ., ಎಸ್ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷೆ ಶಾಂತಾಬಾಯಿ ಮಂಡರಗಿ, ಕಾರ್ಯದರ್ಶಿ ಬೀರಣ್ಣ ನಾಯ್ಕ, ಎಸ್ಡಿಎಂಸಿ ಸಮನ್ವಯ ವೇದಿಕೆಯ ಧಾರವಾಡ ಅಧ್ಯಕ್ಷ ಈರಣ್ಣ ಮುರಗೋಡು ಇದ್ದರು.