ಕಲಬುರ್ಗಿ: ನವವಿವಾಹಿತ ದಂಪತಿಯೊಂದು ಹನಿಮೂನ್ ಗೆ ತೆರಳುವ ಬದಲು ಕಂಬಿ ಎಣಿಸುತ್ತಿರುವ ಘಟನೆಯು ಇಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾದ ಗುತ್ತಿಗೆದಾರ ವಿಜಯಕುಮಾರ್ ಮತ್ತು ಎಂಬಿಎ ವಿದ್ಯಾರ್ಥಿನಿ ನಾಗರತ್ನ ಯಾನೆ ನಿಶಾ ಎಂಬಾಕೆಯೇ ಈಗ ಕಂಬಿ ಎಣಿಸುತ್ತಿರುವವರು.
ಇವರು ಪ್ರೀತಿಸಿ ಮದುವೆಯಾಗಿ ಬಳಿಕ ದರೋಡೆಗೆ ಇಳಿದಿರುವುದೇ ಇವರ ಇಂದಿನ ಸ್ಥಿತಿಗೆ ಕಾರಣ. ಜುಲೈ 10ರಂದು ಈ ದಂಪತಿ ಕಾರಿನಲ್ಲಿ 55ರ ಹರೆಯದ ಮಹಿಳೆ ಸುಷ್ಮಾ ಎಂಬವರಿಗೆ ಗಂಗಾ ಆಸ್ಪತ್ರೆ ಬಳಿಯಿಂದ ಡ್ರಾಪ್ ಕೊಡುವುದಾಗಿ ಹೇಳಿ ಕುಳ್ಳಿರಿಸಿ ಸಣ್ಣೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಕಲಿ ಪಿಸ್ತೂಲ್ ತೋರಿಸಿ ಸುಮಾರು 150 ಗ್ರಾಂ ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಈ ಬಗ್ಗೆ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿ ದರೋಡೆಕೋರ ದಂಪತಿಯ ಸೆರೆ ಹಿಡಿದು ಕಂಬಿ ಹಿಂದೆ ಅಟ್ಟಿದೆ. ದಂಪತಿಯಿಂದ 4.47 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ನಕಲಿ ಪಿಸ್ತೂಲ್ ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರ್ಗಿ ಎಸ್ ಪಿ ಶಶಿಕುಮಾರ್ ತಿಳಿಸಿದ್ದಾರೆ.