ಶ್ರೀರಂಗಪಟ್ಟಣ: ಕೃಷ್ಣರಾಜಸಾಗರ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ್ದರಿಂದ ಗೌತಮ ಕ್ಷೇತ್ರದಲ್ಲಿ ಶ್ರೀ ಗಜಾನನ ಸ್ವಾಮೀಜಿ ಜೊತೆ ಆಶ್ರಯ ಪಡೆದಿದ್ದ ಯುವಕನನ್ನು ಆತನ ಕುಟುಂಬದವರೇ ರಕ್ಷಿಸಿದ್ದಾರೆ.
ಪಾಂಡವಪುರ ತಾಲೂಕಿನ ಜಯಂತಿನಗರದ ಚೇತನ್ ಎಂಬ ಯುವಕನನ್ನು ಆತನ ತಾಯಿ ಹಾಗೂ ಕುಟುಂಬಸ್ಥರು ರಕ್ಷಣೆ ಮಾಡಿದ್ದಾರೆ.
ತನ್ನ ಸ್ನೇಹಿತನ ಹುಟ್ಟುಹಬ್ಬವನ್ನು ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದಲ್ಲಿ ಆಚರಿಸಲು ಚೇತನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಶನಿವಾರ ತೆರಳಿದ್ದರು. ಆದರೆ ಕೆ.ಆರ್.ಎಸ್.ನಿಂದ ನದಿಗೆ ದಿಢೀರ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಈತನ ಇಬ್ಬರು ಸ್ನೇಹಿತರು ಈಜಿ ದಡ ಸೇರಿದ್ದರು. ಆದರೆ ಈಜು ಬಾರದ ಚೇತನ್ ಗೌತಮ ಕ್ಷೇತ್ರದಲ್ಲೇ ಶ್ರೀ ಗಜಾನನ ಸ್ವಾಮೀಜಿ ಜೊತೆ ಸೇರಿಕೊಂಡಿದ್ದನು.
ಈ ವಿಚಾರ ತಿಳಿದ ಚೇತನ್ ತಾಯಿ ಸ್ಥಳೀಯ ಮೀನುಗಾರರ ಸಹಾಯ ಪಡೆದು ತಮ್ಮ ಮಗನನ್ನು ಆಶ್ರಮದಿಂದ ವಾಪಸ್ ಕರೆಸಿಕೊಂಡರು. ನದಿಯಲ್ಲಿ ಇನ್ನೂ ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ಆತಂಕಕ್ಕೆ ಒಳಗಾಗಿತ್ತು.
ಮೀನುಗಾರರು ಆಶ್ರಮಕ್ಕೆ ತೆಪ್ಪ ಮೂಲಕ ತೆರಳಿ, ಅಲ್ಲಿದ್ದ ಚೇತನ್ನನ್ನು ಕರೆದುಕೊಂಡು ಬರುತ್ತಿದ್ದಂತೆ ಆತನ ತಾಯಿ ಮಗನನ್ನು ಕಂಡು ಭಾವುಕರಾದರು.
ಇನ್ನು ಯುವಕ ಚೇತನ್ ಹೇಳುವ ಪ್ರಕಾರ, ಕಾವೇರಿ ನದಿಯಲ್ಲಿ ಇನ್ನೂ ನೀರು ಬಂದರೂ ಆಶ್ರಮಕ್ಕೆ ಏನೂ ಆಗುವುದಿಲ್ಲ. ಸ್ವಾಮೀಜಿ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾನೆ.