ಮಾಗಡಿ: ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಮಂಚನಬೆಲೆ ಜಲಾಶಯದಿಂದ ನೀರು ಬಿಡುವಂತೆ ರಾಮನಗರ ಮತ್ತು ಕನಕಪುರ ವ್ಯಾಪ್ತಿಯ ಜನ ಒತ್ತಾಯಿಸುತ್ತಾ ಬಂದಿದ್ದು, ಕೊನೆಗೂ ಅರ್ಕಾವತಿ ಕಾಲುವೆ ಮೂಲಕ ನೀರನ್ನು ಬಿಡಲಾಗಿದ್ದು ಜನ ಹರ್ಷ ವ್ಯಕ್ತಪಡಿಸುತ್ತಿದ್ದ ಬೆನ್ನಲ್ಲೇ ಜಲಾಶಯದಿಂದ ನೀರು ಬಿಟ್ಟಿರುವುದಕ್ಕೆ ಸ್ಥಳೀಯ ಶಾಸಕ ಬಾಲಕೃಷ್ಣ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಿಲ್ಲಿಸಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ರಾಮನಗರದಲ್ಲಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಮನಗರ ಮತ್ತು ಕನಕಪುರಕ್ಕೆ ಕುಡಿಯವ ನೀರಿಗಾಗಿ ಮಂಚನಬೆಲೆ ಜಲಾಶಯದಿಂದ ನೀರನ್ನು ಬಿಡಬೇಕೆಂಬ ತೀರ್ಮಾನ ಕೈಗೊಳ್ಳಲಾಗಿತ್ತು ಆದರಂತೆ ಮೊದಲ ಹಂತವಾಗಿ ಬಿಡಲಾಗಿತ್ತು. ಇದೀಗ ಮತ್ತೆ ಎರಡನೇ ಹಂತವಾಗಿ ಎರಡು ದಿನಗಳ ಕಾಲ ಮಂಚನಬೆಲೆ ಜಲಾಶಯದಿಂದ ನೀರನ್ನು ಅರ್ಕಾವತಿ ಕಾಲುವೆ ಮೂಲಕ ಬಿಡಲಾಗಿದೆ.
ಈ ನಡುವೆ ರಾಮನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಾರಣ ನೀರು ಬಿಡಲು ಒಪ್ಪಿಗೆ ನೀಡಲಾಗಿದೆ ಮಂಚನಬೆಲೆಯಲ್ಲಿ ಇನ್ನು 2 ವರ್ಷಗಳಿಗೆ ಆಗುವಷ್ಟು ನೀರಿದ್ದು ಹೆಚ್ಚುವರಿ ನೀರನ್ನು ಬಿಡಲು ಮಾತ್ರ ಒಪ್ಪಿಗೆ ನೀಡಿದ್ದು, ಇನ್ನು 15 ದಿನಗಳ ಒಳಗೆ ಮತ್ತೆ ಮಂಚನಬೆಲೆ ಜಲಾಶಯದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಮಂಚನಬೆಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎಂಬುದುದನ್ನು ತಿಳಿಸಿ ಹೆಚ್ಚುವರಿ ನೀರನ್ನು ಮಾತ್ರ ಬಿಡಬೇಕು. ಅಲ್ಲಿಯವರೆಗೂ ಡ್ಯಾಂ ನಿಂದ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಶಾಸಕರಾದ ಬಾಲಕೃಷ್ಣ ಅವರು ನೀರಾವರಿ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಮಂಚನಬೆಲೆ ಜಲಾಶಯದಿಂದ 33 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಿದ್ದು ಮಾಗಡಿ ಪಟ್ಟಣಕ್ಕೆ ಮಂಚನಬೆಲೆ ನೀರನ್ನು ಅವಲಂಬಿಸಿದ್ದರು. ಮಳೆ ಬರದಿದ್ದರೂ 2 ವರ್ಷಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಬೇಕಾಬಿಟ್ಟಿ ನೀರನ್ನು ಬಿಟ್ಟರೆ ಮುಂದೆ ಮಾಗಡಿ ತಾಲೂಕಿನವರಿಗೆ ನೀರಿನ ಸಮಸ್ಯೆಯಾದರೆ ಯಾರನ್ನು ಕೇಳಬೇಕು ನೀರು ಬಿಡುವ ಮುನ್ನ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ಬಿಡಬೇಕು ಇಲ್ಲವಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದೆಲ್ಲದರ ಮಧ್ಯೆ ರಾಮನಗರ ಜಿಲ್ಲಾಧಿಕಾರಿ ಡಾ.ಬಿ.ಆರ್.ಮಮತಾ ಅವರು ಮಾರ್ಚ್ ತಿಂಗಳಲ್ಲಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಮನಗರ ಮತ್ತು ಕನಕಪುರಕ್ಕೆ ಕುಡಿಯುವ ನೀರಿಗಾಗಿ ಮಂಚನಬೆಲೆ ಜಲಾಶಯದಿಂದ ನೀರು ಬಿಡಲು ತೀರ್ಮಾನ ಕೈಗೊಳ್ಳಲಾಗಿತ್ತು ಆದರಂತೆ ನೀರು ಬಿಡಲಾಗಿದೆ. ನೀರು ಬಿಡುವುದಕ್ಕೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ಅಧಿಕಾರಿಗಳಿಗೂ ಒತ್ತಡ ತಂದಿಲ್ಲ. ಮಂಚನಬೆಲೆ ಜಲಾಶಯದಿಂದ ನೀರು ಬಿಡುವ ವಿಚಾರಕ್ಕೂ ನನಗೆ ಸಂಬಂಧವಿಲ್ಲ ಈಗ ನೀರನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.