ಮೈಸೂರು: ತಂಗಿ ಮದುವೆಗೆ ಹಣ ಹೊಂದಿಸಲು ನಟ ಪುನೀತ್ ರಾಜ್ ಕುಮಾರ್ ಆಪ್ತ ಎಂದು ಹೇಳಿಕೊಂಡು ವಂಚಕನೊಬ್ಬ ಜನರಿಂದ ಲಕ್ಷಾಂತರ ರೂಪಾಯಿ ಹಣ ತೆಗೆದುಕೊಂಡು ವಂಚಿಸಿರುವ ಘಟನೆ ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಶ್ರೀನಿವಾಸನಗರದ ರವಿ(೨೮) ಅಮಾಯಕರನ್ನ ವಂಚಿಸಿ ಪರಾರಿಯಾದ ಖದೀಮ. ಮೂಲತಃ ಬನ್ನೂರಿನ ಅಂಕನಹಳ್ಳಿಯ ರವಿ ಕಳೆದ ೨೦ವರ್ಷಗಳಿಂದ ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾನೆ. ಕಳೆದ ವರ್ಷ ಮೈಸೂರು ತಾಲ್ಲೂಕಿನ ಕುಪ್ಯಾ ಗ್ರಾಮಕ್ಕೆ ಬಂದ ರವಿ ಮೊದಲು ತಮ್ಮ ದೂರದ ಸಂಬಂಧಿಕರಾದ ರಮೇಶ್ ಅವರನ್ನ ಪರಿಚಯಿಸಿಕೊಂಡ. ಗರಿಗರಿ ಬಟ್ಟೆ, ಕೊರಳು ಹಾಗೂ ಕೈಗಳಲ್ಲಿ ಚಿನ್ನದ ಆಭರಣಗಳನ್ನ ಧರಿಸಿ ಶೋಅಪ್ ಮಾಡಿದ ರವಿ ತಾನು ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದೀನಿ ಅಂತ ನಂಬಿಸಿದ್ದಾನೆ. ರವಿಯ ಶ್ರೀಮಂತಿಕೆಯ ಮಾತುಗಳನ್ನ ನಂಬಿದ ರಮೇಶ್ ಮನೆಗೆ ಕರೆತಂದು ಕ್ಲೋಸ್ ಆಗಿ ಮಾತನಾಡಿಸಿದ್ದಾರೆ.
ಇದೇ ವೇಳೆ ರವಿ ತಂಗಿ ಶೃತಿ ಮದುವೆ ಫಿಕ್ಸ್ ಆಗಿದೆ. ಮದುವೆ ಖರ್ಚಿಗೆ ಹಣ ಹೊಂದಿಸಲು ಹಾಕಿದ ಸ್ಕೆಚ್ ಗೆ ಮೊದಲು ರಮೇಶ್ ಬಲಿಯಾಗಿದ್ದಾರೆ. ರಮೇಶ್ ಅವರ ಪುತ್ರ ಗಿರೀಶ್ ಗೆ ತನ್ನ ಪ್ರಭಾವ ಬೀರಿ ಕೆಲಸ ಕೊಡಿಸುವ ಆಮಿಷವೊಡ್ಡಿದ ರವಿ ಮದುವೆಗಾಗಿ ಲಕ್ಷ ಲಕ್ಷಗಟ್ಟಲೆ ಹಣ ಜೊತೆಗೆ ಪತ್ನಿ ಉಮಾರಿಂದ ಚಿನ್ನ ಪಡೆದುಕೊಂಡಿದ್ದಾನೆ. ಇದೇ ಅವಧಿಯಲ್ಲಿ ರಮೇಶ್ ಮೂಲಕ ಗುರುಮೂರ್ತಿ ಎಂಬುವರನ್ನ ಪರಿಚಯಿಸಿಕೊಂಡು ಪುನೀತ್ ರಾಜ್ ಕುಮಾರ್ ಕಾರಿಗೆ ಡ್ರೈವರ್ ಮಾಡುವುದಾಗಿ ಆಮಿಷ ತೋರಿಸಿ ಸುಮಾರು 5೦ ಗ್ರಾಂ ಚಿನ್ನದ ಸರ ಪೀಕಿದ್ದಾನೆ. ಈತನ ಐಶಾರಾಮಿ ಗೆಟಪ್ ಗೆ ಹಾಗೂ ಆಗಾಗ ಪುನೀತ್ ರಾಜ್ ಕುಮಾರ್ ಹೆಸರು ಹೇಳುತ್ತಾ ಅವರೊಂದಿಗೆ ಚಿತ್ರರಂಗದ ಕೆಲವು ವ್ಯವಹಾರದ ಆಸೆ ತೋರಿಸಿದ ರವಿ ಟ್ರಾವೆಲ್ಸ್ ಮಾಲೀಕರಾದ ಜೆರ್ರಿ ಎಂಬುವರ ಬಳಿ ಒಂದು ಲಕ್ಷ ಪಡೆದಿದ್ದಾನೆ.
ತಂಗಿ ಮದುವೆಗಾಗಿ ಕಲ್ಯಾಣಮಂಟಪಕ್ಕೆ ಹಣ ನೀಡಲು ರಮೇಶ್ ಪುತ್ರ ಗಿರೀಶ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿ ಆತನ ಚೆಕ್ ಗಳನ್ನ ನೀಡಿ ಟೋಪಿ ಹಾಕಿದ್ದಾನೆ. ಇಷ್ಟಕ್ಕೇ ನಿಲ್ಲದ ರವಿಯ ಕುತಂತ್ರ ವಿಡಿಯೋ ಗ್ರಾಫರ್ ಕಿರಣ್ ಎಂಬುವರಿಗೂ ಸಹ ಪುನೀತ್ ರಾಜ್ ಕುಮಾರ್ ಬಳಿ ಆರ್ಡರ್ ಗಳನ್ನ ಕೊಡಿಸುವ ಆಮಿಷ ತೋರಿಸಿ ಮದುವೆ ಕವರೇಜ್ ಮಾಡಿಸಿಕೊಂಡು ಕೈ ಕೊಟ್ಟಿದ್ದಾನೆ. ಪ್ಲವರ್ ಡೆಕೋರೇಷನ್ ಮಾಡುವ ಪವನ್ ಎಂಬುವರಿಗೂ ಇದೇ ಕಹಿ ಅನುಭವವಾಗಿದೆ. ಪುನೀತ್ ರಾಜ್ ಕುಮಾರ್ ಹೆಸರು ಬಳಸಿದ ರವಿ ನಾಲ್ಕಾರು ಮಂದಿಯಿಂದ ಲಕ್ಷಾಂತರ ರೂಪಾಯಿ ಪಡೆದು ತನ್ನ ತಂಗಿ ಮದುವೆಯನ್ನ ಮೇ 1 ಮತ್ತು 2 ರಂದು ಮದುವೆ ಮುಗಿಯುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾನೆ.
ಮದುವೆ ನಂತರ ರವಿ ನಾಪತ್ತೆಯಾದಾಗಲೇ ತಾವು ಮೋಸ ಹೋಗಿರುವುದು ಖಚಿತವಾಗಿದೆ. ಬೆಂಗಳೂರಿನ ಮನೆಯಲ್ಲೂ ರವಿ ಕೈಗೆ ಸಿಗುತ್ತಿಲ್ಲ. ಮೈಸೂರಿನತ್ತ ತಲೆಯೂ ಹಾಕುತ್ತಿಲ್ಲ. ಈ ಸಂಬಂಧ ಬನ್ನೂರು ಠಾಣೆಗೆ ದೂರು ನೀಡಿದ್ದು ಪೊಲೀಸರು ಎನ್ ಸಿಆರ್ ದಾಕಲಿಸಿಕೊಂಡಿದ್ದು ವಂಚನೆಯ ಬಗ್ಗೆ ನಿಮ್ಮ ಬಳಿ ಚೆಕ್ ಇದೆ. ನ್ಯಾಯಾಲಯದಲ್ಲಿ ದೂರು ದಾಖಲಿಸಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.