ಕಾರವಾರ ; ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ ಅವರ ಸಾಧನೆಗೆ ಜಿಲ್ಲೆಯ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಅಥ್ಲೆಟಿಕ್ ಕೋಚ್ ಕಾಶೀನಾಥ ನಾಯ್ಕ ಅವರ ಶ್ರಮ ಅಪಾರವಾದುದು.
ಕಾಶೀನಾಥ ಅವರು ಭಾರತೀಯ ಅಥ್ಲೆಟಿಕ್ಸ್ ತಂಡದ ತರಬೇತುದಾರರಾಗಿದ್ದರು. ಈ ವೇಳೆ ಎರಡು ವರ್ಷಗಳ ಕಾಲ ನೀರಜ್ಗೆ ತರಬೇತಿ ನೀಡಿದ್ದ ಅವರು ಜಾವೆಲಿನ್ ಎಸೆತದ ಉತ್ಕೃಷ್ಟ ಕೌಶಲಗಳನ್ನು ಹೇಳಿಕೊಟ್ಟಿದ್ದರು.ಭಾರತೀಯ ಸೈನ್ಯದಲ್ಲಿರುವ ನೀರಜ್ 2015 ರಿಂದ 2017ರ ಅವಧಿ ವರೆಗೆ ಪಟಿಯಾಲಾದಲ್ಲಿ ಜಾವೆಲಿನ್ ಎಸೆತದ ತರಬೇತಿ ಪಡೆದುಕೊಂಡಿದ್ದರು. ಪ್ರಸ್ತುತ ಪುಣೆ ಆರ್ಮಿ ಸ್ಪೋರ್ಟ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತುದಾರರಾಗಿರುವ ಕಾಶೀನಾಥ್ ಅವರು ಶಿಷ್ಯನ ಸಾದನೆಗೆ ಹೆಮ್ಮೆ ಮತ್ತು ಸಂತಸ ಪಟ್ಟಿದ್ದಾರೆ. ನೀರಜ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಎರಡು ವರ್ಷ ತರಬೇತಿ ನೀಡಿದ್ದೆ ಎಂಬುದೇ ನನ್ನ ಪಾಲಿಗೆ ಹೆಮ್ಮೆಯ ವಿಷಯ’ ಎಂದರು.
‘ಒಲಿಂಪಿಕ್ಗೆ ತೆರಳುವ ಎರಡು ತಿಂಗಳು ಮುನ್ನ ಪುಣೆಗೆ ಬಂದಿದ್ದ ನೀರಜ್ ಉತ್ತಮವಾಗಿ ಜಾವೆಲಿನ್ ಎಸೆತದ ಬಗ್ಗೆ ಕೌಶಲ್ಯದ ಕುರಿತು ಕೇಳಿ ತಿಳಿದುಕೊಂಡಿದ್ದರು. ಅದಕ್ಕೂ ಮುನ್ನ ಅವರು ಸ್ವೀಡನ್ನಲ್ಲಿ ತರಬೇತಿ ಪಡೆದು ಬಂದಿದ್ದರು. ಪ್ರತಿ ಹಂತದಲ್ಲೂ ಮತ್ತಷ್ಟು ದೂರ ಎಸೆಯುವ ಬಗ್ಗೆ ತಿಳಿಹೇಳಿದ್ದೆ. ಅಂತಿಮ ಘಟ್ಟಕ್ಕೆ ತಲುಪುತ್ತಿದ್ದಾಗಲೆ ಪದಕ ಗೆಲ್ಲುತ್ತಾನೆ ಎನ್ನುವ ಭರವಸೆ ನನಗಿತ್ತು. ಅಥ್ಲೆಟಿಕ್ಸ್ನಲ್ಲಿ ಪದಕದ ಕೊರತೆ ನೀಗಿಸಿದ್ದು ದೊಡ್ಡ ಖುಷಿ ನೀಡಿದೆ’ ಎಂದರು.‘ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಸಾಧನೆ ಐತಿಹಾಸಿಕ ಕ್ಷಣ. ನೀರಜ್ ನನ್ನ ಬಳಿ ಕಲಿತಿದ್ದ ಎಂಬುದೇ ನನ್ನ ಪಾಲಿಗೆ ದೊಡ್ಡ ಹೆಮ್ಮೆ’ ಎಂದರು.
ಉತ್ತಮ ಕ್ರೀಡಾ ಪಟು ಆಗಿರುವ ಕಾಶೀನಾಥ 2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು. 2019ರ ಬಳಿಕ ಪುಣೆಯಲ್ಲಿ ತರಬೇತುದಾರರಾಗಿ ಕೆಲಸ ಮಾಡುತಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.