ಚಾಮರಾಜನಗರ: ವ್ಯಕ್ತಿಯೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಕಮರಹಳ್ಳಿ ಗ್ರಾಮದಿಂದ ಹುಣಸಿನಪುರಕ್ಕೆ ಹೋಗುವ ರಸ್ತೆ ಬಳಿ ಇರುವ ಚಂದ್ರಶೇಖರ್ ಮಾಲಿಕತ್ವದ ಹೊಸಟ್ಟಿಬಸಪ್ಪ ಕೋಳಿಫಾರಂನಲ್ಲಿ ನಡೆದಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನಿಟ್ರೆ ಗ್ರಾಮದ ಹುಚ್ಚಶೆಟ್ಟಿಯ ಪುತ್ರ ಮಹದೇವಶೆಟ್ಟಿ(32) ಮೃತಪಟ್ಟ ದುರ್ದೈವಿ. ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದ ಈತ ಹೆಂಡತಿಯೊಂದಿಗೆ ಅಲ್ಲೇ ವಾಸ್ತವ್ಯ ಹೂಡಿದ್ದನು. ಬುಧವಾರ ಕೆಲಸ ಮಾಡಿ ರಾತ್ರಿ ಊಟ ಮಾಡಿ ಮಲಗಿದ್ದನು ಎನ್ನಲಾಗಿದೆ.
ಗುರುವಾರ ಬೆಳಗ್ಗೆ ಆತನ ಹೆಂಡತಿ ಸಾಕಮ್ಮ ಎಂಬಾಕೆ ಗಂಡ ಮಹದೇವಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನಿಟ್ರೆ ಗ್ರಾಮದ ಕೆಲವರು ಹೋಗಿ ನೋಡಿದ್ದು, ಆತ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಮೇಲ್ನೋಟಕ್ಕೆ ನೇಣುಬಿಗಿದುಕೊಂಡು ಸಾವನ್ನಪ್ಪಿರುವಂತೆ ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಬೇಗೂರು ಪಿಎಸ್ಐ ಕಿರಣ್ ಕುಮಾರ್, ಎಎಸ್ಐ ದೊರೆರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಶವದ ಮಹಜರು ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಮೃತ ಮಹದೇವಶೆಟ್ಟಿಯ ತಂದೆ ಹುಚ್ಚಶೆಟ್ಟಿ ತನ್ನ ಮಗನ ಸಾವು ಅನುಮಾನಾಸ್ಪದವಾಗಿದ್ದು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.