ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ 22 ನೇ ವರ್ಷದಿಂದ ಈ ಸಂಘವು ಉಚಿತ ಸರಳ ವಿವಾಹ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯು ಕೂಡ ಆರ್ಯ ಈಡಿಗ ಸಮಾಜದ 8 ಜೋಡಿಯ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಅದ್ಧೂರಿ ಮದುವೆಗಳು ನಡೆಯುತ್ತಿದೆ. ಅದರಿಂದ ಹೆಚ್ಚಿನ ಹಣ ವ್ಯಯವಾಗುತ್ತಿದೆ. ಸರಳ ವಿವಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.
ಈ ಅದ್ದೂರಿ ಆಡಂಬರ ಮದುವೆ ಮಾಡುವುದರಿಂದ ಹೆಣ್ಣಿನ ಮನೆಯವರು ಸಾಲ ಮಾಡಿ ಮದುವೆ ಮಾಡುತ್ತಿದ್ದಾರೆ. ದುಂದುವೆಚ್ಚ ಕಡಿಮೆ ಮಾಡಿ ಸರಳವಾಗಿ ವಿವಾಹವಾಗುವುದರಿಂದ ಸಾಲದ ಹೊರೆ ಕಡಿಮೆಯಾಗುವುದಲ್ಲದೆ ಹಣವೂ ಉಳಿತಾಯವಾಗುತ್ತದೆ. ಹಾಗಾಗಿ ಸರಳ ವಿವಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಮುಂದಿನ ಪೀಳಿಗೆಯಲ್ಲಿ ಯುವಜನತೆ ಸರಳ ವಿವಾಹವನ್ನು ಪ್ರೋತ್ಸಾಹಿಸಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಮಾಜಿ ಅಧ್ಯಕ್ಷ ಮಾಂಬಳ್ಳಿ ಕೆ.ಪಾಪೇಗೌಡ, ಪಾಲಿಕೆ ಸದಸ್ಯ ಪಿ.ದೇವರಾಜ್, ಎಸ್ಎನ್ಡಿಪಿ ಅಧ್ಯಕ್ಷ ರಾಜೇಂದ್ರನ್, ಆರ್ಯ ಈಡಿಗರ ಯುವಕ ಸಂಘದ ಅಧ್ಯಕ್ಷ ಎಸ್.ಪಿ.ಸೋಮಶೇಖರ್, ಕದಂಬ ರಾಜಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು