ಮೂಡಿಗೆರೆ: ಕೇಂದ್ರದ ನರೇಂದ್ರ ಮೋದಿ ಬಿಜಿಪಿ ಹಾಗೂ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಗಳು ಜನವಿರೋಧಿ ನೀತಿಗಳಿಂದಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಚುನಾಯಿಸಲು ರಾಜ್ಯದ ಜನ ಅತೀ ಉತ್ಸಾಹಕರಾಗಿದ್ದಾರೆ ಎಂದು ಎಂಎಲ್ಸಿ ಶ್ರೀಕಂಠೇಗೌಡ ಹೇಳಿದರು.
ರೈತ ಭವನದಲ್ಲಿ ಜೆಡಿಎಸ್ ಕ್ಷೇತ್ರ ಸಮಿತಿ ವತಿಯಿಂದ ನಡೆದ ಮನೆ-ಮನೆಗೆ ಕುಮಾರಣ್ಣ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಎರಡು ಭ್ರಷ್ಟ ಸರ್ಕಾರಗಳು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ 3217 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಜೆಡಿಎಸ್ನಿಂದ ಮಾತ್ರ ಪರಿಹಾರ ಸಾಧ್ಯವಿದೆ. ಮುಂದಿನ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಿದ್ದಾರೆ ಎಂದರು.
ಕೇಂದ್ರ ಸರ್ಕಾರದ ನೋಟ್ಬ್ಯಾನ್ ಎಂಬ ಸುಳ್ಳಿನ ಸರಮಾಲೆ, ಜಿಎಸ್ಟಿ ಎಂಬ ತಿನ್ನುವ ಇಡ್ಲಿ ದೋಸೆಗಳಿಂದ ಹಿಡಿದು ದೇಶದ ಜನರನ್ನೇ ಸುಲಿಗೆ ಮಾಡುವ ರೀತಿಯ ವಸೂಲಿ ದಂಧೆಯಾಗಿದೆ. ಅಭಿವೃದ್ಧಿಯೇ ಕಾಣದ ಭಾರತವನ್ನು ಸೃಷ್ಟಿಮಾಡಲು ಹೊರಟ ನರೇಂದ್ರ ಮೋದಿ ಸರ್ಕಾರ ಹಗರಣಗಳ ಸರಮಾಲೆಯನ್ನೇ ಪೊಣಿಸುತ್ತಾ ಸಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಎರಡೂ ಸರ್ಕಾರಗಳಿಂದ ಮುಕ್ತಿ ಹೊಂದಲು ಮುಂದಿನ ಚುನಾವಣೆವರೆಗೆ ಕಾಯಲು ರಾಜ್ಯದ ಜನ ಹರಸಾಹಸಪಡುವಂತಾಗಿದೆ ಎಂದು ಹೇಳಿದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಕಳೆದ ಬಾರಿಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅತಿಯಾದ ಭ್ರಷ್ಟಾಚಾರ, ಆಪರೇಷನ್ ಕಮಲ, ರೈತರ ಮೇಲೆ ಗುಂಡು, ಸಚಿವರು ಹಾಗೂ ಶಾಸಕರ ಅತ್ಯಾಚಾರ ಪ್ರಕರಣಗಳು, ವಿಧಾನಸಭೆಯಲ್ಲಿ ಬ್ಲೂಫಿಲಂ ದಂಧೆ, ಅತಿಯಾದ ಭ್ರಷ್ಟಾಚಾರದಿಂದಾಗಿ 120 ಇದ್ದ ಶಾಸಕರ ಸಂಖ್ಯೆ 40ಕ್ಕೆ ಕುಸಿಯಿತು. ಈ ಬಾರಿಯೂ ಬಿಜೆಪಿ ಹೇಳಹೆಸರಿಲ್ಲದಂತೆ ಮಾಯವಾಗಲಿದೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಕೂಡ 40ಕ್ಕೆ ಕುಸಿಯಲಿದೆ. ಜೆಡಿಎಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದು ಎಚ್.ಡಿ.ಕುಮಾರಸ್ವಾಮಿ ಜನಪರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.