News Karnataka Kannada
Friday, May 10 2024
ಕರ್ನಾಟಕ

ರಾಜ್ಯ ಸರಕಾರದಿಂದ ಮಾಜಿ ಸೈನಿಕರ ನಿರ್ಲಕ್ಷ್ಯ : ಮಾಜಿ ಸೈನಿಕರ ಸಂಘ ಆರೋಪ

Photo Credit :

ರಾಜ್ಯ ಸರಕಾರದಿಂದ ಮಾಜಿ ಸೈನಿಕರ ನಿರ್ಲಕ್ಷ್ಯ : ಮಾಜಿ ಸೈನಿಕರ ಸಂಘ ಆರೋಪ

ಮಡಿಕೇರಿ : ಮಾಜಿ ಸೈನಿಕರ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಡಳಿತ ಕನಿಷ್ಠ 3 ತಿಂಗಳಿಗೆ ಒಮ್ಮೆಯಾದರು ಸಭೆಯನ್ನು ನಡೆಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ.

ಸರ್ಕಾರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮಾಜಿ ಸೈನಿಕರ ಬೃಹತ್ ರ್ಯಾಲಿ ನಡೆಸಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸೈನಿಕರಿಗೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಗೌರವ ದೊರೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಮಾಜಿ ಸೈನಿಕರಿಗೆ ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಅಗತ್ಯ ಸೌಲಭ್ಯಗಳನ್ನು ನೀಡದೆ ಕೀಳಾಗಿ ಕಾಣುತ್ತಿದೆಯೆಂದು ಆರೋಪಿಸಿದರು. ಜಿಲ್ಲೆಯಲ್ಲಿ ಸುಮಾರು 10 ರಿಂದ 15 ಸಾವಿರ ಮಾಜಿ ಸೈನಿಕರು, ವಿಧವೆಯರು ಹಾಗೂ ಸೈನಿಕರ ಅವಲಂಬಿತರು ವಾಸವಾಗಿದ್ದಾರೆ. ಎಲ್ಲಾ ಮಾಜಿ ಸೈನಿಕರು 15 ರಿಂದ 40 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನದಲ್ಲಿ ಯಾವುದೇ ಸುಖವಿಲ್ಲದೆ ಜೀವನವನ್ನು ನಡೆಸುತ್ತಿದ್ದಾರೆ. ನಾವು ಜೀವಂತವಾಗಿ ಬರುವುದಕ್ಕಿಂತ ಶವವಾಗಿ ಬರುವುದು ಒಳ್ಳೆಯದಿತ್ತೆಂದು ಬಿ.ಎ. ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸೈನಿಕರಿಗೆ ಜಾಗ ಮಂಜೂರಾತಿ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಜಾಗಕ್ಕೆ ಸಂಬಂಧಿಸಿದ ಯಾವುದೇ ಕಡತವನ್ನು ವಿಲೇವಾರಿ ಮಾಡುತ್ತಿಲ್ಲ. ಕೇವಲ ಹಣ ನೀಡಿದವರಿಗೆ ಮಾತ್ರ ಜಾಗ ಮಂಜೂರಾಗುತ್ತಿದೆಯೆಂದು ಅವರು ಆರೋಪಿಸಿದರು. ಮಾಜಿ ಸೈನಿಕರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಪಡೆದುಕೊಳ್ಳಲು ಸ್ವಂತ ಕಟ್ಟಡದ ನಿರ್ಮಾಣದ ಅಗತ್ಯವಿದ್ದು, ಇದಕ್ಕಾಗಿ ಕನಿಷ್ಠ 20 ಸೆಂಟ್ ಜಾಗವನ್ನು ಕೂಡ ನೀಡಲು ಕರ್ನಾಟಕ ಸರ್ಕಾರದಿಂದ ಸಾಧ್ಯವಾಗಿಲ್ಲ. ಕೇರಳ ರಾಜ್ಯದಲ್ಲಿ ಮಾಜಿ ಸೈನಿಕರಿಗೆ ಕರೆದು ಜಾಗವನ್ನು ನೀಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿರುವ ಸೈನಿಕ ಶಾಲೆಯಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಕೊಡಗಿನ ಮಕ್ಕಳಿಗೆ ಮೀಸಲಾತಿ ನೀಡದಿದ್ದಲ್ಲಿ ಕೊಡಗಿನ ನೆಲದಿಂದ ಸೈನಿಕ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲಿ ಎಂದು ಕಾರ್ಯಪ್ಪ ಒತ್ತಾಯಿಸಿದರು. ಸೈನಿಕ ಶಾಲೆಯಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಶೇ.10 ರಷ್ಟು ಹಾಗೂ ಕೊಡಗಿನ ಮಕ್ಕಳಿಗೆ ಶೇ.10 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಕೇಂದ್ರ್ರ ಸ್ಥಾನ ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಸಮಲೋಚನೆ ನಡೆಸಲು ಮತ್ತು ಅಹವಾಲು ಸ್ವೀಕರಿಸಲು ಯಾವುದೇ ಸ್ಥಳಾವಕಾಶವಿಲ್ಲ. ಆದ್ದರಿಂದ ಸೈನಿಕ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಅವಕಾಶ ಕಲ್ಪಿಸಬೇಕೆಂದರು.

ಮಾಜಿ ಸೈನಿಕರ ಮನೆ ಕಂದಾಯದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ಪಟ್ಟಣ ಭಾಗದಲ್ಲಿ ನೀಡುವಂತೆ ಗ್ರಾಮೀಣ ಭಾಗದಲ್ಲೂ ನೀಡಬೇಕು. ಇತರ ರಾಜ್ಯದಲ್ಲಿ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ನೀಡಲ್ಪಡುವ ಪ್ರಶಸ್ತಿ, ಪುರಸ್ಕಾರಗಳನ್ನು ಮತ್ತು ಯುದ್ಧದಲ್ಲಿ ವೀರ ಮರಣವನ್ನಪ್ಪಿದವರಿಗೆ ನಿರ್ದಿಷ್ಟ ಸೌಲಭ್ಯವನ್ನು ಕರ್ನಾಟಕದಲ್ಲೂ ನೀಡಬೇಕು ಎಂದು ಒತ್ತಾಯಿಸಿದ ಬಿ.ಎ. ಕಾರ್ಯಪ್ಪ, ಶಾಂತಿಯುತ ಮತ್ತು ಶಿಸ್ತಿನ ಹೋರಾಟಕ್ಕೆ ಬೆಲೆ ಸಿಗದೆ ಇರುವುದರಿಂದ ಇನ್ನು ಮುಂದೆ ಬೃಹತ್ ರ್ಯಾಲಿಯ ಮೂಲಕ ಮಾಜಿ ಸೈನಿಕರ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಾಜಿ ಸೈನಿಕರ ಸಮಸ್ಯೆಗಳನ್ನು ಆಲಿಸಲು ಮೂರು ಅಥವಾ ನಾಲ್ಕು ತಿಂಗಳಿಗೆ ಒಮ್ಮೆ ದೇಶದ ಎಲ್ಲಾ ಜಿಲ್ಲಾಡಳಿತಗಳು ಸಭೆ ನಡೆಸುವಂತೆ ರಕ್ಷಣಾ ಇಲಾಖೆಯಿಂದಲೆ ಸುತ್ತೋಲೆ ಹೊರಡಿಸಲು ರಕ್ಷಣಾ ಸಚಿವರಿಗೆ ಮನವಿ ಮಾಡಲಾಗುವುದೆಂದರು.

ಟಿಪ್ಪು ಜಯಂತಿಗೆ ವಿರೋಧ :
ಟಿಪ್ಪು ಜಯಂತಿ ಆಚರಣೆಗೆ ಸಂಘದ ಬೆಂಬಲವಿಲ್ಲವೆಂದು ತಿಳಿಸಿದ ಬಿ.ಎ.ಕಾರ್ಯಪ್ಪ, ದೇಶವನ್ನು ಕಾಯುವ ಸೈನಿಕರು ಹಾಗೂ ಮಾಜಿ ಸೈನಿಕರು ಜಾತಿ ಮತ ಭೇದವಿಲ್ಲದೆ ಶಾಂತಿಯಿಂದ ಬದುಕಬೇಕೆನ್ನುವ ನಿಲುವು ಹೊಂದಿರುವವರು ಎಂದರು. ಆದರೆ, ಜಯಂತಿ ಆಚರಣೆಯಿಂದ ಅಹಿತಕರ ಘಟನೆಗಳು ನಡೆಯುವುದನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಜಯಂತಿಗಳನ್ನು ಆಚರಿಸುವ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟ ಬಿ.ಎ. ಕಾರ್ಯಪ್ಪ, ಟಿಪ್ಪು ಒಬ್ಬ ವಂಚಕ ಮತ್ತು ಕೊಡಗಿನ ಜನರ ಶತ್ರುವೆಂದು ಆರೋಪಿಸಿದರು. ಕೊಡಗು ಜಿಲ್ಲೆಗೆ ಮತ್ತು ಕೊಡಗಿನ ಜನರಿಗೆ ಏನಾದರು ತೊಂದರೆಯಾದರೆ ಮಾಜಿ ಸೈನಿಕರ ಸಂಘ ಸುಮ್ಮನಿರುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮೇಜರ್ ಒ.ಎಸ್.ಚಿಂಗಪ್ಪ, ನಾಪೊಕ್ಲು ಅಧ್ಯಕ್ಷ ಸುಬೇದಾರ್ ಮೇಜರ್ ಪಾಡಿಯಂಡ ಶಂಭು, ಕುಶಾಲನಗರದ ಅಧ್ಯಕ್ಷ ಎಂ.ಎನ್. ಮೊಣ್ಣಪ್ಪ, ಪ್ರಮುಖರಾದ ಕರ್ನಲ್ ಜಪ್ಪಂಡ ಚಿಣ್ಣಪ್ಪ ಹಾಗೂ ನಂಜಪ್ಪ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು