ಕೆ.ಆರ್.ಪೇಟೆ: ಪಟ್ಟಣದ ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿ ಹಾದುಹೋಗುವ ರಸ್ತೆಯು ದೇವೀರಮ್ಮಣ್ಣಿ ಕೆರೆಯ ಏರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಇದರಿಂದಾಗಿ ನಾಗಮಂಗಲ ಮೇಲುಕೋಟೆ ಮಾರ್ಗಗಳ ಜನರು ಪಟ್ಟಣ ಪ್ರವೇಶಿಸಿ ನೇರವಾಗಿ ಬಸ್ ನಿಲ್ದಾಣ ತಲುಪಲು ಅನುಕೂಲವಾಗಿದೆಯಾದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನ ಪರದಾಡುವಂತಾಗಿದೆ.
ಈ ರಸ್ತೆಯ ಕಾಮಗಾರಿಯು ಶೇ.90ರಷ್ಟು ಭಾಗದ ರಸ್ತೆ ಕೆಲಸ ಪೂರ್ಣಗೊಂಡಿದ್ದು ನಾಲ್ಕೈದು ವರ್ಷಗಳು ಕಳೆದಿದ್ದರೂ ಕೇವಲ 200 ಮೀಟರ್ ನಷ್ಟು ರಸ್ತೆ ಕೆಲಸ ಆಗಬೇಕಾಗಿದೆ, ಆಗ ಮಾತ್ರ ಕೆರೆಯ ಏರಿಗೆ ಸಂಪರ್ಕಕಲ್ಪಿಸಿದಂತಾಗುತ್ತದೆ. ಆದರೆ ಕೆಲವು ಜಮೀನಿನ ಮಾಲೀಕರಿಗೆ ಪರಿಹಾರ ನೀಡುವಿಕೆ ಮತ್ತು ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಇನ್ನೂರು ಮೀಟರ್ ಕಾಮಗಾರಿ ಆಗದೇ ಇರುವುದರಿಂದ ದುರ್ಗಾಭವನ್ ಸರ್ಕಲ್ ಬಳಿ ಯಾವಾಗಲೂ ಜನಜಂಗುಳಿ ಮತ್ತು ವಾಹನ ದಟ್ಟಣೆ ಇರುವಂತಾಗಿದೆ.
ಬೆಂಗಳೂರು, ಮಂಡ್ಯ, ನಾಗಮಂಗಲ, ಮೇಲುಕೋಟೆ ಮುಂತಾದ ಮಾರ್ಗಗಳಿಂದ ಪಟ್ಟಣಕ್ಕೆ ಪ್ರತಿ ದಿನ ಸಾವಿರಾರು ವಾಹನಗಳು ಆಗಮಿಸುತ್ತವೆ, ಇವುಗಳು ಪಟ್ಟಣ ಪ್ರವೇಶಿಸುವ ವೇಳೆಯಲ್ಲಿ ಅತೀ ಸೂಕ್ಷ್ಮವಾದ ತಿರುವುಗಳಲ್ಲಿ ಸಾಗಬೇಕಾಗಿರುವುದರಿಂದ ಕೆಲವು ಸಮಯ ಟ್ರಾಫಿಕ್ ಜಾಮ್, ಅಪಘಾತಗಳು, ಸಂಭವಿಸಿ ಪೊಲೀಸರಿಗೆ ತಲೆನೋವಾಗಿರುವ ಹಲವಾರು ಪ್ರಕರಣಗಳು ನಡೆದಿವೆ. ಇಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದರೂ ಬೈಪಾಸ್ ರಸ್ತೆಯ ಕಾಮಗಾರಿಗೆ ಚಾಲನೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬೈಪಾಸ್ ರಸ್ತೆ ಸಾರ್ವಜನಿಕ ಸೇವೆಗೆ ಮುಕ್ತವಾದರೆ ಮೂರು ಕಡಿದಾದ ತಿರುವುಗಳಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಬಹುದಾಗಿದ್ದು ಪಟ್ಟಣದ ಶೇ.50ರಷ್ಟು ವಾಹನಗಳ ದಟ್ಟಣೆ ಕೂಡ ಕಡಿಮೆಯಾಗಲಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗ್ರಹಣ ಹಿಡಿದಿರುವ ಈ ಕಾಮಗಾರಿಯ ಆರಂಭಕ್ಕೆ ಚಾಲನೆ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.