ಚಾಮರಾಜನಗರ: ಸುಮಾರು 70 ಪ್ರಯಾಣಿಕರನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಸಾರಿಗೆ ಬಸ್ ಇಳಿಜಾರಿನ ತಿರುವಿನಲ್ಲಿ ಸಂಚರಿಸುವ ವೇಳೆ ನಿಯಂತ್ರಣ ತಪ್ಪಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ತಡೆಗೋಡೆಗೆ ತಾಗಿಸಿ ನಿಲ್ಲಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಗುಂಡ್ಲುಪೇಟೆ ಪಟ್ಟಣದ ಸಾರಿಗೆ ಘಟಕಕ್ಕೆ ಸೇರಿದ ಸಾರಿಗೆ ಬಸ್ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಸುಮಾರು 70 ಪ್ರಯಾಣಿಕರನ್ನು ಹೊತ್ತು ಇಳಿಯುತ್ತಿತ್ತು. ತಿರುವಿನಲ್ಲಿ ರಸ್ತೆಯ ಬದಿಯ ಕೊರಕಲಿನಿಂದಾಗಿ ಚಾಲಕ ಕೆಳಗಿಳಿಸಲು ಸಾಧ್ಯವಾಗಿಲ್ಲ. ಎಡಕ್ಕೆ ತಿರುಗಿಸಲು ಪ್ರಯತ್ನಿಸಿದಾಗ ಸಾಧ್ಯವಾಗದೆ ಕಬ್ಬಿಣದ ತಡೆಗೋಡೆಗೆ ತಗುಲಿದೆ. ಕೂಡಲೇ ಎಚ್ಚತ್ತ ಚಾಲಕ ಚಿನ್ನಸ್ವಾಮಿ ಹ್ಯಾಂಡ್ ಬ್ರೇಕ್ ಹಾಕಿದ್ದರಿಂದ ಬಸ್ಸು ಪ್ರಪಾತಕ್ಕೆ ಉರುಳುವುದು ತಪ್ಪಿದೆ ಎನ್ನಲಾಗಿದೆ.
ಆ ನಂತರ ಪ್ರಯಾಣಿಕರು ಕೆಳಗಿಳಿಯುವವರೆಗೂ ಸೀಟಿನಲ್ಲಿಯೇ ಕುಳಿತ ಚಾಲಕ ಬಳಿಕ ಸಾರ್ವಜನಿಕರ ನೆರವಿನಿಂದ ಹಿಂಬದಿಯ ಚಕ್ರಗಳಿಗೆ ಕಲ್ಲನ್ನು ತಡೆಯಾಗಿಟ್ಟು ಬಳಿಕ ಕೆಳಗಿಳಿದಿದ್ದಾನೆ. ಚಾಲಕ ಸಮಯಪ್ರಜ್ಞೆ ಮೆರೆಯದಿದ್ದರೆ ಪ್ರಪಾತಕ್ಕುರುಳಿ ಭಾರೀ ಅನಾಹುತ ಸಂಭವಿಸುವ ಸಾಧ್ಯವಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯು ಇತ್ತೀಚೆಗೆ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಿದೆ. ಆದರೆ ರಸ್ತೆ ಬದಿಗೆ ಪಿಚ್ಚಿಂಗ್ ಮಾಡಲು ಅರಣ್ಯ ಇಲಾಖೆಯು ಅನುಮತಿ ನೀಡದೆ ಹಿನ್ನಲೆಯಲ್ಲಿ ತಡೆಗೋಡೆ ಅಳವಡಿಸದೆ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ಬಿದ್ದ ಮಳೆಯಿಂದ ರಸ್ತೆಯ ಬದಿಗಳಲ್ಲಿ ಕೊರೆತವುಂಟಾಗಿದ್ದು, ಬಸ್ಗಳು ತೆರಳುವಾಗ ತೊಂದರೆವುಂಟಾಗುತ್ತಿದೆ. ಅಲ್ಲದೆ ತಿರುವಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಈ ರಸ್ತೆಯಲ್ಲಿ ಕಳೆದ ನಾಲ್ಕುತಿಂಗಳಿನಿಂದ ನಡೆಯುತ್ತಿರುವ ಇದು ಮೂರನೇ ಅಪಘಾತವಾಗಿದೆ. ಎರಡು ಬಾರಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸುಗಳು ಬದಿಯ ಗುಡ್ಡಕ್ಕೆ ಡಿಕ್ಕಿಹೊಡೆದು ನಿಂತಿದ್ದರೆ, ಈ ಬಾರಿ ಪ್ರಪಾತಕ್ಕೆ ಉರುಳುವುದು ತಪ್ಪಿ 70 ಮಂದಿ ಪ್ರಾಣ ಉಳಿದಂತಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.