ಚಿಕ್ಕಮಗಳೂರು: ದೇಶದ ಒಂದೊಂದು ಹಬ್ಬಗಳು ಒಂದೊಂದು ದಿನ ಬಂದ್ರೆ, ಕಾಫಿನಾಡಿಗರಿಗೆ ಮಾತ್ರ ಆ ಎಲ್ಲಾ ಹಬ್ಬಗಳು ಒಂದೇ ದಿನ ಬರ್ತಾವೆ. ಪರಂಪರಾ ದಿನದ ಅಂಗವಾಗಿ ಕಾಫಿನಾಡಿನ ಎಸ್ಟಿಜೆ ಕಾಲೇಜು ವಿದ್ಯಾರ್ಥಿನಿಯರು ಆಚರಿಸಿದ ಎಪಿಕ್ ಡೇ ಆಧುನಿಕ ಭಾರತದಲ್ಲಿ ಮರೆಯಾಗ್ತಿರೋ ಸಂಪ್ರದಾಯದ ಉಳಿವಿಗೆ ಸಾಕ್ಷಿಯಾಗಿತ್ತು. ಬಣ್ಣ-ಬಣ್ಣದ ಸೀರೆಯುಟ್ಟ ನಾರಿಯರು. ಮುತ್ತೈದೆಯಂತೆ ಮೈತುಂಬಾ ಸೆರಗೊದ್ದು ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸ್ತಿರೋ ಹುಡುಗೀರು.
ಮಳಿಯಾಳಿ ಕುಟ್ಟಿಗಳಂತೆ ಬಾರ್ಡರ್ನ ಬಿಳಿ ಸೀರೆಯುಟ್ಟು ಸೆಲ್ಫಿ ಹೊಡೆದುಕೊಳ್ತಿರೋ ಸುಂದರಿಯರು. ಕಿರೀಟ ತೊಟ್ಟು, ಕೈಯಲ್ಲಿ ತ್ರಿಶೂಲ ಇಟ್ಕೊಂಡು ದುರ್ಗೆಯರಾಗಿರೋ ಯುವತಿಯರು. ಇವರೆಲ್ಲಾ ಚಿಕ್ಕಮಗಳೂರಿನ ಎಸ್ಟಿಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯರು.
ಪ್ರತಿ ವರ್ಷ ಪರಂಪರಾ ದಿನದ ಅಂಗವಾಗಿ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಸೃತಿಯನ್ನ ಸಾರುವಂತಹಾ ಕಾರ್ಯಕ್ರಮವನ್ನ ಆಚರಿಸೋ ಇಲ್ಲಿನ ವಿದ್ಯಾರ್ಥಿನಿಯರು, ಈ ಬಾರಿ ಕೃಷ್ಣ ಜನ್ಮಾಷ್ಟಮಿ, ಹೋಳಿ ಹುಣ್ಣಿಮೆ, ನವದುರ್ಗೆಯರ ವೈಭವ, ಪರಿಸರ ಉಳಿಸಿ-ದೇಶ ರಕ್ಷಿಸಿ ಸೇರಿದಂತೆ ವಿವಿಧ ಸಂಪ್ರದಾಯದ ಹಬ್ಬಗಳನ್ನ ಆಚರಿಸಿದ್ರು.
ಜೊತೆಗೆ ಕೃಷಿ ಮೇಳ, ಹಳ್ಳಿಸೊಗಡಿನ ಜೀವನ ಶೈಲಿ, ಹಳ್ಳಿಗಳ ಸಂಪ್ರದಾಯಗಳೆಲ್ಲವೂ ಅಲ್ಲಿದ್ವು. ಕಳೆದೊಂದು ತಿಂಗಳಿಂದ ವಿದ್ಯಾರ್ಥಿನಿಯರೇ ಮಾಡಿದ್ದ ಇದೆಲ್ಲಾವೂ ಕೃತಕವಾದ್ರು, ನೈಜತೆಯನ್ನ ನಾಚಿಸುವಂತಿತ್ತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಫಲಿತಾಂಶಕ್ಕಾಗಿ ಪೋಷಕರು, ಉಪನ್ಯಾಸಕರು ಓದಿನ ಮೇಲೆ ಒತ್ತಡ ಹಾಕ್ತಾರೆ.
ಆದ್ರೆ, ಇಲ್ಲಿನ ಉಪನ್ಯಾಸಕರು ಓದಿನ ಜೊತೆ ಸಂಪ್ರದಾಯ ಉಳಿಸೋಕೆ ಹೆಗಲು ಕೊಟ್ಟಿದ್ದಾರೆ. ವರ್ಷ ಪೂರ್ತಿ ಕಾಲೇಜು ಓದು ಮನೆ ಅನ್ನೋ ವಿದ್ಯಾರ್ಥಿನಿಯರು, ಮನೋರಂಜನೆ ಜೊತೆ ಅವರೇ ಇಷ್ಟ ಪಟ್ಟು ನಡೆಸೋ ಇಂತಹಾ ಸಂಸ್ಕೃತಿ ಹಬ್ಬಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಬೆಂಬಲವಿದೆ.
ಕಳೆದ ನಾಲ್ಕು ವರ್ಷಗಳಿಂದ್ಲೂ ಪ್ರತಿ ವರ್ಷ ಈ ರೀತಿಯ ಒಂದೊಂದು ವಿಭಿನ್ನ ರೀತಿಯ ಆಚರಣೆಯಿಂದ ತಾವು ಸಂಭ್ರಮಿಸೋದ್ರ ಜೊತೆ ಭಾರತೀಯ ಸಂಸ್ಕೃತಿಯನ್ನ ಕಾಲೇಜಿನ ವಿದ್ಯಾರ್ಥಿನಿಯರು ಉಳಿಸಿ, ಬೆಳೆಸುತ್ತಿದ್ದಾರೆ. ನಾಡಿನ ಸಂಸ್ಕೃತಿಯ ಬಗ್ಗೆ ತಮ್ಮ ಮಕ್ಕಳಿಗಿರೋ ಗೌರವನ್ನ ಕಂಡು ಕಾಲೇಜಿನ ಉಪನ್ಯಾಕರೆಲ್ಲರೂ ಕೂಡ ಮಕ್ಕಳೊಂದಿಗೆ ಮಕ್ಕಳಾಗಿದ್ರು.