ಹಾಸನ: ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ನಗರದ ಶ್ರೀ ಹಾಸನಾಂಬ ದೇವಿಯ ದರ್ಶನ ಮಹೋತ್ಸವ ಈ ಬಾರಿ ಅಕ್ಟೋಬರ್ 17ರಿಂದ 29ರವರೆಗೆ ಒಟ್ಟು 13 ದಿನಗಳ ಕಾಲ ನಡೆಯಲಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದ್ದು, ಅ. 17ರಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಿದ್ದು, ಅ. 29 ರಂದು ಮಧ್ಯಾಹ್ನ 12 ಗಂಟೆ ನಂತರ ಬಾಗಿಲು ಮುಚ್ಚಲಾಗುವುದಾಗಿ ತಿಳಿಸಿದ ಅವರು, ಆದರೆ ಮೊದಲ ದಿನವಾದ ಅ.17 ಮತ್ತು ಕೊನೆಯ ದಿನವಾದ ಅ.29 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿವರ್ಷ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದಲ್ಲಿ ಬರುವ ಮೊದಲ ಗುರುವಾರದಂದು ಬಾಗಿಲು ತೆರೆದು ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಸಾರ್ವಜನಿಕರಿಗೆ ಅ.18ರಿಂದ ಪ್ರತಿದಿನ ದೇವಿಗೆ ನೈವೇದ್ಯ ಪೂಜಾ ಸಮಯ ಅಪರಾಹ್ನ 1 ರಿಂದ 3 ಗಂಟೆಯವರೆಗೆ ಭಕ್ತಾಧಿಗಳಿಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11 ಗಂಟೆಯವರೆಗೆ ದರ್ಶನವಿರುತ್ತದೆ. ಅ.23, 25 ಮತ್ತು ಅ.27 ರ ದಿನಾಂಕಗಳಂದು ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ದೇವಿಗೆ ವಿಶೇಷ ನೈವೇದ್ಯ ಮತ್ತು ಪೂಜೆ ನಡೆಯಲಿದೆ ಎಂದಿದ್ದಾರೆ.
ಈಗಾಗಲೇ ಪೂರ್ವಸಿದ್ಧತೆಗಳಾದ ದೇವಾಲಯದ ಸಂಪರ್ಕ ರಸ್ತೆ ರಿಪೇರಿ, ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡ್ ಅಳವಡಿಕೆ, ಆರೋಗ್ಯ, ಸ್ವಚ್ಛತೆ, ನೈರ್ಮಲ್ಯ, ಶೌಚಾಲಯ ಇತರೆ ವ್ಯವಸ್ಥೆಗಳ ಬಗ್ಗೆ ತಯಾರಿ ಮಾಡಿಕೊಳ್ಳಲಾಗಿದೆ. ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ದೇವಸ್ಥಾನದ ಮುಂಬಾಗಿಲು ಪ್ರವೇಶದ್ವಾರದ ಹತ್ತಿರ, ದೇವಸ್ಥಾನದ ಹಿಂಭಾಗ ವಿಶೇಷ ದರ್ಶನದ ಪಡೆಯುವ ಸ್ಥಳದಲ್ಲಿ ಹಾಗೂ ಟಿಕೆಟ್ ಕೌಂಟರ್ ಬಳಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವುದರಿಂದ ಧರ್ಮದರ್ಶನ, ಶೀಘ್ರವಾಗಿ ಹಾಗೂ ಸುಗಮ ದರ್ಶನಕ್ಕಾಗಿ ರೂ.300ರ ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 2 ಲಾಡು, 1000 ರೂ.ಗಳ ನೇರದರ್ಶನ ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 4 ಲಾಡು ಪ್ರಸಾದವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.
ಭಕ್ತಾದಿಗಳ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಎಲ್.ಇ.ಡಿ. ಸ್ಕ್ರೀನ್ ಟಿ.ವಿ. ವ್ಯವಸ್ಥೆ ದೇವಸ್ಥಾನದ ಆಯಾಕಟ್ಟಿನ ಜಾಗದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಭಕ್ತಾದಿಗಳ ವಾಹನ ನಿಲುಗಡೆಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಹಾಸನ ನಗರಸಭೆ ಆವರಣದ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ದೇವಾಲಯದ ಬಾಗಿಲು ತೆರೆಯುವ ದಿನ ಜಿಲ್ಲೆಯ ವಿವಿಧ ಪ್ರಕಾರಗಳ ಕಲಾ ತಂಡಗಳನ್ನು ಕರೆಸಿ ಸಾಂಪ್ರಾದಾಯಿಕ ಮೆರವಣಿಗೆ ಉತ್ಸವ ನಡೆಸಲಾಗುವುದು. ದೇವಾಲಯದ ಮುಚ್ಚುವ ದಿನವೂ ಮಧ್ಯಾಹ್ನ 2 ಗಂಟೆಯಿಂದ ರಾತ್ರಿಯವರೆಗೆ ವಿವಿಧ ಪ್ರಕಾರದ ಕಲಾವಿದರಿಂದ ಹಾಸನಾಂಭ ಕಲಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.