ದುಬೈ: ದುಬೈನಲ್ಲಿರುವ ಯು.ಎ. ಇ. ಬಸವ ಸಮಿತಿ ವತಿಯಿಂದ ಮೇ 19ರಂದು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ದುಬೈನ ಅಲ್ ನಫಾ ನಗರದಲ್ಲಿರುವ ಜೆಎಸ್ಎಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶ್ಯಾಮನೂರು ಶಿವಶಂಕರಪ್ಪನವರಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುತ್ತೂರು ಮಠದ ಶ್ರೀಶ್ರೀ ಶಿವರಾತ್ರೇಶ್ವರ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿರಿಗೆರೆಯ ಶ್ರೀತರಳಬಾಳು ಬೃಹನ್ಮಠದ ಶ್ರೀಗಳಾದ, ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗುರುಮಠಕಲ್ ನಲ್ಲಿರುವ ಖಾಸಾಮಠದ ಶ್ರೀಗಳಾದ ಮ.ನಿ. ಪ್ರ . ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭಿಕರಿಗೆ ಆಶೀರ್ವಚನ ನೀಡಿದರು.
ಯುಎಇ ಬಸವ ಸಮಿತಿಯು ಕಳೆದ 16 ವರ್ಷಗಳಿಂದ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದೆ. ಈ ವರ್ಷ ಆಚರಿಸಿದ ಬಸವ ಜಯಂತಿಯು ಸಮಿತಿ ವತಿಯಿಂದ ಆಚರಿಸಲಾದ 17ನೇ ವಾರ್ಷಿಕ ಸಮಾರಂಭವಾಗಿದೆ. ಪ್ರತಿ ವರ್ಷವೂ ನಾನಾ ರಂಗಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಹಿಂದೆ, ಈ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಹಾಗೂ ಈ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.