ಮುಂಬಯಿ (ಆರ್ಬಿಐ), ಮಾ.07: ಮುಂಬಯಿ ಪೀಪಲ್’ಸ್ ಆರ್ಟ್ ಸೆಂಟರ್ ಆಯೋಜಿಸಿದ್ದ ವಾರ್ಷಿಕ 2023ನೇ ಸಾಲಿನ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕಾಂಟೆಕ್ ಇನ್ಸ್ಟ್ರುಮೆಂಟ್ಸ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ನಿರ್ವಾಹಕ ನಿರ್ದೆಶಕ ಹಾಗೂ ಬಾಂಬೆ ಸೌತ್ ಕೆನರಾ ಬ್ರಾಹ್ಮಿಣ್ಸ್ ಅಸೋಸಿಯೇಶನ್ (ಬಿಎಸ್ ಕೆಬಿಎ) ಉಪಾಧ್ಯಕ್ಷ ವಾಮನ ಎನ್.ಹೊಳ್ಳ ಅವರಿಗೆ ‘ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2023’ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇತ್ತೀಚೆಗೆ ಪೀಪಲ್ಸ್ ಆರ್ಟ್ ಸೆಂಟರ್ ತನ್ನ 1045ನೇ ಕಾರ್ಯಕ್ರಮವನ್ನು ಪೂವಾಯಿ ಹಿರಾನಂದನಿ ಗಾರ್ಡನ್ಸ್ ಮೆಲುಹಾ ಬಾಂಕ್ವೆಟ್ ಸಭಾಗೃಹದಲ್ಲಿ ಆಯೋಜಿಸಿತ್ತು. ಹನ್ನೆರಡನೇ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್, ಪಾರ್ಲೆ ತಿಲಕ್ ವಿದ್ಯಾಲಯ ಅಸೋಸಿಯೇಶನ್ನ ನಿರ್ದೇಶಕ ಬನ್ನಿ ಧುರಂಧರ್ ಮತ್ತು ಮುಂಬಯಿ ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸುಂದರ್ ರಾಜ್ದೀಪ್ ಅತಿಥಿಗಳಾಗಿದ್ದು ವಾಮನ್ ಹೊಳ್ಳ ಸೇರಿದಂತೆ ಇನ್ನಿತರ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.
ಅಲ್ಲದೇ ಪೀಪಲ್ಸ್ ಆರ್ಟ್ ಸ್ಮರಣಿಕೆ ಬಿಡುಗಡೆಗೊಳಿಸಿದರು. ಆರ್ಟ್ ಸೆಂಟರ್ನ ದೀರ್ಘ ಅವಧಿಯ ಸೇವೆಯನ್ನು ಅತಿಥಿಗಳು ಪ್ರಶಂಸಿದರು. ಆರ್ಟ್ ಸೆಂಟರ್ ಮುಖ್ಯಸ್ಥ ಗೋಪಾಲಕೃಷ್ಣ ಪಿಳ್ಳೆ ಸ್ವಾಗತಿಸಿ ವಂದಿಸಿದರು.