ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಿಂಧೆ ಸರ್ಕಾರ ಈಗ ಎಸ್ಐಟಿ ತನಿಖೆ ನಡೆಸಲಿದ್ದು, ಶಿವಸೇನೆ ನಾಯಕ ಆದಿತ್ಯ ಠಾಕ್ರೆಗೆ ಸಂಕಷ್ಟ ಎದುರಾಗಲಿದೆ. ಡಿಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಈ ಎಸ್ಐಟಿಯ ಕೆಲಸವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ದಿಶಾ ಸಾಲಿಯಾನ್ ಪ್ರಕರಣಕ್ಕೆ ಕುರಿತು ಆದಿತ್ಯ ಠಾಕ್ರೆ ವಿರುದ್ಧ ತನಿಖೆಗೆ ಹಲವು ಶಾಸಕರು ಆಗ್ರಹಿಸಿದ್ದಾರೆ. ಎಸ್ಐಟಿ ರಚನೆಯಾಗಲಿದ್ದು, ತನಿಖೆ ಆರಂಭವಾಗಲಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಆಗ ಶಿವಸೇನಾ ಶಾಸಕ ಭರತ್ ಗೋಗವ್ಲೆ ಮತ್ತು ಶಿಂಧೆ ಬಣದ ಬಿಜೆಪಿ ಶಾಸಕ ನಿತೇಶ್ ರಾಣೆ ಕೂಡ ದಿಶಾ ಸಾಲಿಯಾನ್ ಸಾವಿನ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಸುಶಾಂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಅವರ ಫೋನ್ಗೆ ‘AU’ ಹೆಸರಿನ ಕರೆಗಳು 44 ಬಾರಿ ಬಂದಿವೆ ಎಂದು ಶಿಂಧೆ ಗುಂಪಿನ ರಾಹುಲ್ ಶೆವಾಲೆ ಮಾಹಿತಿ ನೀಡಿದ್ದಾರೆ. ನಿಖರವಾಗಿ AU ಯಾರು ಎಂಬುದರ ಕುರಿತು ತನಿಖೆಗೆ ನಡೆಯಲು ಒತ್ತಾಯಿಸಿದ್ದಾರೆ. ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಅವರನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಬೇಕು ಎಂದು ನಿತೇಶ್ ರಾಣೆ ಆಗ್ರಹಿಸಿದ್ದರು.
9 ಜೂನ್ 2020 ರಂದು, ಮುಂಬೈನ ಮಲಾಡ್ನಲ್ಲಿರುವ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯಾನ್ ಮೃತಪಟ್ಟಿದ್ದರು. ಸುಶಾಂತ್ 5 ದಿನಗಳ ನಂತರ ಅಂದರೆ 14 ಜೂನ್ 2020 ರಂದು ನಿಧನರಾದರು. ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧ ಕಲ್ಪಿಸಲಾಗಿತ್ತು. 28 ವರ್ಷದ ದಿಶಾ ಸಾವಿನ ನಂತರ ಮುಂಬೈ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.