ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ಮಹಾಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ಅವರು ಇಂದು (ಆ.31) ಸೇವಾ ನಿವೃತ್ತ ಗೊಂಡರು.
ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ ಮುಂಬಯಿಯಲ್ಲಿ 20.08.1978ರಲ್ಲಿ ಬಿಲ್ಲವ ಸಮಾಜದ ಬಂಧುಗಳು ಸ್ಥಾಪಿಸಿದ ಭಾರತ್ ಬ್ಯಾಂಕ್ ಸುಮಾರು 38 ವರ್ಷಗಳೊಂದಿಗೆ ಇತ್ತೀಚೆಗೆ ನೂರು ಶಾಖೆಗಳನ್ನು ಗ್ರಾಹಕರ ಸೇವೆಗಾಗಿ ಸಮರ್ಪಿಸಿದ್ದು, ಈ ಪಥಸಂಸ್ಥೆಯಲ್ಲಿ ಸುದೀರ್ಘಾವಧಿಯ ಸೇವೆ ಸಲ್ಲಿಸಿರುವ 1992ರಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಆಗಿ ಭಾರತ್ ಬ್ಯಾಂಕ್ ಗೆ ಸೇರ್ಪಡೆ ಗೊಂಡಿದ್ದರು.
ಮೂಲತ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಕಲ್ಯಾಣ್ ಪುರ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ನಿವಾಸಿ ನಿತ್ಯಾನಂದ ಡಿ.ಕೋಟ್ಯಾನ್ ಅವರು ಬ್ಯಾಂಕ್ ನ ಸಾಮಾನ್ಯ ಹುದ್ದೆಯನ್ನೊಳಗೊಂಡು ಮಹಾಪ್ರಬಂಧಕರಾಗುವಲ್ಲಿಗೆ ಹಗಲಿರುಳು ಶ್ರಮಿಸಿದವರು. 1994 ರಿಂದ 1997 ವರೆಗೆ ಅಂಧೇರಿ ಪಶ್ಚಿಮ ಶಾಖೆಯಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. 1997ರಲ್ಲಿ ಕಲೀನಾ ಶಾಖೆಗೆ ವರ್ಗಾವಣೆಗೊಂಡು ಈ ಶಾಖೆಯಲ್ಲಿ ಬ್ಯಾಂಕಿನ ವ್ಯವಹಾರಗಳಿಗೆ ಮತ್ತಷ್ಟು ಚುರುಕು ಮುಟ್ಟಿಸಿದರು. 2003 ರಿಂದ 2009 ರವರೆಗೆ 6 ವರ್ಷಗಳ ಕಾಲ ವಿಲೇಪಾರ್ಲೇ ಪೂರ್ವದ ಶಾಖಾ ಪ್ರಬಂಧಕರಾಗಿ ಶಾಖೆಯೊಂದಿಗೆ ಬ್ಯಾಂಕ್ನ್ನು ಅಭಿವೃದ್ಧಿಯ ಪಥದತ್ತ ಸಾಗಿಸಿದರು. 2009ರಲ್ಲಿ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಅಭಿವೃದ್ಧಿ ಇಲಾಖಾ ಮುಖ್ಯಸ್ಥರಾಗಿ ನೇಮಕಗೊಂಡು ತನ್ನ ಅವಿರತ ಪರಿಶ್ರಮದಿಂದ ಮತ್ತು ಮುತುವರ್ಜಿಯಿಂದ 50 ಶಾಖೆಗಳ ಲೋಕಾರ್ಪಣೆಗೆ ನಿಸ್ವಾರ್ಥ ಸೇವೆ ಸಲ್ಲಿಸಿರುವರು. ಸದ್ಯ ಸೇವಾವಧಿಯ ಫಲಪ್ರದ 24 ವರ್ಷಗಳನ್ನು ಪೂರ್ಣಗೊಳಿಸಿ ಮಹಾ ಪ್ರಬಂಧಕರಾಗಿ ಕಾರ್ಯನಿರ್ವಹಿಸಿ ವೃತ್ತಿನಿವೃತ್ತರಾಗುತ್ತಿದ್ದಾರೆ.
ನಗರದ ಹಿರಿಯ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರಲ್ಲಿ ಕಳೆದ ಸುಮಾರು ಎರಡುವರೆ ದಶಕಗಳ ಸೇವೆ ಸಲ್ಲಿಸಲು ಅವಕಾಶ ಪಡೆದು ಪ್ರಾರಂಭದಲ್ಲಿ ಅಸೋಸಿಯೇಶನ್ನ ಜತೆ ಕೋಶಾಧಿಕಾರಿ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ, ಉಪಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನಲಂಕರಿಸುವ ಅವಕಾಶಕ್ಕಾಗಿ ಸಮಸ್ತ ಬಿಲ್ಲವ ಜನತೆಗೆ ಋಣಿಯಾಗಿದ್ದೇನೆ. ಅಸೋಸಿಯೇಶನ್ನ ಸಂಚಾಲಕತ್ವದ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಪಥಸಂಸ್ಥೆಯಲ್ಲೂ 24 ವರ್ಷಗಳ ಬ್ಯಾಂಕಿಂಗ್ ವೃತ್ತಿಯಲ್ಲೊಂದು ಮಹತ್ವದ ಧ್ಯೇಯವೊಂದನ್ನಿರಿಸಿದ್ದೆ. ಅದೇ… ನನ್ನ ಸೇವಾವಧಿಯಲ್ಲೇ 100 ಶಾಖೆಗಳ ಸ್ಥಾಪನೆ. ಈ ಕನಸು ಬರೇ ನನಸಾಗದೆ ಭಾರತ್ ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆಯ ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷನಾಗಿ ಮೆರೆಯುವ ನನ್ನ ಭಾಗ್ಯಕ್ಕಿಂತ ಮಿಗಿಲಾದ ಗೌರವ ನನ್ನ ಪಾಲಿಗೆ ಮತ್ತೊಂದಿಲ್ಲ. ಬ್ಯಾಂಕಿಂಗ್ ಸೇವೆ ನನ್ನ ಪಾಲಿಗೆ ಪರಿವಾರವಾಗಿ ಕಳೆದ ಅಪಾರ ಸಂತಸ, ಅಭಿಮಾನ ನನಗಿದೆ. ಸೇವಾ ಸಂದರ್ಭದಲ್ಲಿ ನನ್ನ ಬದುಕಿಗೆ ಆದರ್ಶಪ್ರಾಯರಾದ ಸನ್ಮಾನ್ಯ ಜಯ ಸಿ.ಸುವರ್ಣ ಅವರ ದಕ್ಷ ಮಾರ್ಗದರ್ಶನ, ಆಡಳಿತ ಮಂಡಳಿಯ ಪ್ರೋತ್ಸಾಹ, ಸರ್ವ ಸಿಬ್ಬಂದಿಗಳ ಸಹಯೋಗ ಎಲ್ಲವೂ ನನಗೆ ಸಂತಸ ತಂದಿದೆ. ನನ್ನ ಬ್ಯಾಂಕಿನ ಸಂಬಂಭವೂ ಭವಿಷ್ಯದಲ್ಲೂ ಇದೇ ರೀತಿಯಲ್ಲಿ ಮುಂದುವರಿಸುವ ಆಶಯ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾಗಿ, ಅಕ್ಷಯ ಮಾಸಿಕದ ನಿವರ್ಾಹಕ ಸಂಪಾದಕರಾಗಿ, ಕನ್ನಡಿಗ ಪತ್ರಕರ್ತರ ಸಂಘದ ಅಜೀವ ಸದಸ್ಯರಾಅಗಿ, ಉಡುಪಿ ಜಿಲ್ಲೆಯ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮವತೀ ಗರೋಡಿ ಮುಂಬಯಿ ಉಪಸಮಿತಿ ಅಧ್ಯಕ್ಷರಾಗಿ, ಕನ್ನಡ ಸಂಘ ಸಾಂತಾಕ್ರೂಜ್ (ರಿ). ಉಪಾಧ್ಯಕ್ಷರಾಗಿ, ಕಾಸರಗೋಡು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಸಮಿತಿ ಗೌರವಾಧ್ಯಕ್ಷ ಆಗಿಯೂ ಸೇವಾ ನಿರತರಾಗಿದ್ದಾರೆ.
ಪತ್ನಿ ಶಶಿ ನಿತ್ಯಾನಂದ್ ಮತ್ತು ಏಕೈಕ ಸುಪುತ್ರಿ ನೀಶಾ ನಿತ್ಯಾನಂದ್ ಅವರೊಂದಿಗೆ ಸಾಂತಕ್ರೂಜ್ ಪೂರ್ವದ ವಕೋಲಾದಲ್ಲಿ ಸಾಂಸರಿಕ ಬದುಕು ಬಾಳುವ ನಿತ್ಯಾನಂದರ ಭವಿಷ್ಯತ್ತಿನ ಬಾಳು ನಿತ್ಯ ಆನಂದದಾಯಕವಾಗಿಗೇ ಸಾಗಲಿ ಎಂದು ಶುಭಾರೈಕೆ.
(ಚಿತ್ರ/ ವರದಿ: ರೋನ್ಸ್ ಬಂಟ್ವಾಳ್)