News Karnataka Kannada
Saturday, May 18 2024
ನುಡಿಚಿತ್ರ

ತಂಬಾಕಿಗೆ ಸೆಡ್ಡು ಹೊಡೆದ ಚೆಂಡು ಹೂ

Photo Credit :

ತಂಬಾಕಿಗೆ ಸೆಡ್ಡು ಹೊಡೆದ ಚೆಂಡು ಹೂ

ಹುಣಸೂರು: ಮುಂದಿನ 2020ರ ವೇಳೆಗೆ ತಂಬಾಕು ಮುಕ್ತ ಭಾರತ ಕಲ್ಪನೆ ಶುರುವಾಗಿದ್ದು, ಅದರು ನಿಜಕ್ಕೂ ಒಳ್ಳೆಯ ಬೆಳವಣಿಗೆ ಆದರೆ ತಂಬಾಕು ಕೃಷಿ ನಂಬಿ ಬದುಕುತ್ತಿರುವ ಬೆಳಗಾರನ ಪರಿಸ್ಥಿತಿ ಮೂರಾಬಟ್ಟೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಇಷ್ಟಕ್ಕೂ ಇದೀಗ ತಂಬಾಕು ಬೆಳೆಗಾರನ ಪರಿಸ್ಥಿತಿ ಹಸನಾಗಿಲ್ಲ. ಅದನ್ನು ನಂಬಿ ಹಲವರು ನಷ್ಟ ಅನುಭವಿಸಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಹೀಗಿರುವಾಗ ತಂಬಾಕು ಬೆಳೆಯಿಂದ ಬದುಕು ಕಟ್ಟಿಕೊಳ್ಳುವುದು ಅಷ್ಟರಲ್ಲೇ ಇದೆ. ಹೀಗಾಗಿ ಪರ್ಯಾಯ ಬೆಳೆಯನ್ನು ಬೆಳೆಯುವುದಕ್ಕೆ ರೈತರು ಈಗಿನಿಂದಲೇ ತಯಾರಾಗಬೇಕಾಗಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುವ ತಂಬಾಕು ಕೃಷಿ ಇತ್ತೀಚೆಗೆ ರೈತರ ಪಾಲಿಗೆ ಜೂಜಾಟವಾಗುತ್ತಿದೆ. ಇದನ್ನು ಮನಗಂಡ ಹಲವು ರೈತರು ಚೆಂಡು ಹೂ ಕೃಷಿ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಅದರಲ್ಲಿ ಸದ್ಯ ನೆಮ್ಮದಿ ಕಾಣುತ್ತಿದ್ದಾರೆ.

ತಂಬಾಕು ಬೆಳೆಬೆಳೆದು ಸಾಲಗಾರರಾಗಿದ್ದ ರೈತರು ಚೆಂಡು ಹೂ ಬೆಳೆಯಲು  ಮುಂದಾಗಿದ್ದೇ ಯಶೋಗಾಥೆ. ಯಾವ ಕೃಷಿ ಮಾಡುವುದಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದ ರೈತರಿಗೆ ವರದಾನವಾಗಿ ಬಂದಿದ್ದು ನ್ಯಾಚುರಲ್ ಪ್ರೋಡಕ್ಟ್ ಲಿಮಿಟೆಡ್ ಎಂಬ ಕಂಪನಿ.

ಕಂಪೆನಿಯ ಅಧಿಕಾರಿಗಳು ರೈತರನ್ನು ಸಂಪರ್ಕಿಸಿ ಚೆಂಡು ಹೂ ಬೆಳೆಯಿರಿ. ಅದಕ್ಕೆ ಬೇಕಾದ ಬೀಜ, ಗೊಬ್ಬರ, ರಾಸಾಯನಿಕ ಔಷಧಿಯನ್ನು ಸಾಲದ ರೂಪದಲ್ಲಿ ನೀಡಿ ಬಳಿಕ ಫಸಲನ್ನು ಕೂಡ ತಾವೇ ಖರೀದಿಸುವ ಮತ್ತು ನೀಡಿದ ಸಾಲವನ್ನು ಹಂತಹಂತವಾಗಿ ಪಡೆಯುವ ವಾಗ್ದಾನ ಮಾಡಿದರು. ಜೊತೆಗೆ ಚೆಂಡು ಹೂವಿಗೆ ಹೆಚ್ಚಿನ ಬೇಡಿಕೆಯಿದೆ. ಬಣ್ಣ ಮತ್ತು ಔಷಧಿಗೆ ಬಳಕೆಯಾಗುವುದರಿಂದ ನೀವು ಬೆಳೆದ ಬೆಳೆಗೆ ಮಾರುಕಟ್ಟೆಯ ತೊಂದರೆ ಕಾಣಿಸುವುದಿಲ್ಲ ಎಂದು ಮಾಹಿತಿ ನೀಡುವ ಮೂಲಕ ಮನವೊಲಿಸಿದರು.

ಮೊದಲಿಗೆ ರೈತರು ಹಿಂದೇಟು ಹಾಕಿದರಾದರೂ ಏನಾದರಾಗಲಿ ನೋಡಿಯೇ ಬಿಡೋಣ ಎಂದು  ಚೆಂಡು ಹೂವಿನ ಕೃಷಿಗೆ ಇಳಿದೇ ಬಿಟ್ಟರು.  ಮೂರೂವರೆ ಅಡಿ ಅಂತರದಲ್ಲಿ ಸಾಲು ಮಾಡಿ ಕಾಲು ಅಡಿ ಅಂತರದಲ್ಲಿ ನಾಟಿ ಮಾಡಿದರು. ಒಂದು ಎಕರೆಗೆ ಸುಮಾರು 15 ರಿಂದ 16 ಸಾವಿರ ಸಸಿಗಳು ಬೇಕಾಯಿತು. ನಾಟಿ ಮಾಡಿದ ಬಳಿಕ ಜತನದಿಂದ ಆರೈಕೆ ಮಾಡಿದ ರೈತರು ನಂತರ ಡಿಎಪಿ ಪೊಟ್ಯಾಷ್ ಗೊಬ್ಬರವನ್ನು ಮೊದಲಿಗೆ ನೀಡಿದರು. ಆ ನಂತರ ಎರಡನೇ ಬಾರಿಗೆ 17-17 ಗೊಬ್ಬರವನ್ನು ಹಾಕಿದರು. ಇದೀಗ ಗಿಡಗಳು ಬೆಳೆದು ಹೂಗಳನ್ನು ಬಿಡಲಾರಂಭಿಸಿವೆ. ಈಗ ರೈತರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ.

ಚೆಂಡು ಹೂ ಬೆಳೆಯಲು ಪ್ರೋತ್ಸಾಹಿದ ಸಂಸ್ಥೆಯೇ ಹೂವನ್ನು ಕೆಜಿಗೆ  5.35 ರೂ. ನೀಡಿ ವಾರಕ್ಕೊಮ್ಮೆ ರೈತರ ಜಮೀನಿಗೆ ಬಂದು ಖರೀದಿಸುತ್ತಿದೆ. ಇದರಿಂದ ಅರ್ಧ ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದ ರೈತನಿಗೂ ವಾರಕ್ಕೆ ಸುಮಾರು ನಾಲ್ಕು ಸಾವಿರ ರೂ.ನಷ್ಟು ಆದಾಯ ಸಿಗುತ್ತಿದೆ.

ಮುಂದಿನ ದಿನಗಳ ರೈತರು ಎಚ್ಚೆತ್ತುಕೊಂಡು ಬೇರೆ ಬೇರೆ ಕೃಷಿಯನ್ನು ಅಳವಡಿಸಿಕೊಂಡರೆ ಖಂಡಿತಾ ತಂಬಾಕು ಕೃಷಿ ನಿಷೇಧಿಸಿದರೂ ಬದುಕನ್ನು ಕಟ್ಟಿಕೊಳ್ಳಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು