ಬೀದರ್: ರಾಜ್ಯದಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಂಡ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ಕನ್ನಡ ಚಲನಚಿತ್ರ ‘ವಿರಾಟಪುರ ವಿರಾಗಿ’ ಇಲ್ಲಿಯ ಸಪ್ನಾ ಮಲ್ಟಿಫ್ಲೆಕ್ಸ್ನಲ್ಲಿ ಮೊದಲ ದಿನ ಹೌಸ್ ಫುಲ್ ಪ್ರದರ್ಶನ ಕಂಡಿತು.
ಮಲ್ಟಿಫ್ಲೆಕ್ಸ್ನ ಎಲ್ಲ ಆಸನಗಳು ಭರ್ತಿಯಾಗಿದ್ದವು. ಮಠಾಧೀಶರು, ಗಣ್ಯರು ಹಾಗೂ ಸಾರ್ವಜನಿಕರು ಚಿತ್ರ ವೀಕ್ಷಿಸಿದರು. ಮಠಾಧೀಶರು ಹಾಗೂ ಗಣ್ಯರಿಗೆ ಪ್ಲಾಟಿನಂ ಸೀಟುಗಳ ವ್ಯವಸ್ಥೆ ಮಾಡಲಾಗಿತ್ತು.
ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ರಿಬ್ಬನ್ ಕಟ್ ಮಾಡುವ ಮೂಲಕ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ಚಲನಚಿತ್ರಕ್ಕೆ ರಾಜ್ಯದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಎರಡನೇ ಬಸವಣ್ಣ ಎಂದೇ ಕರೆಯಲಾಗುವ ಕುಮಾರ ಶಿವಯೋಗಿಗಳು 19ನೇ ಶತಮಾನದಲ್ಲಿ ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದರು. ಸಮಾನತೆ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ತಿಳಿಸಿದರು.
ಬಿ.ಎಸ್. ಲಿಂಗದೇವರ ರಚನೆ ಮತ್ತು ನಿರ್ದೇಶನದಲ್ಲಿ ಸಮಾಧಾನ ಸಂಸ್ಥೆ ನಿರ್ಮಿಸಿರುವ ವಿರಾಟಪುರ ವಿರಾಗಿ ಚಲನಚಿತ್ರವು ಹಾನಗಲ್ ಕುಮಾರ ಶಿವಯೋಗಿಗಳ ಜೀವನದ ಮೇಲೆ ಬೆಳಕು ಚೆಲ್ಲಿದೆ. ವೈದ್ಯರು, ಸಾಫ್ಟವೇರ್ ಎಂಜಿನಿಯರ್ಗಳೂ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಚಲನಚಿತ್ರದ ಪ್ರಚಾರಾರ್ಥವಾಗಿ ರಾಜ್ಯದಾದ್ಯಂತ ಆರು ರಥಗಳ ಯಾತ್ರೆ ನಡೆಸಲಾಗಿತ್ತು. ಹೀಗಾಗಿ ಜನ ತಂಡೋಪ ತಂಡವಾಗಿ ಚಿತ್ರ ವೀಕ್ಷಣೆಗೆ ಥಿಯೇಟರ್ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಚಲನಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಹಾನಗಲ್ ಕುಮಾರ ಶಿವಯೋಗಿಗಳ ಸಮಾಜೋಧಾರ್ಮಿಕ ಕಾರ್ಯಗಳು ಮಾದರಿಯಾಗಿವೆ. ಅವರ ಜೀವನ ಚರಿತ್ರೆ ಆಧಾರಿತ ಚಲನಚಿತ್ರ ನಿರ್ಮಿಸಿರುವುದು ಶ್ಲಾಘನೀಯ. ಎಲ್ಲರೂ ಕುಟುಂಬ ಸಮೇತರಾಗಿ ಚಲನಚಿತ್ರ ವೀಕ್ಷಿಸಬೇಕು ಎಂದು ಕೆಆರ್ಇ ನ್ಯಾಸ್ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಹೇಳಿದರು.
ಬೇಮಳಖೇಡದ ಚಂದ್ರಶೇಖರ ಶಿವಾಚಾರ್ಯ, ಲಾಡಗೇರಿಯ ಗಂಗಾಧರ ಶಿವಾಚಾರ್ಯ, ರಾಜ್ಯ ಮಹಿಳಾ ಟಾಸ್ಕ್ಫೋರ್ಸ್ ಸಮಿತಿಯ ಮಾಜಿ ಅಧ್ಯಕ್ಷೆ ಗುರಮ್ಮ ಸಿದ್ಧಾರೆಡ್ಡಿ, ಡಾ. ಸುಭಾಷ ಪಾಟೀಲ, ಡಾ. ಎಂ.ಎ. ಶೇರಿಕಾರ್, ಡಾ. ಅಶೋಕ ಗಂಗು, ಪ್ರಮುಖರಾದ ಅಂಬರೀಶ್ ಕೆಂಚಾ, ಓಂಪ್ರಕಾಶ ರೊಟ್ಟೆ, ವಿಜಯಲಕ್ಷ್ಮಿ ಚೊಂಡೆ, ಶಿವಕುಮಾರ ಪಾಟೀಲ, ಶಿವಾನಂದ ಮಣಿಗೆ, ಸಂಜೀವಕುಮಾರ ಬಿರಾದಾರ, ನಾಗರಾಜ ಮಠ, ಪ್ರವೀಣ ಸ್ವಾಮಿ, ವರದಯ್ಯ ಸ್ವಾಮಿ, ಶಿವಶಂಕರ, ವಿಘ್ನೇಶ ಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಹಾಗೂ ಗಣ್ಯರು ಇದ್ದರು.