ಬೆಂಗಳೂರು: ಮರೆಯಲಾಗದ ಮಾಣಿಕ್ಯ,ಕನ್ನಡಿಗರ ರತ್ನ ಪುನಿತ್ ರಾಜಕುಮಾರ್ ಅವರ 49 ನೇ ವರ್ಷದ ಹುಟ್ಟುಹಬ್ಬ. ನಮ್ಮನ್ನೆಲ್ಲ ಅಗಲಿ ಮೂರು ವರ್ಷಗಳೇ ಕಳೆದು ಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ ಮಿಡಿದು ಸ್ವಲ್ಪ ದಿನ, ತಿಂಗಳಗಳವರೆಗೂ ನೆನದು ಮರೆತುಬಿಡುತ್ತಾರೆ. ಆದರೆ ಕನ್ನಡಿಗರ ಪ್ರೀತಿಯ ಮಗ ಅಪ್ಪು ವಿಷಯದಲ್ಲಿ ಅದು ಹಾಗಾಗಲಿಲ್ಲ. ಅಗಲಿ ಮೂರು ವರ್ಷವಾದರೂ ಇಂದಿಗೂ ಪ್ರತಿದಿನ ಕಂಬನಿ ಮಿಡಿಯುವವರಿದ್ದಾರೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಅಪ್ಪು ಅಭಿಮಾನಿಗಳು ಇಂದು “ಸ್ಪೂರ್ತಿ ದಿನ”ವಾಗಿ ಆಚರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸ್ಪೂರ್ತಿ ದಿನ ಪೋಸ್ಟರ್ಗಳು, ಹುಟ್ಟುಹಬ್ಬದ ಶುಭಾಶಯಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿವೆ. “ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ” ಎನ್ನುವ ಅಪ್ಪು ಹೇಳಿಕೆಯ ಸ್ಪೆಷಲ್ ಸಿಡಿಪಿ ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಡಿಪಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳ ಫೇಸ್ಬುಕ್, ಇನ್ಸ್ಟಾ, ವಾಟ್ಸಪ್ನಲ್ಲಿ ರಾರಾಜಿಸುತ್ತಿದೆ.
ಇನ್ನು ದಿ.ಪುನೀತ್ ರಾಜ್ಕುಮಾರ್ ಅವರ 49ನೇ ಹುಟ್ಟುಹಬ್ಬದ ಸವಿನೆನಪಿನ ಈ ದಿನ (ಮಾರ್ಚ್ 17) ಅಪ್ಪು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪ ಸ್ಮಾರಕಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಕೇಕ್ ಕತ್ತರಿಸಿ ಫ್ಯಾನ್ಸ್ ಸಂಭ್ರಮಿಸಲು ಆರಂಭಿಸಿದ್ದಾರೆ. ಅಪ್ಪು ಕುಟುಂಬದವರೂ ಸಮಾದಿ ಬಳಿ ಆಗಮಿಸಲಿದ್ದಾರೆ. ಇಂದು ಲಕ್ಷಾಂತರ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸಮಾದಿ ಬಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಪ್ರತಿಯೊಂದು ಮನೆಯಲ್ಲಿ ತಮ್ಮ ಮನೆ ಮಗನ ಜನ್ಮ ದಿನವನ್ನು ಆಚರಿಸುವ ಹಾಗೆ ಕೇಕ್ ಕಟ್ ಮಾಡುವ ಮೂಲಕ ಪ್ರೀತಿ ವಾತ್ಸಲ್ಯ ತೋರಿ ಕಣ್ಣೀರು ಹಾಕುತಿದ್ದಾರೆ. ಅಭಿಮಾನಿಗಳಲ್ಲಿ ಅವರನ್ನು ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗಿಲ್ಲ. ಅನೇಕ ಮನೆಗಳ ದೇವರ ಮನೆಯಲ್ಲಿ ಪೂಜ್ಯನೀಯ ಸ್ಥಾನ ಪಡೆದಿದ್ದಾರೆ.
ಇನ್ನು ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಭಿಮಾನಿಗಳು ಅಮೆರಿಕದ ನ್ಯೂಯಾರ್ಕ್ನ ಟೈಂಸ್ಕ್ವೇರ್ನಲ್ಲಿ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗುತ್ತಿದೆ.