ಸ್ಯಾಂಡಲ್ವುಡ್ ನಟ ಜಗ್ಗೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ ಇಂದು ಅವರು ರಾಯರ ಬಳಿ ತೆರಳಿದ್ದಾರೆ. ಮಂತ್ರಾಲಯದಲ್ಲಿ ರಾಯರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದಲೂ ಮಂತ್ರಾಲಯದಲ್ಲಿರುವ ಜಗ್ಗೇಶ್ ಇಂದು ಅಲ್ಲಿಂದಲೇ ಫೇಸ್ಬುಕ್ ಲೈವ್ ಬಂದಿದ್ದರು.
ಮಂತ್ರಾಲಯದಲ್ಲಿ ಲೈವ್ ಬಂದ ಜಗ್ಗೇಶ್, ‘ನಾನು ನೇರ ನುಡಿಯ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತು ತುಸು ಹಳ್ಳಿಸೊಗಡಿನಿಂದ ಕೂಡಿದ ಮಾತುಗಳು, ಯಾರಿಗೂ ಕೆಟ್ಟದನ್ನು ಬಯಸುವವನಲ್ಲ. ಮೈಕ್ ಹಿಡಿದ ಭರದಲ್ಲಿ ಆಡಿದ ಮಾತುಗಳಿಗೆ ಯಾರಿಗಾದರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಹಾಗೆಯೇ ಎಂದು ಕೊಂಡು ಕ್ಷಮಿಸಿಬಿಡಿ ಎಂದು ಮನವಿ ಮಾಡಿದ್ದಾರೆ. ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ಜಗ್ಗೇಶ್ ನಿಂದಿಸಿ ಮಾತನಾಡಿದ್ದರು. ಅದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಜಗ್ಗೇಶ್ ಈ ಕ್ಷಮೆ ಕೇಳಿದ್ದಾರೆ.
ಸಿನಿಮಾ ವಿಚಾರಕ್ಕೂ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ಒಂದು ಸಿನಿಮಾ ಮಾಡಿದ್ದೆ. ಆ ಸಿನಿಮಾ ನೋಡಿದ ಹಲವರು ನನ್ನ ಮೇಲೆ ಬೇಸರ ಮಾಡಿಕೊಂಡಿದ್ದಾರೆ’ ಎಂದರು ನೆಟ್ವರ್ಕ್ ಸಮಸ್ಯೆ ಇದ್ದ ಕಾರಣ ಜಗ್ಗೇಶ್ ಮಾತುಗಳು ಸರಿಯಾಗಿ ಕೇಳುತ್ತಿರಲಿಲ್ಲ. ಅದರ ನಡುವೆಯೂ ಮಾತನಾಡಿದ ಜಗ್ಗೇಶ್, ‘ಅದು ನನ್ನ ಸಿನಿಮಾ ಅಲ್ಲ, ನಿರ್ದೇಶಕನನ್ನು ನಂಬಿಕೆ ಕೆಲಸ ಕೊಟ್ಟೆ. ಆ ನಿರ್ದೇಶಕ ತನ್ನ ಆಸೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿದ್ದಾನೆ. ಆ ಸಿನಿಮಾದಿಂದ ಅಕಸ್ಮಾತ್ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.