ಗದಗ: ಈಗಾಗಲೇ ಭೀಕರ ಬರಗಾಲದಿಂದ ಬೇಸತ್ತ ರೈತರು ಛಲ ಬಿಡದೆ ಒಣ ಮೆಣಸಿಕಾಯಿ ಬೆಳೆ ಬೆಳೆದಿದ್ದಾರೆ. ನೀರಿನ ಸಂಕಷ್ಟ ಎದುರಿಸುತ್ತಿರುವ ರೈತರು ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಮೆಣಸಿನಕಾಯಿ ಬೆಳದಿದ್ದಾರೆ. ಆರಂಭದಲ್ಲಿ ಚಿನ್ನದ ಬೆಲೆ ಇದ್ದ ಒಣ ಮೆಣಸಿಗೆ ಈಗ ಧಿಡೀರ್ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ.
ಕಳೆದ ಹದಿನೈದು ದಿನಗಳ ಹಿಂದೆ ಒಂದು ಕ್ವಿಂಟಾಲ್ ಒಣ ಮೆಣಸಿನಕಾಯಿಗೆ 60 ರಿಂದ 70 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು. ಆದರೆ ಈಗ ಒಂದು ಕ್ವಿಂಟಾಲ್ಗೆ 10 ರಿಂದ 12 ಸಾವಿರ ಬೆಲೆ ಸಿಗುತ್ತಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಹೆಚ್ಚು ಗದಗ ಜಿಲ್ಲೆಯ ಮೆಣಸಿನಕಾಯಿ ಮಾರಾಟವಾಗುತ್ತವೆ. ಇತ್ತ ಬರಗಾಲದಿಂದ ನೀರಿನ ಕೊರತಯಿಂದ ಬೇಸತ್ತ ರೈತರಿಗೆ ಮೆಣಸಿಕಾಯಿಯನ್ನು ರಕ್ಷಣೆ ಮಾಡುವುದು ಇನ್ನೊಂದು ಸವಾಲಾಗಿತ್ತು ಇಲಿ,ಹುಳುಗಳ ಕಾಟದಿಂದ ಮೆಣಸಿನ ಬಣ್ಣ ಬದಲಾಗಿದ್ದರೆ ಉತ್ತಮ ಬೆಲೆ ಕೂಡ ಸಿಗುತ್ತಿರಲಿಲ್ಲ.
ಹೀಗಾಗಿ ಒಂದು ಚೀಲಕ್ಕೆ ಒಂದು ತಿಂಗಳಿಗೆ 30 ರೂಪಾಯಿ ಹಣ ಕೊಟ್ಟು ಕೋಲ್ಡ್ ಸ್ಟೋರೇಜ್ನಲ್ಲಿ ಸ್ಟಾಕ್ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೇವಲ 3 ಕೋಲ್ಡ್ ಸ್ಟೊರೇಜ್ಗಳಿದ್ದು ಅದರಲ್ಲಿ 2 ಭರ್ತಿಯಾಗಿದ್ದು ಇನ್ನೊಂದು ಇನ್ನೆರಡು ದಿನದಲ್ಲಿ ಭರ್ತಿಆಗಲಿದೆ ಹಾಗಾಗಿ ಉಳಿದ ಮೆಣಸನ್ನು ಎಲ್ಲಿ ರಕ್ಷಣೆ ಮಾಡುವುದು ಎಂಬ ಗೊಂದಲದಲ್ಲಿ ರೈತರಿದ್ದಾರೆ. ಈ ಕಾರಣ ಮೆಣಸಿಕಾಯಿಗೆ ಬೆಂಬಲ ಬೆಲೆ ನೀಡಿ ಕೂಡಲೆ ಖರೀದಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.