ಬೆಂಗಳೂರು: ಸೆಲೆಬ್ರಿಟಿಗಳು ಧರಿಸಿದ್ದ ಹುಲಿ ಉಗುರಿನ ಲಾಕೆಟ್ ಇದೀಗ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ವಿಚಾರವಾಗಿದೆ. ಹಲವರ ವಿಚಾರಣೆ, ಕೆಲವರ ಬಂಧನ ನಡೆದಿದೆ. ಅದೇ ರೀತಿ ನಟ ದರ್ಶನ್ ಮೇಲೆ ಹುಲಿ ಉಗುರು ಲಾಕೆಟ್ ಧರಿಸಿದ ಆರೋಪ ಎದುರಾಗಿದೆ. ದರ್ಶನ್ ವಿರುದ್ಧ ವಂದೇ ಮಾತರಂ ಸಂಘಟನೆಯ ಮುಖಂಡ ಶಿವಕುಮಾರ್ ಅವರು ದೂರು ನೀಡಿದ್ದರು.
ಈಗ ದರ್ಶನ್ ಅಭಿಮಾನಿಗಳಿಂದ ಶಿವಕುಮಾರ್ಗೆ ಕೊಲೆ ಬೆದರಿಕೆ ಬಂದಿದೆ. ಇದರಲ್ಲಿ ದರ್ಶನ್ ಅವರ ಕೈವಾಡ ಇದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಅಕ್ಟೋಬರ್ 25ರಂದು ದರ್ಶನ್ ವಿರುದ್ಧ ಅರಣ್ಯಾಧಿಕಾರಿಗೆ ದೂರು ಕೊಟ್ಟಿದ್ದೆವು. ದೂರು ನೀಡಿದ್ದಕ್ಕೆ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರ ಅಭಿಮಾನಿಗಳು ನಿನ್ನೆ ನನ್ನ ಕಾರನ್ನು ಹಿಂಬಾಲಿಸಿ ಟಚ್ ಮಾಡಿದ್ದಾರೆ. ದರ್ಶನ್ ತಪ್ಪು ಮಾಡಿಲ್ಲ ಎಂಬುದಾದರೆ ಅಭಿಮಾನಿಗಳು ಯಾಕೆ ಈ ರೀತಿ ಮಾಡುತ್ತಿದ್ದಾರೆ? ದರ್ಶನ್ ಅಭಿಮಾನಿಗಳ ಸಂಘದವರೇ ಈ ಕೆಲಸ ಮಾಡುತ್ತಿದ್ದಾರೆ. ಬೆದರಿಕೆ ಕರೆ ಹಿಂದೆ ಶೇಕಡಾ 100ರಷ್ಟು ದರ್ಶನ್ ಅವರ ಕೈವಾಡವಿದೆ’ ಎಂದು ಶಿವಕುಮಾರ್ ಹೇಳಿಕೆ ನೀಡಿದ್ದಾರೆ.