ಬೆಂಗಳೂರು: ನಟ ನಾಗಭೂಷಣ್ ಅವರ ಕಾರು ಕೆಲ ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿತ್ತು. ಈ ವೇಳೆ ಮಹಿಳೆ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ನಾಗಭೂಷಣ್ ಕಾರು ಕೂಡ ಸಾಕಷ್ಟು ಜಖಂಗೊಂಡಿತ್ತು. ಘಟನೆ ಕುರಿತು ನಾಗಭೂಷಣ್ ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಮಾತನಾಡಿದ್ದಾರೆ.
‘ನಾನು ತುಂಬ ತಡವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಅಂದು ಆರ್ಆರ್ ನಗರದಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗುವಾಗ ಅಪಘಾತ ಆಯಿತು. ಅದರ ಬಗ್ಗೆ ಪೊಲೀಸ್ ದೂರನ್ನು ನೀಡಲಾಗಿದೆ. ಎಲ್ಲ ಮಾಹಿತಿ ನಿಮಗೂ ತಿಳಿದಿದೆ. ಕೆಲವು ಕಡೆ ಹಿಟ್ & ರನ್ ಅಂತೆ.. ಹಾಗಂತೆ, ಹೀಗಂತೆ ಅಂತೆಲ್ಲ ಸುದ್ದಿಯಾಗಿದೆ. ಖಂಡಿತ ಅಲ್ಲಿಂದ ಅವತ್ತು ನಾನು ಓಡಿಹೋಗಲಿಲ್ಲ. ಆಕ್ಸಿಡೆಂಟ್ ಆದ ಕೂಡಲೇ ನಾನೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ’ ಎಂದು ನಾಗಭೂಷಣ್ ಹೇಳಿದ್ದಾರೆ.
ಆ ಮಹಿಳೆಗೆ ತುಂಬ ರಕ್ತ ಬರುತ್ತಿತ್ತು. ನಾನೇ ನನ್ನ ಮಡಲಿಗೆ ಹಾಕಿಕೊಂಡು, ಅವರಿಗೆ ‘ಏನಾಗಲ್ಲ ಏನಾಗಲ್ಲ..’ ಎನ್ನುತ್ತಲೇ ಅವರನ್ನು ಆಟೋದಲ್ಲಿ ಮಲಗಿಸಿದೆ. ಆ ಮಹಿಳೆಯ ಪತಿಗೂ ಪೆಟ್ಟಾಗಿತ್ತು. ಅವರಿಬ್ಬರನ್ನು ಆಸ್ಪತ್ರೆಗೆ ನಾನೇ ದಾಖಲು ಮಾಡಿದೆ. ಅದೇ ವೇಳೆಗೆ ನಾನೇ ಪೊಲೀಸರಿಗೆ, ‘ನನ್ನ ಕಡೆಯಿಂದ ಈ ಥರದ್ದೊಂದು ಅಪಘಾತ ಆಗಿದೆ’ ಅಂತ ಮಾಹಿತಿ ನೀಡಿದೆ. ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಶುರು ಮಾಡಿದ್ರು. ಆದರೆ ಮಹಿಳೆ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ಹೇಳಿದರು. ಅಷ್ಟೊತ್ತಿಗಾಗಲೇ ನಾನು ಮಾನಸಿಕವಾಗಿ ಕುಸಿದು ಹೋಗಿದ್ದೆ’ ಎಂದು ನಾಗಭೂಷಣ್ ತಿಳಿಸಿದ್ದಾರೆ.
ಪೊಲೀಸರು ಆಸ್ಪತ್ರೆಗೆ ಬಂದು ನನ್ನನ್ನು ಕರೆದುಕೊಂಡು ಹೋದರು. ಮುಂದಿನ ಪ್ರಕ್ರಿಯೆಗಳೇನಿದೆ, ಅದನ್ನು ಮಾಡಿದರು. ನನಗೆ ‘ಕುಡಿದಿದ್ದೀಯಾ’ ಅಂತ ಕೇಳಿದ್ರು. ನಾನು ‘ಇಲ್ಲ’ ಎಂದು ಹೇಳಿದೆ. ನಂತರ, ‘ಬ್ಲಡ್ ಟೆಸ್ಟ್ ಕೂಡ ಮಾಡಿಸಿ..’ ಅಂದ್ರು. ಅದನ್ನೂ ಮಾಡಿಸಿದೆ. ಇಡೀ ರಾತ್ರಿ ನಾನು ಸ್ಟೇಷನ್ನಲ್ಲೇ ಇದ್ದೆ. ಬೆಳಗ್ಗೆ ಇನ್ಸ್ಪೆಕ್ಟರ್ ಬಂದಮೇಲೆ ನನ್ನನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದರು. ಆ ರಸ್ತೆಯಲ್ಲಿ ತುಂಬ ವೇಗವಾಗಿ ಹೋಗಲು ಸಾಧ್ಯವಿಲ್ಲ. ರಸ್ತೆಯಲ್ಲಿ ಹೋಗುವಾಗ ಸಡನ್ ಆಗಿ ಅವರು ಅಡ್ಡ ಬಂದರು, ಅಪಘಾತವಾಯಿತು’ ಎಂದು ನಾಗಭೂಷಣ್ ತಿಳಿಸಿದ್ದಾರೆ.