ನವದೆಹಲಿ/ ಉಡುಪಿ: ಸೋಮವಾರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಜಗತ್ಪ್ರಸಿದ್ಧ ಉಡುಪಿ ಅಡುಗೆಯ ರುಚಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಮಂತ್ರಿ ಅಮಿತ್ ಶಾ ಸೇರಿದಂತೆ ದೇಶಾದ್ಯಂತದಿಂದ ಆಗಮಿಸಿದ್ದ ಇನ್ನೂರಕ್ಕೂ ಅಧಿಕ ಗಣ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಲೋಕಪ್ರಸಿದ್ಧ ಉಡುಪಿ ಅಡುಗೆ ತಯಾರಿಸಬೇಕೆಂಬ ಮನವಿಯ ಮೇರೆಗೆ ಉಡುಪಿಯ ಪ್ರಸಿದ್ಧ ಬಾಣಸಿಗ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಭಾನವಾರ ರಾತ್ರಿ ನವದೆಹಲಿಗೆ ತೆರಳಿ ಸೋಮವಾರ ಅಡುಗೆ ತಯಾರಿಸಿದ್ದಾರೆ . ಭಾಗವಹಿಸಿದ್ದ ಎಲ್ಲರೂ ಉಡುಪಿಯ ಅಡುಗೆಯ ಸವಿಯುಂಡು ಬಾಯಿ ಚಪ್ಪರಿಸಿ ಬಹುತ್ ಅಚ್ಚಾ ಥಾ ಎಂದು ಸುಬ್ಬಣ್ಣ ( ಸುಬ್ರಹ್ಮಣ್ಯ ಆಚಾರ್ಯ) ನವರನ್ನು ಪ್ರಶಂಸಿದ್ದಾರೆ .
ಈ ಮೂಲಕ ರಾಜಧಾನಿಯಲ್ಲಿ ಅದೂ ಅಮಿತ್ ಶಾ ನಡ್ಡಾ ರಂಥ ಗಣ್ಯಾತಿಗಣ್ಯರಿಗೆ ಉಡುಪಿ ಅಡುಗೆಯ ಸವಿಯುಣಿಸಿದ ಅತೀವ ಸಂತಸದಲ್ಲಿದ್ದಾರೆ ಸುಬ್ಬಣ್ಣ.
ಪ್ರಧಾನಿ ಮೋದಿಯವರೂ ಈ ಸಭೆಯಲ್ಲಿ ಸಂಜೆ ಭಾಗವಹಿಸಿದ್ದರು. ಆದರೆ ಮಧ್ಯಾಹ್ನದ ಊಟಕ್ಕೆ ಬಂದಿರಲಿಲ್ಲ . ಜೆಪಿ ನಡ್ಡಾ ಅವರು ಅಡುಗೆಯ ರುಚಿ ಸವಿದು ಖುದ್ದು ಸುಬ್ಬಣ್ಣ ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮಾತನಾಡಿಸಿ ಶಹಬ್ಬಾಸ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .
ಬಿಜೆಪಿ ರಾ.ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೂ ಭೇಟಿಯಾಗಿ ಅಡುಗೆ ಬಹಳ ಬಹಳ ಚೆನ್ನಾಗಿತ್ತು ಅಂತ ಹೇಳಿದ್ದಾರೆ .
ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ಸಾಂಬಾರ್ , ಚಟ್ನಿ ಮಧ್ಯಾಹ್ನದ ಊಟಕ್ಕೆ ಉಪ್ಪಿನಕಾಯಿ , ಹುರುಳಿ ಚಟ್ನಿ , ಕೋಸುಂಬರಿ ಎರಡು ಬಗೆ ಪಲ್ಯ , ಚಿತ್ರಾನ್ನ , ಅನ್ನ ಹಪ್ಪಳ ಸಂಡಿಗೆ , ಸಂಡಿಗೆ ಮೆಣಸು , ಸಾರು , ಗಟ್ಟಿಬಜೆ , ಪೂರಿ ಕೂರ್ಮ , ಮೆಣಸುಕಾಯಿ , ಮಟ್ಟುಗುಳ್ಳದ ಹುಳಿ , ಹಯಗ್ರೀವ ಮಡ್ಡಿ , ಖರ್ಜೂರ ಪಾಯಸ ಮೊಸರು ಮಜ್ಜಿಗೆ ತಯಾರಿಸಿದ್ದಾರೆ ಇತರೆ ಕೆಲವು ಸಿಹಿ ಭಕ್ಷ್ಯ ಗಳನ್ನು ಅಲ್ಲಿಯ ಸ್ಥಳೀಯರೇ ತಯಾರಿಸಿದ್ದಾರೆ .
ಕಾರ್ಯಕ್ರಮ ಮುಗಿಸಿ ಮಂಗಳವಾರ ಅಪರಾಹ್ನ ವಿಮಾನದ ಮೂಲಕ ಉಡುಪಿಗೆ ಮರಳಿದ ಸುಬ್ಬಣ್ಣ , ಗುರುಗಳಾದ ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕೃಪೆಯೇ ಇದಕ್ಕೆಲ್ಲ ಕಾರಣ ; ಅವರೇ ನಮಗೆ ಸ್ಫೂರ್ತಿ ಎಂದು ಭಾವುಕರಾಗಿ ನುಡಿದ್ದಾರೆ.
ಜಿ ವಾಸುದೇವ ಭಟ್ ಪೆರಂಪಳ್ಳಿ