ಬೆಂಗಳೂರಿನ ಶಾಲೆಗಳಿಗೆ ಬೆದರಿಕೆ ಪತ್ರ ಬಂದಿರುವುದು ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ನಾಡಿನ ಎಲ್ಲರನ್ನೂ ಚಿಂತೆಗೀಡು ಮಾಡಿದೆ. ಇದು ಕಿಡಿಗೇಡಿಳ, ವಿದ್ಯಾರ್ಥಿಗಳ ಕುಕೃತ್ಯವೋ ತಿಳಿದಿಲ್ಲ. ಅದಕ್ಕೆ ಮೊದಲೇ ಬಿಜೆಪಿಗರು ಈ ಬಗ್ಗೆ ಷರಾ ಬರೆದು ಇದು ಭಯೋತ್ಪಾದಕರ ಕೃತ್ಯ ಎಂದು ಹೇಳಿದ್ದಾರೆ. ಈ ಹಿಂದೆಯೂ ಹಲವು ಬಾರಿ ಐಟಿ ಕಂಪನಿಗಳು, ಶಾಲೆಗಳಿಗೆ ಬೆದರಿಕೆ ಪತ್ರ, ಕರೆ ಬಂದಿತ್ತು, ವಿಚಾರಣೆ ವೇಳೆ ಅದು ಅತೃಪ್ತ ವಿದ್ಯಾರ್ಥಿಗಳು, ಉದ್ಯೋಗಿಗಳ ಕೃತ್ಯ ಎಂಬುದು ತಿಳಿದುಬಂದಿತ್ತು. ಇದೀಗ ಇದು ಕೂಡ ಅಂತಹುದೇ ಘಟನೆ ಎಂಬ ಅನುಮಾನವೂ ಕಾಡುತ್ತಿದೆ. ಈ ಕುರಿತ ಒಂದು ಸ್ಥೂಲ ನೋಟ ಇಲ್ಲಿದೆ.
ಪತ್ರದಲ್ಲಿ ಏನಿದೆ: ಶಾಲೆಗಳಿಗೆ ಬಂದಿರುವ ಈಮೇಲ್ನಲ್ಲಿ “ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಇಸ್ಲಾಂನ ಕತ್ತಿಯ ಭಾರದಲ್ಲಿ ಸಾಯಿರಿ. ಬಿಸ್ಮಿಲ್ಲಾ, ನಾವು ಅಲ್ಲಾನ ನಿಜವಾದ ಧರ್ಮವನ್ನು ಇಡೀ ಭಾರತಕ್ಕೆ ಹರಡುತ್ತೇವೆ” ಎಂದು ಪತ್ರದಲ್ಲಿ ಬರೆಯಲಾಗಿದೆ. ನಮ್ಮ ಗುಲಾಮರಾಗಲು ಅಥವಾ ಅಲ್ಲಾಹನ ನಿಜವಾದ ಧರ್ಮವನ್ನು ಸ್ವೀಕರಿಸಲು ನಿಮಗೆ ಆಯ್ಕೆ ಇದೆ. ದೇವಾಲಯಗಳು, ನಿಮ್ಮ ವಿಗ್ರಹಗಳು, ಬುದ್ಧನಿಂದ ಅನಂತತೆಯವರೆಗೆ, ಅವು ನಮ್ಮ ಸ್ಫೋಟಗಳ ಸದ್ದಿಗೆ ಹಾರಿ ಹೋಗುತ್ತದೆ” ಎಂದು ಬೆದರಿಕೆ ಇಮೇಲ್ನಲ್ಲಿ ತಿಳಿಸಲಾಗಿದೆ. ಶಾಲೆಯ ಆವರಣದಲ್ಲಿ ಸ್ಫೋಟಕ ಸಾಧನಗಳಿವೆ ಎಂದು ಇಮೇಲ್ನಲ್ಲಿ ತಿಳಿಸಲಾಗಿದೆ. ಮುಂಬೈ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ಇಮೇಲ್ “ನವೆಂಬರ್ 26 ರಂದು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರು ನೂರಾರು ವಿಗ್ರಹಾರಾಧಕರನ್ನು ಕೊಂದರು. ಹತ್ತಾರು ಮಿಲಿಯನ್ ಕಾಫಿರ್ಗಳ ಮೇಲೆ ಚಾಕು ಹಿಡಿಯುವುದು ನಿಜವಾಗಿಯೂ ಶಕ್ತಿಯುತವಾಗಿದೆ” ಎಂದು ಬರೆಯಲಾಗಿದೆ.
ಪೊಲೀಸರು ಏನು ಹೇಳ್ತಾರೆ: ಪತ್ರಗಳಲ್ಲಿನ ಜಿಹಾದಿ ಬರವಣಿಗೆ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಕಿಡಿಗೇಡಿಗಳ ಕೈವಾಡವೂ ಇರಬಹುದು ಎಂದು ಅವರು ಹೇಳಿದ್ದಾರೆ. ತನಿಖೆಯಿಂದ ಎಲ್ಲವೂ ಬಯಲಾಗಲಿದೆ ಎಂದಿದ್ದಾರೆ.
ಸಿಎಂ ಏನು ಹೇಳಿದ್ರು: ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ಬೆಂಗಳೂರು ನಗರದ 15 ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಇಮೇಲ್ಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, 24 ಗಂಟೆಯೊಳಗೆ ಅಪರಾಧಿಗಳನ್ನು ಹಿಡಿಯುವ ವಿಶ್ವಾಸವಿದೆ ಎಂದು ಅವರು ಬೆದರಿಕೆ ಈಮೇಲ್ ಬೆದರಿಕೆ ಸ್ವೀಕರಿಸಿದ ಶಾಲೆಗಳಲ್ಲಿ ಒಂದಾದ ನೀವ್ ಅಕಾಡೆಮಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪ್ರಜ್ಞಾವಂತರಾಗುವುದು ಅಗತ್ಯ: ಬಿಜೆಪಿಯವರೇನು ಶಾಲೆಗಳಿಗೆ ಬೆದರಿಕೆ ಪತ್ರ ಬಂದಿರುವುದು ಉಗ್ರಗಾಮಿ ಸಂಘಟನೆಗಳಿಂದ ಎಂದು ತನಿಖೆಗೆ ಮೊದಲೇ ಹೇಳಿಕೆ ನೀಡುತ್ತಿದ್ದಾರೆ. ಆದರೆ ಈ ಹಿಂದಿನ ಘಟನೆಗಳನ್ನು ಆಧರಿಸಿ ಹೇಳುವುದಾದರೆ ವೈಯಕ್ತಿಕ ದ್ವೇಷ, ಸೇರಿದಂತೆ ಒತ್ತಡ ಕಾರಣದಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ತಮ್ಮದೇ ಶಾಲೆ, ಉದ್ಯೋಗಿ ಸಂಸ್ಥೆ ಮೇಲೆ ಬೆದರಿಕೆ ಕರೆ ಮಾಡಿರುವ ಹಲವು ಘಟನೆಗಳು ನಡೆದಿದೆ. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಸಂಯಮ, ತಾಳ್ಮೆ ಕಾಯ್ದುಕೊಂಡು ಸಮಾಜದಲ್ಲಿ ಗೊಂದಲ, ಗದ್ದಲ ಸೃಷ್ಟಿಸದೇ ಇರುವುದು ಪ್ರಜ್ಞಾವಂತರ ನಡೆಯಾಗಿದೆ.