ರಾಂಚಿ: ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕುಮಾರಿತಾ ಗ್ರಾಮದ ನಿವಾಸಿ ಚುಂಬ್ರು ತಮ್ಸೋಯ್ ಏಕಾಂಗಿಯಾಗಿ 100 ಅಡಿ ಅಗಲ, ಉದ್ದ ಅಳತೆಯ 20 ಅಡಿ ಆಳವಿರುವ ಕೊಳವನ್ನು ನಿರ್ಮಿಸಿದ್ದು, ಇದೀಗ ಇಡೀ ಗ್ರಾಮದ ನೀರಿನ ಅಗತ್ಯವನ್ನು ಪೂರೈಸುತ್ತಿದ್ದು, ಈತನ ಸಾಹಸಕ್ಕೆ ವ್ಯಾಪಕ ಜನಮೆಚ್ಚುಗೆ ವ್ಯಕ್ತವಾಗಿದೆ.
ತಮ್ಸೋಯ್ ಏಕಾಂಗಿ ಹೋರಾಟದ ಹಾದಿ ಹೀಗಿದೆ: ಸುಮಾರು 45 ವರ್ಷಗಳ ಹಿಂದೆ 1975 ರಲ್ಲಿ ಈ ಪ್ರದೇಶದ ಜನರು ಬರಗಾಲದಿಂದ ಆಹಾರ ಕೊರತೆ ಅನುಭವಿಸಿದಾಗ ಉತ್ತರ ಪ್ರದೇಶದ ಗುತ್ತಿಗೆದಾರರೊಬ್ಬರು ಗ್ರಾಮಕ್ಕೆ ಬಂದು ಕೆಲವು ಯುವಕರನ್ನು ರಾಯ್ ಬರೇಲಿಗೆ ದೈನಂದಿನ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋದರು. ಈ ಪೈಕಿ ತಾಮ್ಸೋಯ್ ಒಬ್ಬರಾಗಿದ್ದರು. ಅಲ್ಲಿ ಅವರಿಗೆ ಕಾಲುವೆ ನಿರ್ಮಾಣಕ್ಕೆ ಮಣ್ಣು ಅಗೆಯುವ ಕೆಲಸ ನೀಡಲಾಯಿತು. ಆದರೆ ಅದಕ್ಕೆ ತಕ್ಕ ಕೂಲಿ ದೊರೆಯಲಿಲ್ಲ. ಅಲ್ಲದೆ ಕಾರ್ಮಿಕರಿಗೆ ಕಿರುಕುಳ ನೀಡಿದರು. ಈ ವೇಳೆ ನಾನು ಇಲ್ಲಿದ್ದು, ಕೂಲಿ ಕೆಲಸ ಮಾಡುವುದಕ್ಕಿಂತ ಊರಿಗೆ ಹೋಗುವುದ ಮೇಲೆಂದು ಅರಿತು ಅಲ್ಲಿಂದ ಹುಟ್ಟೂರಿಗೆ ಹಿಂದಿರುಗಿದರು.
ಗ್ರಾಮವನ್ನು ತಲುಪಿದ ನಂತರ, ತಮ್ಸೋಯ್ ತನ್ನ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಪ್ರಾರಂಭಿಸಿದರು. ಆದರೆ ಹತ್ತಿರದ ಕೊಳದ ಮಾಲೀಕರು ನೀರಾವರಿಗಾಗಿ ನೀರನ್ನು ಪೂರೈಸಲು ನಿರಾಕರಿಸಿದಾಗ ನಿರಾಶೆಗೊಂಡರು. ಅದೇ ದಿನ ತಮ್ಮ ಜಾಗದಲ್ಲಿ ಕೆರೆ ನಿರ್ಮಿಸಲು ತಮ್ಸೋಯ್ ನಿರ್ಧರಿಸಿದರು. ಪ್ರತಿದಿನ ಭೂಮಿಯನ್ನು ಅಗೆದು ಕೆರೆ ನಿರ್ಮಾಣ ಮುಂದಡಿಯಿಟ್ಟರು. ರಾತ್ರಿ ವೇಳೆಯಲ್ಲಿ ಕೂಡ ಕಟ್ಟಿಗೆ ಬಳಸಿ ಬೆಳಕು ಮಾಡಿಕೊಂಡು ಏಕಾಂಗಿಯಾಗಿ ಭೂಮಿ ಅಗೆದು ಜಲದೇವತೆಯನ್ನು ಕಾಣಲು ಹೋರಾಟ ನಡೆಸಿದರು. ಈ ಮಧ್ಯೆ ವಿವಾಹ ನಡೆಯಿತು. ಆದರೆ ತಮ್ಸೋಯ್ ಅವರ ಪ್ರಯತ್ನವನ್ನು ಹುಚ್ಚುಸಾಹಸವೆಂದು ಮೂದಲಿಸಿ ಆಕೆ ಅವರನ್ನು ತ್ಯಜಿಸಿ ಬೇರೆಯವರೊಂದಿಗೆ ವಾಸಮಾಡಲು ಆರಂಭಿಸಿದರು. ಆದರೆ ಛಲಬಿಡದ ವಿಕ್ರಮನಂತೆ ತಮ್ಸೋಯ್ ಕೆಲಸ ಮುಂದುವರಿಸಿದರು. ಕೆಲ ವರ್ಷಗಳಲ್ಲಿ ಕೆರೆ ನಿರ್ಮಾಣ ಪೂರ್ಣಗೊಂಡು, ಜಲಸಂಗ್ರಹ ಆರಂಭವಾಯಿತು. ಆದರೆ ತಮ್ಮ ಪ್ರಯತ್ನ ಮುಂದುವರಿಸಿದ ತಮ್ಸೋಯ್ 100 ಅಡಿ ಅಗಲ 100 ಅಡಿ ಉದ್ದದ ಬೃಹತ್ ಕೆರೆ ನಿರ್ಮಿಸಿದ್ದಾರೆ. ಇದರ ಗಾತ್ರ ಹೆಚ್ಚಿಸುವ ಚಿಂತನೆಯೂ ಅವರಲ್ಲಿದೆ. ಈ ಕೊಳವು ಈಗ ವರ್ಷವಿಡೀ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಮೀನು ಸಾಕಣೆಯನ್ನು ನಡೆಸುತ್ತಿದ್ದಾರೆ.
ಹುಚ್ಚನೆಂದು ಜರಿದವರಿಗೆ ಜಲದಾನ: ಈ ಕೊಳದ ಸಹಾಯದಿಂದ ತಮ್ಸೋಯ್ ಸುಮಾರು 5 ಎಕರೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಮಾವು, ಬೇವು, ಸಾಲ್ ಸೇರಿದಂತೆ ಸುಮಾರು 60 ಮರಗಳನ್ನು ನೆಟ್ಟಿದ್ದಾರೆ. ಗ್ರಾಮದ ಇತರ ರೈತರೂ ಸಹ ಕೃಷಿಗೆ ಮತ್ತು ದೈನಂದಿನ ಅಗತ್ಯಗಳಿಗೆ ಕೆರೆ ನೀರನ್ನು ಬಳಸುತ್ತಾರೆ. ಈ ಹಿಂದೆ ಗ್ರಾಮದಲ್ಲಿ ವರ್ಷಕ್ಕೆ ಒಂದೇ ಬೆಳೆ ಬೆಳೆಯುತ್ತಿದ್ದ ರೈತರು ಈಗ ಟೊಮ್ಯಾಟೊ, ಎಲೆಕೋಸು, ಹಸಿಮೆಣಸಿನಕಾಯಿ, ಕೊತ್ತಂಬರಿ ಇತ್ಯಾದಿ ತರೆಹೇವಾರಿ ಬೆಳೆಯುತ್ತಾರೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ 200 ಅಡಿಯಿಂದ 200 ಅಡಿಯಷ್ಟು ಕೆರೆ ವಿಸ್ತೀರ್ಣವನ್ನು ಹೆಚ್ಚಿಸಲಾಗುವುದು ಎಂದು ಟಾಮ್ಸೊಯ್ ತಿಳಿಸಿದ್ದಾರೆ. ಅವರಿಗೆ 2017ರಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯೂ ದೊರೆತಿದೆ.