ಚಿಕ್ಕಮಗಳೂರು: ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಜಿಲ್ಲೆಯ ತಂಪಾದ ನಿಸರ್ಗತಾಣಗಳಿಗೆ ದಾಂಗುಡಿ ಇಟ್ಟಿದೆ.
ವಿಧಾನಸಭೆ ಚುನಾವಣೆ ಮುಗಿದು, ಫಲಿತಾಂಶಗಳು ಹೊರಬಿದ್ದ ನಂತರ ನಿರಾಳವಾಗಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಚುನಾವಣೆ ಕರ್ತವ್ಯದಲ್ಲಿ ತೊಡಗಿಸಿಕೊಂಡ ಸರ್ಕಾರಿ ಸಿಬ್ಬಂದಿಗಳು, ಪೋಷಕರ ಬಿಡುವಿಗಾಗಿ ಕಾಯುತ್ತಿದ್ದ ರಜೆಯಲ್ಲಿರುವ ವಿದ್ಯಾರ್ಥಿಗಳೆಲ್ಲರೂ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ.
ಈ ಕಾರಣಕ್ಕೆ ವಾರಾಂತ್ಯ ಗಿರಿತಪ್ಪಲಿನ ಹೊನ್ನಮ್ಮನಹಳ್ಳ, ಮುಳ್ಳಯ್ಯನ ಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ, ಕವಿಕಲ್ ಗಂಡಿ, ಝರಿ ಫಾಲ್ಸ್, ಕೆಮ್ಮಣ್ಣುಗುಂಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿದ ಜೊತೆಗೆ ಜಲಪಾತಗಳಲ್ಲಿ ಮಿಂದು ಸಂಭ್ರಮಿಸಿದರು.
ಚುನಾವಣೆ ನೀತಿ ಸಂಹಿತೆಗಳಿದ್ದ ಕಾರಣಕ್ಕೆ ಪೂರ್ಣಪ್ರಮಾಣದಲ್ಲಿ ಅತಿಥಿಗಳು ತಂಗಲು ಅವಕಾಶವಿಲ್ಲದೆ ನಷ್ಟ ಅನುಭವಿಸಿದ್ದ ಹೋಂಸ್ಟೇಗಳು, ರೆಸಾರ್ಟ್ಗಳು, ವಸತಿ ಗೃಹಗಳೆಲ್ಲವೂ ಈಗ ಭರ್ತಿ ಆಗಿವೆ. ಶನಿವಾರ ಮತ್ತು ಭಾನುವಾರಗಳು ಮುಂಗಡ ಬುಕ್ಕಿಂಗ್ ಆಗಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಾರಂಭದಿಂದಲೂ ಮಳೆ ಕಡಿಮೆ ಇರುವುದಲ್ಲದೆ, ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಏರಿಕೆ ಆಗಿರುವುದರಿಂದ ಮಲೆನಾಡು ಸಹ ಕಾದ ಕಬ್ಬಿಣದಂತಾಗಿದೆ. ಸದಾ ತಂಪಾಗಿರುತ್ತಿದ್ದ ಗಿರಿ ಪ್ರದೇಶದಲ್ಲೂ ಬಿಸಿಲ ತಾಪಕ್ಕೆ ಪ್ರವಾಸಿಗರು ಹೈರಾಣಾಗುತ್ತಿದ್ದಾರೆ. ವಾಹನಗಳಲ್ಲೇ ಬೆವರುವಂತಾಗಿದೆ. ಗಿರಿತಪ್ಪಲಿನ ಜಲಪಾತಗಳಲ್ಲಿ ನೀರಿನ ಒರತೆ ಪ್ರಮಾಣ ಕಡಿಮೆ ಆಗಿದೆ. ಪ್ರಮುಖವಾಗಿ ಮಾಣಿ ಕ್ಯಾಧಾರ ಮತ್ತು ಹೊನ್ನಮ್ಮನಹಳ್ಳಗಳಲ್ಲಿ ನೀರು ಧುಮ್ಮಿಕ್ಕುವ ವೇಗ, ಒತ್ತಡ ಕಡಿಮೆ ಆಗಿರುವುದು ಪ್ರವಾಸಿಗರನ್ನು ನಿರಾಸೆಗೊಳಿಸಿದೆ. ಆದರೂ ಇರುವ ನೀರಿನಲ್ಲೇ ಮಿಂದು ಖುಷಿ ಪಡುತ್ತಿದ್ದಾರೆ. ಕವಿಕಲ್ ಗಂಡಿ ಬಳಿ ಖಾಸಗಿ ವ್ಯಕ್ತಿಯೊಬ್ಬರ ತೋಟದ ಮಧ್ಯೆ ಧುಮ್ಮಿಕ್ಕುವ ಝರಿ ಫಾಲ್ಸ್ನಲ್ಲಿ ಈಗಲೂ ನೂರಾರು ಅಡಿಗಳ ಎತ್ತರಿದಿಂದ ನೀರು ಧುಮ್ಮಿಕ್ಕುತ್ತಿರುವು ದರಿಂದ ಪ್ರತಿದಿನ ನೂರಾರು ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಬಿಸಲ ಝಳ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ಪ್ರಮುಖ ತಾಣಗಳಲ್ಲಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.
ಕವಿಕಲ್ ಗಂಡಿ ಬಳಿ ಝರಿ ಫಾಲ್ಸ್ನ ಆನಂದ ಅನುಭವಿಸಲು ಬಡ ಹಾಗೂ ಸಾಮಾನ್ಯವರ್ಗದ ಜನರಿಗೆ ಸಾಧ್ಯವಿಲ್ಲದಂ ತಾಗಿದೆ. ದತ್ತಪೀಠ ರಸ್ತೆಯಿಂದ ತೋಟದೊಳಿಗಿನ ಈ ಜಲಪಾತಕ್ಕೆ ಕರೆದೊ ಯ್ಯಲು ಖಾಸಗಿ ಜೀಪ್ನವರು ಮನಸೋ ಇಚ್ಛೆ ಹಣ ಕೀಳುತ್ತಿರುವುದು ಇದಕ್ಕೆ ಕಾರಣವಾಗಿದೆ.
ತೋಟದ ಕಚ್ಛಾ ರಸ್ತೆಯಲ್ಲಿ ಕಾರು ಇನ್ನಿತರೆ ವಾಹನಗಳಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎನ್ನುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಜೀಪ್ನವರು ಕೇವಲ ಐದು ಜನರನ್ನು ಕರೆದುಕೊಂಡು ಕೇವಲ ೨ ಕಿ.ಮೀ.ಹೋಗಿ ಬರಲು ೮೦೦ ರೂ. ಹಣ ಕೀಳುತ್ತಿದ್ದಾರೆ. ಇದು ದುಬಾರಿಯಾಯಿತು ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಖಿ ಸುಲಭದ ದರದಲ್ಲಿ ಎಲ್ಲರೂ ಹೋಗಿ ಬರಲು ಅವಕಾಶವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.