ಕಲೆ, ಸಂಸ್ಕೃತಿ, ಆಹಾರ, ಆಚಾರ ವಿಚಾರ ಹೀಗೆ ಹತ್ತು ಹಲವು ವಿಭಿನ್ನತೆಗಳನ್ನು ಹೊಂದಿರುವ ಊರು ನಮ್ಮ ತುಳುನಾಡು. ಅದರಲ್ಲಿ ಪ್ರಮುಖವಾದದ್ದು ಆಟಿ.
ಈ ಆಟಿ ಪ್ರಾರಂಭವಾಗುವುದು ಸಂಕ್ರಾಂತಿಯ ಮರು ದಿನ.
ಆಟಿ ಪ್ರಾರಂಭವಾಗಿ 15 ದಿನಗಳ ನಂತರ ಅಮಾವಾಸ್ಯೆಯ ಹಿಂದಿನ ದಿನ ಹಾಳೆ ಮರದ ಬಳಿ ತೆರಳಿ ಮರಕ್ಕೆ ನೂಲು ಕಟ್ಟಿ ನಾಳೆ ಬೆಳಗ್ಗೆಗ್ಗೆ ಮದ್ದು ತಯಾರಿಸಿ ಇಡು ಎಂದು ವನದೇವಿಯಲ್ಲಿ ಪ್ರಾರ್ಥಿಸಿ ಮರುದಿನ ಬೆಳಗ್ಗೆ ಬೇಗ ಎದ್ದು ಪಾಲೆ (ಹಾಳೆ) ಮರದ ತೊಗಟೆಯನ್ನು ಜಜ್ಜಿ ಅದರ ರಸ ತೆಗೆದು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಮುಂದಿನ ಆಷಾಡ ಮಾಸ ಬರುವವ ವರೆಗೂ ಯಾವುದೇ ಖಾಯಿಲೆ ಕಸಾಲೆಗಳು ನಮ್ಮ ದೇಹಕ್ಕೆ ಅಂಟಿಕೊಳ್ಳವುದಿಲ್ಲ ಹಾಗೂ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎನ್ನವುದು ನಮ್ಮ ಹಿರಿಯರ ನಂಬಿಕೆ.
ವಿಶೇಷವಾಗಿ ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನೆ ಹೆಚ್ಚಾಗಿ ಬಳಸುತ್ತಾರೆ. ಪ್ರಕೃತಿಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ವಿಶೇಷವಾಗಿ ಆಟಿಯಲ್ಲಿ ಉಪಯೋಗಿಸುವುದರಿಂದ ಶೀತ ,ಜ್ವರ, ಕೆಮ್ಮು ಮುಂತಾದ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು.
ಈ ತಿಂಗಳ ಆಹಾರ ಪದ್ದತಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು ಪತ್ರೊಡೆ. ಕೇಸುವಿನ ಎಲೆಯಿಂದ ತಯಾರಿಸುವ ಈ ಖಾದ್ಯ ಆಟಿ ತಿಂಗಳಲ್ಲಿ ವಿಶೇಷ ಎಂದರೂ ತಪ್ಪಾಗಲಾರದು. ಮನೆಯ ಸುತ್ತಾಮುತ್ತ ಬೆಳೆಯುವ ಕೆಸುವಿನ ಎಲೆಯಿಂದ ಯಾವುದೇ ಹೆಚ್ಚು ಖರ್ಚು ವೆಚ್ಚವಿಲ್ಲದೆ ಸುಲಭವಾಗಿ ತಯಾರಿಸಬಹುದು. ಇವುಗಳ ಜೊತೆಗೆ ತಜಂಕ್ ಸೊಪ್ಪು, ಕಣಿಲೆಯ ಪಲ್ಯಗಳು ಸಾಮಾನ್ಯವಾಗಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಹಾಗೂ ಮಳೆಗಾಲ ಪ್ರಾರಂಭವಾಗುವಾಗ ಬಲಿತ ಹಲಸಿನ ಹಣ್ಣನ್ನು ಉಪ್ಪುನೀರಿನಲ್ಲಿ ಹಾಕಿ ಇಡುವುದು ಮತ್ತು ಅದರಿಂದ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವುದು ರೂಢಿಯಲ್ಲಿದೆ.
ಆಟಿ ತಿಂಗಳ ಬಗ್ಗೆ ಮಾತನಾಡುವಾಗ ಆಟಿ ಕಲೆಂಜವನ್ನು ಮರೆತರೆ ಹೇಗೆ? ಮುಖಕ್ಕೆ ಬಣ್ಣ ಹಚ್ಚಿ ಕೈಯಲ್ಲಿ ಒಂದು ದೊಡ್ಡದಾದ ಛತ್ರಿ ಆಕಾರದ ವಸ್ತುವನ್ನು ಹಿಡಿದು ಹಾಡು ಹೇಳತ್ತಾ ಬರುವ ಆಟಿಕಲೆಂಜ ಇತ್ತಿಚಿಗೆ ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ. ಈ ಆಟಿಕಲೆಂಜ ಊರು ಸುತ್ತುತ್ತಾ ರೋಗ ರುಜಿನಗಳನ್ನು ದೂರಮಾಡುವ ದೆವರ ಪ್ರತಿನಿಧಿಯಾಗಿ ಊರಿಗೆ ಬಂದ ಮಾರಿಯನ್ನು ಓಡಿಸುತ್ತದೆ ಎನ್ನುವುದು ನಮ್ಮ ಹಿರಿಯರ ನಂಬಿಕೆಯಾಗಿದೆ.
ಇನ್ನೂ ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ತವರುಮನೆಗೆ ಕಳಿಸಿಕೊಡುವ ಪದ್ದತಿಯು ನಮ್ಮ ತುಳುನಾಡಿನಲ್ಲಿ ಅದರಲ್ಲೂ ಆಟಿಯಲ್ಲಿ ವಿಶೇಷ. ಇದನ್ನ ತುಳುವಿನಲ್ಲಿ ‘ಆಟಿ ಕುಲ್ಲುನ ಪದ್ಧತಿ’ ಎಂದು ಕರೆಯುತ್ತಾರೆ.
ಆಟಿ ತಿಂಗಳಲ್ಲಿ ಪುಷ್ಯ, ಆಶ್ಲೇಷ, ಮೇಘ ನಕ್ಷತ್ರಗಳು ಅತೀ ಹೆಚ್ಚು ಮಳೆ ಸುರಿಸುವ ನಕ್ಷತ್ರಗಳು ಎಂದು ಕರೆಯುತ್ತಾರೆ. ಇಂತಹ ಸಮಯದಲ್ಲಿ ಜನ ಸಾಮನ್ಯರು ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಆಟಿ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳು ಸಹ ನಡೆಯುವುದಿಲ್ಲ. ರೈತರಿಗೂ ಈ ಸಮಯದಲ್ಲಿ ಭತ್ತದನಾಟಿ, ತೆಂಗು,ಬಾಳೆ, ಅಡಿಕೆ ಗಿಡಗಳನ್ನು ನೆಡುವುದು ನಿಷೇಧವಿರುತ್ತದೆ.
ಇಂತಹ ಸಮಯದಲ್ಲಿ ಮನೆಯ ಒಳಗೆ ಕೂತು ಸಮಯ ಕಳೆಯಲು ಚೆನ್ನೆಮಣೆ, ಅರಸು ಆಟ ಹಾಗೂ ಮಕ್ಕಳಿಗೆ ಕಥೆ ಹೇಳುತ್ತಾರೆ.
ಇನ್ನೂ ತುಳುನಾಡಿನ ವಿಶೇಷ ಪದ್ಧತಿ ಎಂದರೆ ಅದು ನಮ್ಮ ಹಿರಿಯರನ್ನು ನೆನಪಿಸುವ ತಿಂಗಳಾಗಿದೆ. ಇಲ್ಲಿ ತೀರಿ ಹೋದ ಹಿರಿಯರಿಗೆ ‘ ಆಟಿ ಬಳಸುನ’ ಕ್ರಮ ವಿಶೇಷವಾಗಿದೆ.