21 ನೇ ಶತಮಾನದಲ್ಲೂ ದಲಿತರಿಗೆ ಹೋಟೆಲ್ ಗೆ ಪ್ರವೇಶವಿಲ್ಲ ಎಂಬ ಪದ್ಧತಿಗಳು ಇಂದಿಗೂ ಜೀವಂತವಾಗಿರುವ ಈ ಕಾಲದಲ್ಲಿ ದಲಿತ ಮಹಿಳೆಯರೇ ಸ್ಟಾರ್ ಹೊಟೇಲ್ ವೊಂದನ್ನು ನಡೆಸುತ್ತಿರುವ ಜ್ವಲಂತ ಉದಾಹರಣೆ ಮೈಸೂರಿನಲ್ಲಿ ಕಂಡು ಬಂದಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಹುಣಸೂರು ಮುಖ್ಯ ರಸ್ತೆಯಲ್ಲಿರುವ ಗ್ರೀನ್ ಹೋಟೆಲ್ ಹಿಂದುಳಿದ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ದೇಶಕ್ಕೆ ಮಾದರಿ ಹೋಟೆಲ್ ಎನಿಸಿಕೊಂಡಿದೆ. ಏಕೆಂದರೆ ಹೋಟೆಲ್ ನಲ್ಲಿ 12 ಮಂದಿ ಹಿಂದುಳಿದ ವರ್ಗದ, ಪೌರಕಾರ್ಮಿಕರ ಮಹಿಳೆಯರು ಕೆಲಸದಲ್ಲಿದ್ದು, ಇದರಲ್ಲಿ ನಾಲ್ವರು ವಿಧವೆಯರಿಗೂ ಸಹ ಇಲ್ಲಿ ಕೆಲಸ ನೀಡಿದೆ. ಅಲ್ಲದೆ ವಿದ್ಯೆ ಸೇರಿದಂತೆ ಯಾವುದೇ ಅರ್ಹತೆಗಳನ್ನು ನೋಡದೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರಿಗೆ ಇಲ್ಲಿ ಸ್ವತಃ ಹೋಟೆಲ್ ನಲ್ಲಿ ಉಚಿತ ತರಬೇತಿ ನೀಡಿ ಕೆಲಸವನ್ನು ನೀಡಿದೆ.
ಅಲ್ಲದೆ ಯಾವುದೇ ಬೇಧಭಾವವನ್ನು ಮಾಡದೆ ಹಿಂದುಳಿದ ಯುವತಿಯರಿಂದಲೇ ಬೇಕರಿ ತಿಂಡಿ ತಿನುಸುಗಳನ್ನು ತಯಾರಿಸಿ ಬರುವ ಅತಿಥಿಗಳಿಗೆ ವಿತರಿಸುವ ಸ್ವಾತಂತ್ರ್ಯವನ್ನು ಹೋಟೆಲ್ ಮಹಿಳೆಯರಿಗೆ ನೀಡಿದೆ. ಸಮಾಜದಲ್ಲಿ ಸ್ಥಾನಮಾನಗಳಿಂದ ಕಡೆಗಣಿಸಲ್ಪಟ್ಟವರಿಗೆ ಇಲ್ಲಿ ಅವಕಾಶ ಕಲ್ಪಸಿಕೊಟ್ಟದ್ದರ ಬಗ್ಗೆ ತಮ್ಮ ಹರ್ಷ ವ್ಯಕ್ತಪಡಿಸಿದ ಯುವತಿ ಪುಷ್ಪಾ ಕಳೆದ 18 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮಂತವರಿಗೂ ಅವಕಾಶ ನೀಡಿದ್ದಕ್ಕೆ ಈ ಹೋಟೆಲ್ ಗೆ ನಾನು ರುಣಿಯಾಗಿದ್ದೇನೆ.
ನಾವೇ ತಯಾರಿಸಿದ ಕೇಕ್, ಬ್ರೇಡ್, ಜ್ಯೂಸ್, ಕಾಫಿ-ಟೀಗಳನ್ನು ಹೋಟೆಲ್ ಗೆ ಬರುವ ದೇಶ-ವಿದೇಶದ ಅತಿಥಿಗಳಿಗೆ ನಾವೇ ವಿತರಿಸುವುದು ಖುಷಿ ತಂದಿದೆ. ಸಮಾಜದಲ್ಲಿ ನಮ್ಮನ್ನೂ ಪೌರ ಕಾರ್ಮಿಕರ ಮಕ್ಕಳು ಎನ್ನುವ ದೃಷ್ಟಿಕೋನದಿಂದಲೇ ನಮ್ಮನ್ನು ಕಾಣುತ್ತಾರೆ ಆದರೆ ಈ ಹೋಟೆಲ್ ಅವುಗಳಲ್ಲೆವನ್ನೂ ಮೀರಿ ನಮಗೂ ಶ್ರೀ ಸಾಮಾನ್ಯರ ರೀತಿ ತರಬೇತಿ ನೀಡಿ ಮಾಡಲು ಕೆಲಸವನ್ನು ಕೊಟ್ಟಿದ್ದಾರೆ. ನಾವು ಸಹ ಯಾವುದೇ ಪುರುಷರಿಗಿಂತ ಆಗಲಿ ಅಥವಾ ಮೇಲು ಪಂಕ್ತಿಯವರಿಗಿಂತವಾಗಲಿ ಕಡಿಮೆ ಎನ್ನೂವುದನ್ನು ಇಲ್ಲಿ ತೋರಿಸಿಕೊಟ್ಟಿದ್ದೇವೆ ಎಂದರು.
ಈ ಬಗ್ಗೆ ಮಾತು ಆರಂಭಿಸಿದ ಹೊಟೇಲ್ ಮ್ಯಾನೇಜರ್ ಡಿಸೋಜ ಸಮಾಜದಿಂದ ದೂರ ಉಳಿಲ್ಪಟ್ಟ ಬಡತನದಿಂದ ನೊಂದವರ ಸೇವೆಗಾಗಿಯೇ ಲಂಡನ್ ಮೂಲದ ವ್ಯಕ್ತಿಯೊಬ್ಬರು ಸೇರಿ ಟ್ರಸ್ಟ್ ಮೂಲಕ 1994 ರಲ್ಲಿ ಗ್ರೀನ್ ಹೋಟೆಲ್ ಆರಂಭಿಸಿದರು. ಅಂದು ನೊಂದ ಮಹಿಳೆಯರಿಗಾಗಿಯೇ ಮಾಲ್ಗುಡಿಡೇಸ್ ಬೇಕರಿಯನ್ನು ಆರಂಭಿಸಲಾಯಿತು. ಅಲ್ಲಿ ಕೇವಲ ಮಹಿಳೆಯರೆ ಕೆಲಸ ಮಾಡಲು ನಿಯೋಜಿಸಿ ಅವರಿಗೂ ಅವಕಾಶ ಕಲ್ಪಸಿಕೊಡಲಾಗಿದೆ.
ಮಹಿಳೆಯರಿಗೆ ಕೇಕ್ ಉತ್ಪನ್ನಗಳ ತಯಾರಿಕೆ ಯಿಂದ ಹಿಡಿದು ಹೋಟೆಲ್ ಗೆ ಬಂದ ಅತಿಥಿಗಳೊಟ್ಟಿಗೆ ಆಂಗ್ಲಭಾಷೆ ಸೇರಿದಂತೆ ಹಲವು ಭಾಷೆಗಳಲ್ಲಿ ಸಂಭಾಷಣೆ ನಡೆಸಿ ಅವರನ್ನು ನಿಭಾಯಿಸುವವರೆಗೂ ಆರುತಿಂಗಳ ತರಬೇತಿ ನೀಡಿ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದರು. ಅಲ್ಲದೆ ಹೋಟೆಲ್ ಉದ್ಯಮದಿಂದ ಬರುವ ಲಾಭವನ್ನು ಸಮಾಜಮುಖಿ ಟ್ರಸ್ಟ್ ಗೆ ನೀಡುತ್ತಾ ಬಂದಿರುವುದಾಗಿ ತಿಳಿಸಿದರು.
ಅದೇನೇ ಇರಲಿ ಪೌರಕಾರ್ಮಿಕರ ಮಹಿಳೆಯರಿಂದಲೇ ಬೇಕರಿ ಆರಂಭಿಸಿ, ಅವರಿಂದಲೇ ವಿದೇಶಿಗರಿಗೆ ಅತಿಥ್ಯ ನೀಡುವ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗವನ್ನು ಗೌರವಿಸುತ್ತಿರುವ ಈ ಸಮಾಜಮುಖಿ ಹೋಟೆಲ್ ದೇಶದ ಇತರ ಹೋಟೆಲ್ ಗಳಿಗೂ ಮಾದರಿ ಎನಿಸಿಕೊಂಡಿದೆ.