‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಹಿರಿಯರು ಹೇಳಿದಂತೆ ಗುರುವಿಗೆ ತನು ಮನಗಳಿಂದ ಶರಣಾಗುವ ವರೆಗೂ ನಮ್ಮಲ್ಲಿದ್ದ ಜ್ಞಾನ ಪರಿಪೂರ್ಣವಾಗಿರುವುದಿಲ್ಲ. ಎಲ್ಲಿ ಒಬ್ಬ ಮನುಷ್ಯ ತನಗೆ ಕಲಿಸಿದ ಗುರುವಿಗೆ ಗೌರವ ನೀಡಿ ತನ್ನೆಲ್ಲಾ ಸರ್ವಸ್ವವನ್ನು ಗುರುವಿನ ಚರಣಗಳಿಗೆ ಸಮರ್ಪಿಸುತ್ತಾನೋ ಅವನೇ ಉತ್ತಮ ಶಿಷ್ಯನಾಗುತ್ತಾನೆ.
ಒಬ್ಬ ಗುರು ತನ್ನಲಿರುವ ಎಲ್ಲ ಜ್ಞಾನವನ್ನು ಶಿಷ್ಯನಿಗೆ ಧಾರೆ ಎರೆದು ಕೊಟ್ಟು ತನಗಾಗಿ ಏನನ್ನು ಕೇಳುವುದಿಲ್ಲ. ಅವರು ಬಯಸುವುದು ಇಷ್ಟೇ ತನ್ನ ಬಳಿ ಕಲಿತ ವಿದ್ಯೆ ಮತ್ತೊಬ್ಬರಿಗೆ ಉಪಕಾರವಾಗಲಿ ಎಂದು. ಇಂತಹ ಗುರುವನ್ನು ನಮಿಸುವ ದಿನವನ್ನು ನಾವು ಪ್ರತಿ ವರ್ಷದ ಜುಲೈ 13ರಂದು ಗುರು ಪೂರ್ಣಿಮಾ ಎಂದು ಆಚರಿಸುತ್ತೇವೆ.
ಗುರು ಶಿಷ್ಯರ ಸಂಬಂಧಗಳಿಗೆ ತುಂಬಾ ಹಳೆಯ ಇತಿಹಾಸವೇ ಇದೆ. ಇಲ್ಲಿ ಮುಖ್ಯವಾಗಿ ಅರ್ಜುನ ಹಾಗೂ ದ್ರೋಣಾಚಾರ್ಯರ ಗುರು ಶಿಷ್ಯ ಸಂಬಂಧ ತುಂಬಾ ಜನಜನಿತವಾಗಿದೆ. ಗುರು ದ್ರೋಣಾಚಾರ್ಯರು ತಮ್ಮನೆಚ್ಚಿನ ಶಿಷ್ಯನಿಗಾಗಿ ತಮ್ಮ ಮತ್ತೊಬ್ಬ ಶಿಷ್ಯನ ಕೈಯ ಹೆಬ್ಬೆರಳನ್ನೆ ಗುರುದಕ್ಷಿಣೆಯಾಗಿ ಪಡೆದುಕೊಂಡಿದ್ದರು.
ಇನ್ನು ಶಿಷ್ಯರ ಬಗ್ಗೆ ಹೇಳುವಾಗ ಮೊದಲ ಸ್ಥಾನದಲ್ಲಿ ಬರುವ ಹೆಸರು ಏಕಲವ್ಯ. ಇವನೂ ಕೂಡ ಉತ್ತಮ ಶಿಷ್ಯರಲ್ಲಿ ಒಬ್ಬನಾಗಿದ್ದ, ಗುರು ದರೋಣಾಚಾರ್ಯರು ಬಿಲ್ವಿದ್ಯೆ ಕಲಿಸಲು ನಿರಾಕರಿಸಿದಾಗ ಅವರ ಮೂರ್ತಿಯ ಮುಂದೆ ಬಿಲ್ವಿದ್ಯೆ ಕಲಿತು ತಾನೂ ಕೂಡ ಉತ್ತಮ ಬಿಲ್ಲುಗಾರ ಪ್ರವೀಣನೆಂದು ತನ್ನ ಗುರುಗಳಿಗೆ ತೋರಿಸಿದ್ದ.
ಪುರಾಣ ಇತಿಹಾಸಗಳ ಪುಟ ತಿರುವುತ್ತಾ ಹೋದರೆ ಹಲವಾರು ಶ್ರೇಷ್ಟ ಗುರುಗಳ ಹಾಗೂ ಶಿಷ್ಯ ವೃಂದಗಳ ಪರಿಚಯವಾಗುತ್ತದೆ. ಉದಾಹರಣೆಗೆ ವೇದವ್ಯಾಸ, ಪರಶುರಾಮ, ದ್ರೋಣಾಚಾರ್ಯ,ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಬೃಹಸ್ಪತಿ, ಶುಕ್ರಾಚಾರ್ಯ.
ಪ್ರಪಂಚದ ಒಂದು ಉತ್ತಮವಾದ ಸಂಬಂಧದಲ್ಲಿ ಗುರು ಶಿಷ್ಯರ ಸಂಬಂಧವೂ ಒಂದು. ಒಬ್ಬ ಗುರು ತರಗತಿಯಲ್ಲಿ ಮಕ್ಕಳಿಗೆ ಕೇವಲ ಪಾಠವನ್ನು ಕಲಿಸುವ ಗುರುವಲ್ಲ. ಗುರುವೂ ಮಕ್ಕಳ ಜೀವನವನ್ನು ರೂಪಿಸುತ್ತಾರೆ. ಮಕ್ಕಳಲ್ಲಿ ಉತ್ತಮ ಮೌಲ್ಯವನ್ನು ತುಂಬುತ್ತಾರೆ ಇದರಿಂದ ತನ್ನ ಶಿಷ್ಯ ಮುಂದೊಂದು ದಿನ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ರೂಪುಗೊಳ್ಳಬೇಕು ಎನ್ನುವ ಆಸೆಯಿಟ್ಟು ಮಕ್ಕಳಿಗೆ ಪಾಠ ಮಾಡುತ್ತಾರೆ.
ಪುರಣಗಳಲ್ಲಿ ನಾವು ಕೇಳಿದಂತೆ ಹಲವಾರು ಗುರು ಶಿಷ್ಯರ ಸಂಬಂಧಗಳು ಕಾಣಸಿಗುತ್ತವೆ. ಅವುಗಳಲ್ಲಿ ಸಾಂದೀಪನಿ-ಕೃಷ್ಣ,ಬಲರಾಮ, ಭೀಷ್ಮ-ಪರಶುರಾಮ, ವಸಿಷ್ಠ- ಶ್ರೀರಾಮ, ದ್ರೋಣಾಚಾರ್ಯ- ಅರ್ಜುನ, ಸೂರ್ಯ ದೇವ- ಹನುಮಂತ ಇವರುಗಳು ಪ್ರಮುಖವಾಗಿ ಗುರು ಶಿಷ್ಯರ ಉತ್ತಮ ಸಂಬಂಧಗಳಿಗೆ ಉದಾಹರಣೆಗಳಾಗಿವೆ.
ಗುರು ತನಗೆ ತಿಳಿದಷ್ಟು ಜ್ಞಾನವನ್ನು ತನ್ನ ಶಿಷ್ಯನಿಗೆ ನೀಡುತ್ತಾನೆ. ಹಾಗೂ ತನ್ನ ಶಿಷ್ಯ ಜೀವನದಲ್ಲಿ ಸಫಲನಾಗುವುದನ್ನೇ ತನ್ನ ಗುರುದಕ್ಷಿಣೆ ಎಂದು ತಿಳಿದುಕೊಳ್ಳತ್ತಾನೆ.