ಮಂಗಳೂರು: ತುಳುನಾಡು ವಿಶಿಷ್ಟ ಮಣ್ಣಿನ ಗುಣ ಹೊಂದಿರುವ ಶ್ರೇಷ್ಠನಾಡು. ಇಲ್ಲಿನ ಪ್ರತಿ ಆಚರಣೆ, ಸಂಪ್ರದಾಯದ ಹಿಂದೆ ಪ್ರಕೃತಿ ಮಾನವನ ಸಂಬಂಧಕ್ಕೆ ವಿಶೇಷ ಸ್ಥಾನಮಾನ ಒದಗಿಸಲಾಗಿದೆ. ಕಾಂತಾರದಂತಹ ಚಲನಚಿತ್ರಗಳು ತೆರೆಗೆ ಬಂದ ಬಳಿಕ ತುಳುವರ ದೈವ, ದೇವರು ಆಚರಣೆ ಮಹತ್ವ ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆಯಿತು. ಅಲ್ಲದೆ ತುಳುವರ ಆಚರಣೆಗಳು ಗೊಡ್ಡುಸಂಪ್ರದಾಯವಲ್ಲ ಬದಲಿಗೆ ಧರ್ಮಚರಿತ್ರೆಯ ಸತ್ಯ ದಾಖಲೆಗಳು ಎಂಬುದನ್ನು ಜಗತ್ತು ಅರಿಯುವಂತಾಯಿತು. ಇಂತಹುದೇ ಸತ್ವಯುತ ಆಚರಣೆ ಕೆಡ್ಡಸ. ಈ ಬಗ್ಗೆ ಹಿರಿಯರಿಂದ ಅರಿತ ಕೆಲ ಮಾಹಿತಿ ಇಲ್ಲಿದೆ.
ಕೆಡ್ಡಸ ಆಚರಣೆ ಹೇಗೆ: ತುಳುನಾಡಿನಲ್ಲಿ ಹೆಣ್ಣನ್ನು ದೇವರು ಎಂದು ಪೂಜಿಸುತ್ತಾರೆ. ಭೂತಾಯಿಯ ಋತುಸ್ರಾವವನ್ನು ಸಡಗರದಿಂದ ಆಚರಿಸುವ ಸಂಪ್ರದಾಯವೇ ಕೆಡ್ಡಸ. ಈ ವೇಳೆ ಪ್ರಕೃತಿಯನ್ನು ಅಗೆಯುವುದು ಸೇರಿದಂತೆ ಹಾನಿ ಮಾಡುವುದಕ್ಕೆ ನಿಷೇಧವಿದೆ. ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ಋತುಮತಿಯಾಗುತ್ತಾಳೆ ಎನ್ನುವುದು ತುಳುವರ ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಡ್ಡಸವನ್ನು ಭೂಮಿತಾಯಿ ಮೀಯುವ ಹಬ್ಬವೆಂದು ಕರೆಯುತ್ತಾರೆ. ಕೆಡ್ಡಸದ ಮೂರುದಿನ ಭೂಮಿದೇವಿ ಸೂಕ್ಷ್ಮ ಸ್ವಭಾವದಳಾಗಿರುತ್ತಾಳೆ. ಕೆಡ್ಡಸ ಆಚರಣೆಯಲ್ಲಿ ಶುರು ಕೆಡ್ಡಸ, ನಡುಕೆಡ್ಡಸ, ಕಡೆ ಕೆಡ್ಡಸ ಎಂಬ ಮೂರುದಿನದ ಆಚರಣೆಗಳಿವೆ. ಕೆಡ್ಡಸದ ಪ್ರಾರಂಭದ ದಿನ ಬೆಳಗ್ಗೆ ನವಧಾನ್ಯಗಳನ್ನುಹುರಿದು ಪುಡಿಮಾಡಿ ಬೆಲ್ಲ, ಅರಳು, ತೆಂಗಿನ ಚೂರುಗಳನ್ನು ಬೆರಸಿ ಭೂಮಿದೇವಿಯ ಸಾನಿಧ್ಯದೆದರು ತುದಿಬಾಳೆಯಲ್ಲಿ ಬಡಿಸಿ ನಮಿಸುತ್ತಾರೆ. ಇದನ್ನು ಕುಡುಅರಿ ಅಥವಾ ನನ್ನೆರಿ ಎಂದು ಕರೆಯುತ್ತಾರೆ.
ನಡುಕೆಡ್ಡಸದಂದು ಮಾಂಸದ ಅಡುಗೆಯನ್ನು ಮನೆಮಂದಿ ಸವಿಯುತ್ತಾರೆ. ಕಡೆಕೆಡ್ಡಸದ ಮೂರನೆಯ ದಿನ ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ಏಳು ಲೋಳೆಸರದ ಎಲೆಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಸಿನ ಕುಂಕುಮ, ಪಚ್ಚೆಹೆಸರು ಪುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕ್ಕೋಸ್ಕರ ಇಡುತ್ತಾರೆ. ಈ ಪ್ರಕಾರ ರಜಸ್ವಲೆಯಾದ ಭೂಮಿದೇವಿಯು ಮಿಂದು ಶುದ್ಧಳಾಗಿ ಫಲವತಿಯಾಗುತ್ತಾಳೆ ಎಂದು ತುಳುವರ ನಂಬಿಕೆ. ಇತ್ತೀಚೆಗೆ ಭೂಮಿ ತಾಯಿಯನ್ನು ಪೂಜಿಸುವ ಈ ಹಬ್ಬ ತೆರೆಮರೆಗೆ ಸರಿಯುತ್ತಿರುವುದು ಬೇಸರದ ವಿಚಾರ. ಈ ಆಚರಣೆಗಳ ಮಹತ್ವ ಅರಿತು ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವ ಜವಾಬ್ದಾರಿ, ಹಿರಿಯರು, ಇಂದಿನ ಯುವನಾಂಗದ ಮೇಲಿದೆ.
ತುಳು ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ( ಈ ಸಾಲಿನಲ್ಲಿ ಫೆ.11ರಂದು ಮೊದಲ ಕೆಡ್ಡಸ, ಫೆ.12ರಂದು ನಡು ಕೆಡ್ಡಸ ಫೆ.13ರಂದು ಕಡೆ ಕೆಡ್ಡಸ ಆಚರಣೆ ನಡೆಯಲಿದೆ.)
ಕೆಡ್ಡಸ ಭೂಮಿತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ವಿಶಿಷ್ಟ ಆಚರಣೆ. ಇಂದಿನ ಯುವಕರಿಗೆ ಕೆಡ್ಡಸ ಆಚರಣೆ ಬಗ್ಗೆ ತಿಳಿದಿಲ್ಲ. ನಮ್ಮ ಆಚರಣೆಗಳನ್ನು ನಾವೇ ಮುಂದುವರಿಸದಿದ್ದಲ್ಲಿ ಮುಂದಿನ ಪೀಳಿಗೆಯವರು ಅರಿಯುವುದಾದರು ಹೇಗೆ.
-ಲೀಲಕ್ಕ ಬೆಟ್ಟಂಪಾಡಿ, ಪುತ್ತೂರು