ದೀಪಾವಳಿ ಅಮಾವಾಸ್ಯೆಯ ಮರುದಿನ ವಾರದಂದು ಆರಂಭವಾಗುವ ಮಾಸವೇ ಕಾರ್ತಿಕ ಮಾಸ, ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದ ಮಾಸವೆಂದರೆ ಇದೇ ಮಾಸ ಕಾರ್ತಿಕ ಮಾಸದ ಮುನ್ನುಡಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸುವುದರ ಮೂಲಕ ದೀಪಗಳನ್ನು ಬೆಳಗುತ್ತೇವೆ. ಇಲ್ಲಿಂದಲೇ ಮುಂದಿನ ಒಂದು ಮಾಸ ಕಾಲ ದೀಪವನ್ನು ಬೆಳಗುವ ಅತ್ಯಂತ ಪವಿತ್ರವಾದ ತಿಂಗಳು ಕಾರ್ತಿಕ.
ಕಾರ್ತಿಕ ಎಂದರೆ ಒಂದು ನಕ್ಷತವಾಗಿದ್ದು, ಇದು ನವೆಂಬರ್/ಡಿಸೆಂಬರ್ ಅವಧಿಯಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರವಿರುತ್ತದೆ. ಹಾಗಾಗಿ ಈ ಮಾಸಕ್ಕೆ ಕಾರ್ತಿಕ ಮಾಸವೆಂದು ಕರೆಯುತ್ತಾರೆ. ಪ್ರತಿಯೊಂದು ಮಾಸಕ್ಕೂ ಒಬ್ಬೊಬ್ಬ ದೇವರಿರುವಂತೆ ಕಾರ್ತಿಕ ಮಾಸದ ಅಧಿಪತಿ ಈಶ್ವರ, ಈ ಮಾಸದಲ್ಲಿ ಶಿವನಿಗೆ ದೀಪೋತ್ಸವ ನಡೆವಂತೆ, ವಿಷ್ಣುವಿಗೆ ತುಳಸಿ ಜೊತೆ ಕಲ್ಯಾಣವೂ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಆಚರಿಸಬೇಕಾದ ನೇಮ ನಿಷ್ಠೆಗಳನ್ನು ಹೇಳಿಕೊಟ್ಟವನು ಬ್ರಹ್ಮನೆಂದು ಹೇಳಲಾಗುತ್ತದೆ, ಹಾಗಾಗಿ ಇದು ತ್ರಿಮೂರ್ತಿಗಳಿಗೆ ಪ್ರಿಯವಾದ ತಿಂಗಳಾಗಿದೆ. ಕಾರ್ತಿಕ ಮಾಸದಲ್ಲಿ ದಿನದ ಅವಧಿ ಕಡಿಮೆ, ರಾತ್ರಿಯೇ ದೀರ್ಪವಾಗಿರುವ ಕಾರಣದಿಂದ ಅಂದಕಾರದ ಪ್ರಭಾವ ಜಾಸ್ತಿ ಋತುಮಾನದ ಅಂಧಕಾರದ ಜೊತೆಗೆ ಮನಸ್ಸಿನ ಅಂಧಕಾರವನ್ನೂ ಕಳೆಯುವುದು ಈ ಮಾಸದ ವಿಶೇಷ, ಹಾಗಾಗಿಯೇ ಇದನ್ನು ದೀಪೋತ್ಸವದ ತಿಂಗಳೆಂದು ಕರೆಯುತ್ತಾರೆ.
ಕಾರ್ತಿಕ ಮಾಸದಲ್ಲಿ ಕೈಗೊಳ್ಳುವ ಪೂಜೆ ಮತ್ತು ವ್ರತಗಳು ಹೆಚ್ಚು ಫಲ ನೀಡುತ್ತವೆ. ಈ ಮಾಸ ಆಧ್ಯಾತ್ಮಿಕ ಸಾಧಕರ ಮಾಸ, ಕಾರ್ತಿಕ ಮಾಸದಲ್ಲಿ ನಿಯಮ ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಕಾರ್ತಿಕ ಮಾಸದಲ್ಲಿ ಗರುಡ ಪಂಚಮಿ, ತುಳಸಿ ಪೂಜೆ, ಕಾರ್ತಿಕ ಸೋಮವಾರಗಳಂದು ಮಾಡುವ ವಿಶೇಷ ಪೂಜೆಗಳು ಸತ್ಪಲಗಳನ್ನು ನೀಡುತ್ತವೆ ಎಂಬ ನಂಬಿಕೆಯೂ ಇದೆ.
ಬ್ರಹ್ಮ ದೇವರ ಆನಂದ ಭಾಗವು ಭೂಮಿಗೆ ಬಿದ್ದು ಬೆಟ್ಟದ ನೆಲ್ಲಿಕಾಯಿಯ ಮರವಾಯಿತು. ಎನ್ನುವ ನಂಬಿಕೆ ಇದೆ. ಧಾತ್ರಿ ವೃಕ್ಷವೆಂದರೆ ನೆಲ್ಲಿಕಾಯಿ ಮರ, ಕಾರ್ತಿಕ ಮಾಸದಲ್ಲಿ ಧಾತ್ರಿ ಹೋಮ ಅತ್ಯಂತ ವಿಶೇಷವಾದ ಆಚರಣೆ, ಈ ಮಾಸದ ಹುಣ್ಣಿಮೆ, ತ್ರಯೋದಶಿ, ಚತುರ್ದಶಿಗಳಲ್ಲಿ ಧಾತ್ರಿ ಹೋಮವನ್ನು ಮಾಡಲಾಗುತ್ತದೆ. ರಾತ್ರಿ ಹೋಮವನ್ನು ಮಾಡಿದರೆ ಅಶ್ವಮೇಧಯಾಗ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗುತ್ತದೆ.
ಮಣಿಕಂಠ ತ್ರಿಶಂಕರ್, ಮೈಸೂರು.