ಕಾರ್ಕಳ: ಶಿವಮೊಗ್ಗ, ಹಾಸನ ಚಿಕ್ಕಮಗಳೂರು ಸಹಿತ ಮಲೆನಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಸುತ್ತಿರುವ ಮೆಕ್ಕೆಜೋಳವನ್ನು ಪುರಾತನ ಕ್ರಮದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮುನಿಯಾಲಿನಲ್ಲಿರುವ ದೇಸಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿಯ ” ಗೋಧಾಮ “ದಲ್ಲಿ ಸಮೃದ್ಧವಾಗಿ ಬೆಳೆಸಲಾಗಿದೆ.
ಉಡುಪಿ ಮಂಗಳೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಭಾರಿಗೆ ಗೋಧಾಮದ ೬ ಎಕರೆ ಜಾಗದಲ್ಲಿ ದೇಸಿಯ ಗೋವುಗಳ ವರ್ಮಿ ಕಾಂಪೋಸ್ಟ್, ಕಾಂಪೋಸ್ಟ್ ಗೊಬ್ಬರ, ಜೀವಾಮೃತ, ಹಸುವಿನ ಸೆಗಣಿ, ಗಂಜಲವನ್ನು ಬಳಸಿ ಸಾವಯವ ಮೆಕ್ಕೆಜೋಳವನ್ನು ಬೆಳೆಸಲಾಗಿದೆ. ಗೋಧಾಮದಲ್ಲಿ ಪುರಾತನ ಕ್ರಮದಂತೆಯೇ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ದೇಸಿ ಗೋವುಗಳ ಸಗಣಿ ಗಂಜಲವನ್ನೇ ಬಳಸಿ ಕೃಷಿಯನ್ನು ಮಾಡಲಾಗುತ್ತಿದೆ.
ಅಸಾಧ್ಯ ಎಂದು ಹೇಳುವ ಈ ಆಧುನಿಕ ಕಾಲದಲ್ಲಿ ಮುನಿಯಾಲು ಗೋಧಾಮ ತ್ಯಾಜ್ಯ ನಿರ್ವಹಣೆಯ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳುವ ಪ್ರಮುಖ ಉದ್ದೇಶದೊಂದಿಗೆ ದೇಸಿಯ ಗೋವುಗಳನ್ನು ಸಾಕಲಾಗುತ್ತಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲೇ ಕೃಷಿಯನ್ನು ಮಾಡುವ ಮೂಲಕ ಗ್ರಾಮ ಸ್ವರಾಜ್ಯವನ್ನು ಮಾಡುವ ಸಂಕಲ್ಪವನ್ನು ಗೋಧಾಮ ಸಾರುತ್ತಿದೆ. ೩೦ ಎಕರೆ ಹಚ್ಚಹಸುರಿನ ಭೂಮಿಯಲ್ಲಿ ಪ್ರಾಚೀನ ಭಾರತದ ಕಲ್ಪನೆಯಲ್ಲಿ ಹೊಸ ಲೋಕವನ್ನು ಗೋಧಾಮ ಸೃಷ್ಠಿಸಿದೆ. ಯುವ ಸಮುದಾಯಕ್ಕೆ ಪ್ರೇರಣೆಯಾಗಿ ಅಸಾಧ್ಯವಾದುದನ್ನು ಸಾಧಿಸಿ ತೋರುವುದೇ ಗೋಧಾಮದ ಪ್ರಮುಖ ಉದ್ದೇಶ.
ನಮ್ಮಲ್ಲಿರುವ ಖಾಲಿ ಜಮೀನಿನಲ್ಲಿ ೧ ಎಕರೆಯಲ್ಲಿ ಮೆಕ್ಕೆಜೋಳ ಬೆಳೆದು ಯುವಕರು ಸ್ವಂತವಾಗಿ ದುಡಿದು ಕೃಷಿಯ ಮೂಲಕ ತಮ್ಮ ಜೀವನವನ್ನು ಉತ್ತಮವಾಗಿ ಮಾಡಿಕೊಂಡು ಆರ್ಥಿಕವಾಗಿ ಸದೃಡವಾಗಬಹುದು. ವರ್ಷಕ್ಕೆ ೩ ಬೆಳೆಯನ್ನು ತೆಗೆದು ಜೋಳ ಮತ್ತು ಜೋಳದ ದಂಟು ಮಾರಾಟ ಮಾಡಿ ವಾರ್ಷಿಕ ೧೫ ಲಕ್ಷ ರೂಪಾಯಿ ಆದಾಯವನ್ನು ಗಳಿಸಬಹುದು.
ಐಟಿಬಿಟಿ, ಮೆಡಿಕಲ್ ಸೈನ್ಸ್ ಸಹಿತ ಇತರ ಉದ್ಯೋಗದಂತೆಯೇ ಪ್ರಾಚೀನ ಮಾದರಿಯ ಕೃಷಿಯೊಂದಿಗೆ ಮೆಕ್ಕೆಜೋಳ ಬೆಳೆದು ಸಮೃದ್ಧ ಕೃಷಿ ಪದ್ಧತಿಯನ್ನು ಮಾದರಿಯಾಗಿ ದೇಶಕ್ಕೆ ನೀಡುವ ಜೊತೆಗೆ ನಾವು ಕೂಡ ಐಟಿಬಿಟಿ ಉದ್ಯೋಗಸ್ಥರಿಗೆ ಕಡಿಮೆ ಇಲ್ಲದಂತೆ ಅತ್ಯುತ್ತಮ ಜೀವನ ನಡೆಸಿ ಮಾದರಿಯಾಗಬಹುದು ಎಂದು ದೇಶದ ಖ್ಯಾತ ಕೈಗಾರಿಕೊಧ್ಯಮಿಯಾಗಿರುವ ಮೂಡಬಿದರೆ ಎಸ್ ಕೆಎಫ್ ಎಲಿಕ್ಸರ್ ಇಂಡಿಯಾ ಲಿಮಿಟೆಡ್ ನ ಆಡಳಿತ ನಿರ್ದೇಶಕರಾಗಿರುವ ಜಿ.ರಾಮಕೃಷ್ಣ ಆಚಾರ್ ಅವರು ತಮ್ಮ ಮುನಿಯಾಲಿನ ” ಗೋಧಾಮ “ದಲ್ಲಿ ಸಾಧಿಸಿ ತೋರಿಸಿದ್ದಾರೆ.
ಆ ಮೂಲಕ ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತಿದೆ, ಪ್ರಾದೇಶಿಕ ಹವಾಮಾನಕ್ಕೆ ತಕ್ಕಂತೆ ಕೌಶಲ್ಯ ಮತ್ತು ಪ್ರಾಯೋಗಿಕ ಜ್ಞಾನವನ್ನು ಬಳಸಿಕೊಂಡು ಅಸಾಧ್ಯವಾದುದನ್ನು ಸಾಧಿಸಲಾಗಿದೆ, ಭಾರತದಲ್ಲಿ ಕಡಿಮೆಯಾಗುತ್ತಿರುವ ರೈತ ಸಮುದಾವನ್ನು ಮತ್ತೇ ಕೃಷಿಯತ್ತ ಮುಖ ಮಾಡಿಸುವುದು, ಯುವಕ ಯುವತಿಯರನ್ನು ಇನ್ನಷ್ಟು ಕೃಷಿಕ್ಷೇತ್ರದಲ್ಲಿ ತೊಡಗಿಸುವುದು, ನಮ್ಮೆದುರಿಗಿರುವ ಕೃಷಿಯಲ್ಲೇ ನಮಗೆ ಸುವರ್ಣ ಅವಕಾಶವಿದೆ ಎಂಬುದನ್ನು ಗೋಧಾಮವು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿದೆ. ಆ ಮೂಲಕ ಯುವ ಸಮುದಾಯದ ಮೂಲಕವೇ ಕೃಷಿ ಸಮೃದ್ಧ ಭಾರತವನ್ನು ಹಳ್ಳಿಯ ಮೂಲಕ ಕಟ್ಟುವ ಸಂಕಲ್ಪವನ್ನು ಗೋಧಾಮ ಹೊಂದಿದೆ.