ಪ್ರತಿಯೊಂದು ಜೀವಿಗೂ ಪ್ರಕೃತಿ ಅತೀ ಅಗತ್ಯವಾಗಿದ್ದು, ಅದನ್ನು ನಾವು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕಾದದ್ದು ನಮ್ಮ ಕರ್ಥವ್ಯವಾಗಿದ್ದು, ಇಂತಹ ದಿಟ್ಟ ಹೆಜ್ಜೆ ಇಡುವಲ್ಲಿ ಈ ಪೋರಿ ಸಣ್ಣ ಪ್ರಾಯದಲ್ಲಿಯೇ ಒಂದು ಹೆಜ್ಜೆ ಮುಂದೆ ಬಂದು ಇಂದಿನ ಪೀಳಿಗೆ ಮಾದರಿಯಾಗಿದ್ದಾಳೆ.
ರತನ್ ಕುಮಾರ್ ಎಚ್.ಎಸ್ ಹಾಗೂ ಪವಿತ್ರ ರತನ್ ಅವರ ಪುತ್ರಿ ಹನಿ ಎಚ್.ಆರ್. ಪ್ರಸ್ತುತ ೧೦ನೇ ತರಗತಿಯ ಪರೀಕ್ಷೆ ಬರೆದಿರುವ ಇವರು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಮಲೆನಾಡಿನ ಕುಮಾರಿಯಾದ ಈಕೆ ಪ್ರಕೃತಿಯತ್ತ ತನ್ನ ಒಲವನ್ನು ಬೆಳೆಸಿಕೊಂಡಿದ್ದಾಳೆ.
ಕಳೆದ ೧೫ ವರ್ಷಗಳಿಂದ ಮಂಗಳೂರಿನಲ್ಲಿ ವಾಸಿಸುತ್ತಿರುವ ಇವರು ಮೂರನೇ ತರಗತಿಯಲ್ಲಿರುವಾಗ ಶಾಲೆಯಲ್ಲಿ ನಡೆದ ಒಂದು ಚಟುವಟಿಕೆ ಇವರನ್ನು ಪ್ರಕೃತಿಯತ್ತ ಒಲವು ಮೂಡುವಂತೆ ಮಾಡಿತ್ತು.ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ನಾಲ್ನುಡಿಯಂತೆ ಎಳೆಯ ವಯಸ್ಸಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯು ಮೂಡಿದಲ್ಲಿ, ಮುಂದೆ ನಾವು ಉತ್ತಮ ಫಲವನ್ನು ಅನುಭವಿಸಲಿದ್ದೇವೆ ಎಂಬ ದೃಢ ನಂಬಿಕೆ ಹೊಂದಿದ್ದಾರೆ.
‘ಗ್ರೀನ್ ವಾರಿಯರ್ಸ್’ ಶಾಲಾ ಮಕ್ಕಳನ್ನು ಒಳಗೊಂಡ ತಂಡವನ್ನು ಕಟ್ಟಿಕೊಂಡು ಪ್ರಕೃತಿ ಸಂರಕ್ಷಣೆಯಂತಹ ಕಾರ್ಯವನ್ನು ಮಾಡುತ್ತಾರೆ. ರಸ್ತೆಯುದ್ದಕ್ಕೂ ಗಿಡನೆಡುವ ಹವ್ಯಾಸದಿಂದ ಶುರುವಾದ ಇವರ ಪ್ರಕೃತಿ ಸೇವೆ ಇಂದು ಸಾರ್ವಜನಿಕರಲ್ಲಿ ಪ್ರಕೃತಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುವಷ್ಟು ಮಟ್ಟಕ್ಕೆ ಬೆಳೆದಿದ್ದು, ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಾಯಣಿಕರಿಗೆ ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಇದರಿಂದ ಪ್ರಕೃತಿಗೆ ಆಗುವ ನಷ್ಟದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡುತ್ತಾರೆ.
ದಿನಸಿ ಅಂಗಡಿಗಳಿಂದ ಸಾಮಾಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಬದಲಿಗೆ ಬಟ್ಟೆಯ ಚೀಲವನ್ನು ಬಳಸಲು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.ಹಾಲಿನ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಿ ವೇಸ್ಟ್ ಮ್ಯಾನೇಜ್ಮೆಂಟ್ ಗೆ ನೀಡುವುದು. ದೀಪಾವಳಿ ಹಬ್ಬದ ಸಂದರ್ಭ ಮನೆಮನೆಗಳಿಗೆ ಹೋಗಿ ಪಟಾಕಿ ಸಿಡಿಮದ್ದು ಸಿಡಿಸದಂತೆ ಮನವಿ, ಇದರಿಂದ ಪ್ರಾಣಿಗಳಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯ, ಮನೆಯ ಕಸವನ್ನು ಹಸಿಕಸ ಒಣಕಸ ಬೇರ್ಪಡಿಸಿ ನೀಡುವ ಪರಿಕಲ್ಪನೆಯನ್ನು ಮೊದಲಿನಿಂದಲು ಪಾಲಿಸುತ್ತಾ, ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಇದುವರೆಗೆ ೩೦೦ಕ್ಕಿಂತಲೂ ಅಧಿಕ ಗಿಡಗಳನ್ನು ನೆಟ್ಟಿರುವ ಇವರು, ಮನೆಯಲ್ಲಿ ಹಣ್ಣುಗಳ ಬೀಜವನ್ನು ಸಂಗ್ರಹಿಸಿ ಅದರಿಂದ ಗಿಡವನ್ನು ಮಾಡಿ ಅರಣ್ಯ ಇಲಾಖೆಗೆ ನೀಡುತ್ತಿದ್ದು, ಕಳೆದ ಬಾರಿ ೪೫ ನೇರಳೆ ಹಣ್ಣಿನ ಗಿಡಗಳನ್ನು ನೀಡಿದ್ದಾರೆ. ಕೆಲವರಿಗೆ ವಿಶೇಷ ಸಂದರ್ಭದಲ್ಲಿ ಉಡುಗರೆಯಾಗಿ ಹಣ್ಣಿನ ಗಿಡಗಳನ್ನು ನೀಡುವ ಹವ್ಯಾಸವನ್ನು ಬೇಳೆಸಿಕೊಂಡು ಎಲ್ಲರಿಗೂ ಮಾದರಿ.ಈ ಬಾರಿ ಸೀತಾಫಲ,ಅರೆಂಜ್,ಚಿಕ್ಕು,ಮೂಸಂಬಿ ಗಿಡಗಳನ್ನು ಜನರಿಗೆ ನೀಡಲು ತಯಾರಿ ನಡೆಸುತ್ತಿದ್ದಾರೆ.
ಬೇಸಿಗೆ ಕಾಲದಲ್ಲಿ ನಗರಗಳ ಮರಗಳಿಗೆ ಮಣ್ಣಿನ ಮಡಕೆಯನ್ನು ಕಟ್ಟಿ ಅದರಲ್ಲಿ ಹಕ್ಕಿಗಳಿಗೆ ನೀರುಣಿಸುವುದು, ಜೋತೆಗೆ ನೀರಿನ ಮಹತ್ವದ ಬಗ್ಗೆಯೂ ಜನರಿಗೆ ತಿಳಿಹೇಳುವುದು. ಗಣೇಶ ಚತುರ್ಥಿ ಹಬ್ಬದಂದು ಮಣ್ಣಿನ ಗಣೇಶನ ವಿಗ್ರಹ ಮಾಡಿ ವಿಗ್ರಹದ ಒಳಗೆ ಹಣ್ಣಿನ ಬೀಜಗಳನ್ನು ಇಟ್ಟು ವಿಸರ್ಜನೆ ಮಾಡುತ್ತಾರೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿರುವ ಲಕ್ಷ್ಮಣ ಫಲದ ಗಿಡವನ್ನು ಹಂಚುತ್ತಾರೆ. ಕೆಲವರ ಮನೆಗೆ ಇವರೆ ಭೇಟಿ ನೀಡಿ ಗಿಡನೆಟ್ಟು, ಗಿಡಗಳ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಎಪ್ರೀಲ್ ಒಂದರಂದು ಎಲ್ಲರೂ ಫೂಲ್ ಡೇ ಆಚರಿಸಿದರೆ ಇವರು ಗಿಡನೆಟ್ಟು ‘ಕೂಲ್ ಡೇ’ ಆಚರಿಸುತ್ತಾರೆ. ಇತರ ಸಂಘ ಸಂಸ್ಥೆಗಳ ಮೂಲಕ ಸ್ವಚ್ಚತಾ ಅಭಿಯಾನದಲ್ಲೂ ಭಾಗಿಯಾಗಿ, ಇತರರಿಗೂ ಭಾಗವಹಿಸಲು ಪ್ರೋತ್ಸಾಹಿಸುತ್ತಾರೆ. ಕೋವಿಡ್ ಸಮಯದಲ್ಲಿ ತನ್ನ ಪಾಕೇಟ್ ಮನಿ ಸೇವಿಂಗ್ಸ್ ನಿಂದ ಅವಶ್ಯಕತೆ ಇರುವವರಿಗೆ ಹಣ್ಣು ಹಂಪಲನ್ನೂ ಹಂಚಿ ಸಮಾಜಮುಖಿ ಕೆಲಸದಲ್ಲೂ ತಮ್ಮನ್ನು ತೋಡಗಿಸಿಕೊಂಡಿರುವ ಇವರು ಮನೆ ಮನೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ಭಿಕ್ಷೆ ಬೇಡುವವರಿಗೆ ನೀಡುತ್ತಿದ್ದಾರೆ.
ಹನಿಯ ಈ ಮಹತ್ತರವಾದ ಹೆಚ್ಚೆಯನ್ನು ಗರುತಿಸಿರುವ ಕೆಲವು ಸಂಘ ಸಂಸ್ಥೆಗಳು ಮತ್ತು ಶರಧೀ ಪ್ರತಿಷ್ಠಾನ ಇವರನ್ನು ಸನ್ಮಾನಿಸಿದ್ದಾರೆ. ಮಂಗಳೂರಿನ ಪೋಲ್ಯೂಷನ್ ಕಂಟ್ರೋಲ್ ಬೋರ್ಡ್ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಎಮ್.ಆರ್.ಪಿ.ಎಲ್ ಪರಿಸರ ದಿನದಂದು ಇವರನ್ನು ಗೌರವಿಸಿ ಸಮ್ಮರಣಿಕೆಯನ್ನು ನೀಡಿದೆ.