ಇದುವರೆಗೆ ನೋಡಿದ ರಾಜಕೀಯ ಮೇಲಾಟಗಳು ಒಂದು ರೀತಿಯದ್ದಾಗಿದ್ದರೆ, ಇದೀಗ ನಡೆಯುತ್ತಿರುವುದು ರಾಜಕೀಯದ ಅಸಲಿ ಆಟವಾಗಿದೆ. ಹೀಗಾಗಿ ಇದುವರೆಗೆ ಎಲ್ಲವನ್ನು ನೋಡಿಕೊಂಡು ತೆಪ್ಪಗಿದ್ದ ಮತದಾರರಿಗೆ ಈಗ ತಮ್ಮ ನಿರ್ಧಾರವನ್ನು ಪ್ರಕಟಿಸುವ ಕಾಲ ಒದಗಿ ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಹಲವು ರೀತಿಯ ರಾಜಕೀಯ ಪ್ರಹಸನಗಳನ್ನು ನೋಡಿ ರೋಸಿ ಹೋಗಿರುವ ಜನಕ್ಕೆ ಈಗ ಕಾಲ ಕೂಡಿ ಬಂದಿದೆ. ಚುನಾವಣೆ ವೇಳೆಯಲ್ಲಿ ಪ್ರಭುವಾಗುವ ಮತದಾರರ ತಾವೇನು ಎಂಬುದನ್ನು ತೋರಿಸುವ ಸಮಯ ಬಂದಿದೆ. ಇದುವರೆಗೆ ತಮ್ಮ ಕ್ಷೇತ್ರವನ್ನೇ ಮರೆತು ಹೊದ್ದು ಮಲಗಿದವರೆಲ್ಲರೂ ನಿದ್ದೆಯಿಂದ ಎದ್ದವರಂತೆ ಬಂದು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭರವಸೆಗಳ ಸುರಿಮಳೆಗೈಯ್ಯುತ್ತಿದ್ದಾರೆ.
ಇದೆಲ್ಲದರ ಉದ್ದೇಶಗಳು ಮತಸೆಳೆಯುವುದು ಎಂಬ ಅರಿವು ಮತದಾರರಿಗೂ ಇದೆ. ಹೀಗಾಗಿ ರಾಜಕೀಯ ನಾಟಕ, ಜಾತ್ರೆಯನ್ನು ಜನ ಸುಲಭವಾಗಿ ಒಪ್ಪಿಕೊಳ್ಳಲು ತಯಾರಿಲ್ಲ. ರಾಜಕಾರಣದಲ್ಲಿ ಮತಪಡೆಯುವುದಷ್ಟೇ ಮೂಲ ಉದ್ದೇಶವಾಗಿರುವುದರಿಂದ ಅದನ್ನು ಪಡೆಯುವ ಸಲುವಾಗಿ ಮತದಾರರನ್ನು ಓಲೈಸುವ ಕೆಲಸವನ್ನು ಮಾಡುತ್ತಿದ್ದಾರೆ.
ಜತೆಗೆ ಮತಪಡೆಯಲು ಬೇಕಾದ ತಂತ್ರಗಳನ್ನು ಮಾಡುತ್ತಿದ್ದು, ಭರವಸೆಗಳಿಗೆ, ಆಮಿಷಗಳಿಗೆ ಮತದಾರರ ಬಲಿಯಾದರೆ ಅದರ ಪರಿಣಾಮಗಳನ್ನು ಮುಂದೆ ಎದುರಿಸುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಅಯ್ಯೋ ನಾವು ಹಾಕುವ ಒಂದು ಮತದಿಂದ ಏನಾಗುತ್ತದೆ ಎಂದು ನಿರ್ಲಕ್ಷ್ಯ ವಹಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗಲಿದೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವುದರಿಂದ ಸಮಾವೇಶ, ಮೆರವಣಿಗೆ, ಪ್ರಚಾರ ರಾಲಿ ನಡೆಯಲಿದ್ದು, ಶಕ್ತಿ ಪ್ರದರ್ಶನ ಮಾಡುವ ಸಲುವಾಗಿ ಜನರನ್ನು ಹಣನೀಡಿ ಕರೆತರುವ ಕಾರ್ಯವೂ ನಡೆಯಲಿದೆ. ಕೆಲವರಂತು ಚುನಾವಣೆ ಕಳೆಯುವ ತನಕ ಯಾವುದೇ ಕೆಲಸ ಮಾಡದೆ ರಾಜಕಾರಣಿಗಳ ಹಿಂದೆ ಬಿದ್ದು ಮೆರವಣಿಗೆ, ಪ್ರಚಾರ ಅಂಥ ಒಂದಷ್ಟು ಹಣ ಮಾಡಿಕೊಳ್ಳುವ ಕಾತರದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ.
ಈಗಾಗಲೇ ಹಲವು ನಾಯಕರು ಅಗ್ಗದ ವಸ್ತುಗಳನ್ನು ಮನೆಮನೆಗೆ ಉಡುಗೊರೆಯಾಗಿ ನೀಡಿ ಜನರಲ್ಲಿ ಆಸೆ ಹುಟ್ಟಿಸಿದ್ದು, ಪರಿಣಾಮ ಮನೆಮನೆಗೆ ಭೇಟಿ ನೀಡುವ ನಾಯಕರು ನಮಗೇನು ಕೊಡುತ್ತಾರೆ ಎಂದು ಕೆಲವು ಮತದಾರರು ಆಸೆಗಣ್ಣಿನಿಂದ ನೋಡುವಂತಾಗಿದೆ. ಮತದಾರರು ನಾಯಕರು ನೀಡುವ ಭಿಕ್ಷೆಗೆ ಬಲಿಯಾಗಿ ತಮ್ಮ ಹಕ್ಕನ್ನು ಚಲಾಯಿಸಬೇಡಿ. ಮನಸ್ಸು ಪೂರ್ವಕವಾಗಿ ನಿರ್ಭೀತಿಯಿಂದ ಮತಚಲಾಯಿಸಿ.
ವರ್ಷದಿಂದ ವರ್ಷಕ್ಕೆ ಯುವ ಮತದಾರರು ಬರುತ್ತಿದ್ದು ಅವರಿಗೆ ವಿದ್ಯಮಾನಗಳು ಚೆನ್ನಾಗಿ ಗೊತ್ತಿರುತ್ತದೆ. ಅವರೇ ಭವಿಷ್ಯದ ನಿರ್ಮಾತೃಗಳಾಗಿರುವುದರಿಂದ ಮತದಾನದ ಪ್ರಾಮುಖ್ಯತೆಯನ್ನು ಅರಿತು ನಾವೇಕೆ ಮತ ಹಾಕಬೇಕು ಎಂಬುದನ್ನು ಮನನ ಮಾಡಿಕೊಂಡು ಮತದಾನದ ದಿನ ಮತಗಟ್ಟೆಗೆ ಹೋಗಿ ಮತಚಲಾಯಿಸಬೇಕಿದೆ.
ಇಲ್ಲದೇ ಹೋದರೆ ರಾಜಕೀಯದ ಜಾತ್ರೆಯಲ್ಲಿ ರಾಜಕಾರಣಿಗಳ ಮೆರವಣಿಗೆಯಲ್ಲಿ ನಾವು ಬರೀ ಕುರಿಗಳಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿವೆ. ಮತದಾರರನ್ನು ಸೆಳೆಯಲು ಭರವಸೆಗಳು ಪುಂಖಾನುಪುಂಖವಾಗಿ ಹೊರಬರಲಿವೆ. ಜತೆಗೆ ಮತಸೆಳೆಯುವ ತಂತ್ರಗಳು ನಡೆಯಲಿವೆ. ಆದರೆ ಮತನೀಡುವವರು ನಾವಾಗಿರುವುದರಿಂದ ಯಾರು ಏನೇ ಮಾಡಿದರೂ ಮತದಾರರು ತೀರ್ಮಾನವೇ ಅಂತಿಮವಾಗಲಿದೆ. ಆದ್ದರಿಂದ ಮತಹಾಕುವುದನ್ನು ಮರೆಯದಿರಿ.