ದೆಹಲಿ: ದೇಶವನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ ಅಂಶವೆಂದರೆ ಭಾರತದ ರಾಷ್ಟ್ರೀಯ ಧ್ವಜ. ಭಾರತದ ರಾಷ್ಟ್ರೀಯ ಧ್ವಜದಲ್ಲಿರುವ ಅಶೋಕ ಚಕ್ರವು ದೇಶದ ಪ್ರಮುಖ ಪ್ರಾತಿನಿಧ್ಯ ಸಂಕೇತವಾಗಿದೆ.
ಅಶೋಕ ಚಕ್ರವು “ಧರ್ಮಚಕ್ರ”ದ ಚಿತ್ರಣವಾಗಿದೆ. ಇದನ್ನು ‘ಕರ್ತವ್ಯದ ಚಕ್ರ’ ಎಂದೂ ಕೂಡಾ ಕರೆಯಲಾಗುತ್ತದೆ. ತ್ರಿವರ್ಣ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ಜುಲೈ 22, 1947 ರಂದು ಅಳವಡಿಸಲಾಯಿತು. ತ್ರಿವರ್ಣ ಧ್ವಜದಲ್ಲಿ ಮೊದಲು ಚರಕವನ್ನು ಬಳಸಲಾಗಿತ್ತು. ಬಳಿಕ ಅಶೋಕ ಚಕ್ರವನ್ನು ಬಳಸಲು ನಿರ್ಧರಿಸಲಾಯಿತು.
ಭಾರತಕ್ಕೆ ಹೊಂದುವ ರಾಷ್ಟ್ರಧ್ವಜವೊಂದರ ಅಗತ್ಯವನ್ನು ಮನಗಂಡ ಮಹಾತ್ಮಾ ಗಾಂಧೀಜಿ ಅವರು, 1921 ರಲ್ಲಿ ಪಿಂಗಳಿ ವೆಂಕಯ್ಯ ಎಂಬುವವರಿಗೆ ರಾಷ್ಟ್ರ ಧ್ವಜ ವಿನ್ಯಾಸ ಮಾಡುವಂತೆ ಸೂಚಿಸಿದ್ದರು. ಅದರಲ್ಲಿ ಚರಕ ಇರಬೇಕೆಂದು ಹೇಳಿದ್ದರು. 1921ರಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಎರಡು ಬಣ್ಣಗಳಿಂದ ರಚನೆಯಾದ ಧ್ವಜವನ್ನು ವೆಂಕಯ್ಯ ಅವರು ಪ್ರಸ್ತುತಪಡಿಸಿದ್ದರು.
ಆಗ ಅದರಲ್ಲಿ ಕೆಂಪು ಮತ್ತು ಹಸಿರು ಬಣ್ಣಗಳಷ್ಟೇ ಇದ್ದವು. ಈ ಎರಡೂ ಬಣ್ಣಗಳು ಪ್ರಮುಖ ಎರಡು ಸಮುದಾಯಗಳು ಪ್ರತಿನಿಧಿಸುತ್ತಿದ್ದವು. ಅಂದರೆ ಹಿಂದೂಗಳು ಮತ್ತು ಮುಸ್ಲಿಮರು. ಆದರೆ ಭಾರತದ ಉಳಿದ ಸಮುದಾಯಗಳನ್ನು ಪ್ರತಿನಿಧಿಸುವ ಬಿಳಿ ಪಟ್ಟಿಯನ್ನು ಸೇರಿಸಲು ಗಾಂಧಿ ಆ ಅಧಿವೇಶನದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರು. ಒಂದಷ್ಟು ಮಾರ್ಪಾಡುಗಳ ನಂತರ ರಾಷ್ಟ್ರಧ್ವಜವನ್ನು 1931ರಲ್ಲಿ ರೂಪಿಸಲಾಯಿತು. ಕೆಂಪು ಬಣ್ಣವನ್ನು ಕೇಸರಿಗೆ ಬದಲಾಯಿಸಲಾಯಿತು ಮತ್ತು ಬಳಿ ಪಟ್ಟಿಯನ್ನು ಮಧ್ಯಕ್ಕೆ ತರಲಾಯಿತು. ಅಡಿಯಲ್ಲಿ ಹಸಿರು ಬಣ್ಣ ಹೊಂದಿಸಲಾಯಿತು. ಧ್ವಜದ ಮಧ್ಯಭಾಗದಲ್ಲಿ ಚರಕವನ್ನು ಇರಿಸಲಾಗಿತ್ತು.
ಮಹತ್ಮಾ ಗಾಂಧೀಜಿಯವರು ಪಿಂಗಳಿ ವೆಂಕಯ್ಯ ಅವರಿಗೆ ಕೆಂಪು ಮತ್ತು ಹಸಿರು ಬಣ್ಣದಲ್ಲಿ ಧ್ವಜವನ್ನು ವಿನ್ಯಾಸಗೊಳಿಸಲು ನಿಯೋಜಿಸಿದ್ದರು.
ಅಶೋಕನ ಹಲವಾರು ಶಾಸನಗಳಲ್ಲಿ ಕಂಡುಬರುವ ‘ತಿರುಗುವ ಚಕ್ರ’ವನ್ನು ಅಶೋಕ ಚಕ್ರ ಎಂದು ಕರೆಯಲಾಗುತ್ತದೆ, ಅವುಗಳಲ್ಲಿ ಪ್ರಮುಖವಾದ ಅಶೋಕನ ಸಿಂಹ ರಾಷ್ಟ್ರ ಲಾಂಛನವಾಗಿದೆ.
ಅಶೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಈ ಚಕ್ರವನ್ನು ‘ಸಮಯದ ಚಕ್ರ’ ಎಂದೂ ಕೂಡಾ ಕರೆಯಲಾಗುತ್ತದೆ. ಅಶೋಕ ಚಕ್ರವನ್ನು ಜೈನ ಧರ್ಮ, ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಧಾರ್ಮಿಕ ಸೂಚಕವಾಗಿ ರೂಪಿಸಲಾಗಿದೆ. ಅದಕ್ಕಾಗಿಯೇ ಅಶೋಕ ಚಕ್ರವನ್ನು ‘ಧರ್ಮದ ಚಕ್ರ’ ಎಂದು ಕೂಡಾ ಕರೆಯಲಾಗುತ್ತದೆ.
ಅಶೋಕ ಚಕ್ರದ ಕಡ್ಡಿಗಳು ಪರಿಶುದ್ಧತೆ, ಆರೋಗ್ಯ, ಶಾಂತಿ,ತ್ಯಾಗ, ನೈತಿಕತೆ, ಸೇವೆ, ಕ್ಷಮೆ, ಪ್ರೀತಿ,ಸ್ನೇಹ, ಭ್ರಾತೃತ್ವ, ಸಂಘಟನೆ, ಕಲ್ಯಾಣ, ಸಮೃದ್ಧಿ, ಕೈಗಾರಿಕೆ, ಸುರಕ್ಷತೆ, ಅರಿವು, ಸಮಾನತೆ, ಅರ್ಥ,ನೀತಿ,ನ್ಯಾಯ, ಸಹಕಾರ,ಕರ್ತವ್ಯಗಳು, ಹಕ್ಕುಗಳು, ಬುದ್ಧಿವಂತಿಕೆ ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ.
ಜಲಂಧರ್ನ ಲಾಲಾ ಹಂಸರಾಜ್ ಅವರು ರಾಷ್ಟ್ರಧ್ವಜದಲ್ಲಿ ಚರಕ ಸೇರ್ಪಡಗೆ ಸಲಹೆ ನೀಡಿದ್ದರು. ಅದರಂತೆ ಮೊದಲು ಕೆಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜದಲ್ಲಿ ಚರಕವನ್ನು ಸೇರಿಸಲಾಗಿತ್ತು.
ಅಶೋಕ ಚಕ್ರದಲ್ಲಿ ಇರುವ 24 ಗೆರೆಗಳಿಗೆ ಮನುಷ್ಯನ 24 ಗುಣಗಳನ್ನು ಪ್ರತಿನಿಧಿಸುವ ಅರ್ಥವಿದೆ. ಈ ಗೆರೆಗಳನ್ನು ಮಾನವರಿಗಾಗಿ ಮಾಡಿದ 24 ಧಾರ್ಮಿಕ ಮಾರ್ಗಗಳು ಎಂದು ಹೇಳಬಹುದು. ಅಶೋಕ ಚಕ್ರದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾರ್ಗಗಳು ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತವೆ. ಬಹುಶಃ ಇದೇ ಕಾರಣಕ್ಕಾಗಿಯೇ ನಮ್ಮ ರಾಷ್ಟ್ರಧ್ವಜದ ವಿನ್ಯಾಸಕರು ಅದರಲ್ಲಿದ್ದ ಚರಕವನ್ನು ತೆಗೆದು ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ವಿನ್ಯಾಸ ಮಾಡಿದ್ದಾರೆ.