ಇಂದು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ. ಭಾರತದ ರಾಷ್ಟ್ರಪತಿಯಾಗಿ ಜನಮನ ಗೆದ್ದಿದ್ದ ಅಬ್ದುಲ್ ಕಲಾಂ ಅವರನ್ನು ‘ಮಿಸೈಲ್ ಮ್ಯಾನ್’ ಎಂದೇ ಪ್ರಖ್ಯಾತರಾಗಿದ್ದರು. ಅವರು ವೈವಿಧ್ಯಮಯ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದರು. ಅವರು ಎಲ್ಲಿಗೇ ಹೋದರು ಮಕ್ಕಳ ಜೊತೆ ಮಗುವಾಗಿಯೇ ಬೆರೆತು ಸವಾಂದ ನಡೆಸುತ್ತಿದ್ದರು. ಅವರನ್ನು ಅದಕ್ಕಾಗಿ ಭಾರತವು ‘ಅತ್ಯುತ್ತಮ ಶಿಕ್ಷಕ’ ಎಂದು ನೆನಪಿಟ್ಟುಕೊಂಡಿದೆ.
ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931 ರಂದು ಭಾರತದ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಜುಲೈ 27, 2015 ರಂದು ಶಿಲ್ಲಾಂಗ್ನಲ್ಲಿ ನಿಧನರಾದರು.
ಅಬ್ದುಲ್ ಕಲಾಂ ಅವರು ರಾಮನಾಥಪುರಂನ ಶ್ವಾರ್ಟ್ಜ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿಯಾಗಿ ಸೇರಿಕೊಂಡರು.
ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು(SLV) ಅಭಿವೃದ್ಧಿ ಪಡಿಸುವ ಯೋಜನೆಗೆ ಡಾ. ಕಲಾಂ ಅವರು ಇಸ್ರೋದಲ್ಲಿ ಸ್ತಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು.
ಜುಲೈ 1980 ರಲ್ಲಿ ಡಾ. ಅಬ್ದುಲ್ ಕಲಾಂ ಅವರ ಮಾರ್ಗದರ್ಶನದಲ್ಲಿ ಭಾರತದ ಎಸ್ಎಲ್ವಿ-3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್ನ ಸದಸ್ಯರನ್ನಾಗಿ ಮಾಡಿದರು.
ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 25 2002 ರಿಂದ ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಹುದ್ದೆಯ ನಂತರವೂ ಜನಪ್ರಿಯ ವ್ಯಕ್ತಿಯಾಗಿ, ವಿಜ್ಞಾನಿಯಾಗಿ ಡಾ.ಕಲಾಂ ಗುರುತಿಸಿಕೊಂಡಿದ್ದರು. ಅಬ್ದುಲ್ ಕಲಾಂ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ‘ವಿಂಗ್ಸ್ ಆಫ್ ಫೈರ್’ ಎಂಬುದು ಇವರ ಆತ್ಮಕಥೆಯಾಗಿದೆ.
ಡಾ. ಎಪಿಜಿ ಅಬ್ದುಲ್ ಕಲಾಂ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಒಲೆದು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ದೇಶದ ಐಕ್ಯತೆಯ ಇಂದಿರಾ ಗಾಂಧಿ ಪ್ರಶಸ್ರಿ, ರಾಮಾನುಜನ್ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. 1997 ರಲ್ಲಿ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಲ್ಲದೇ 1990ರಲ್ಲಿ ಪದ್ಮ ವಿಭೂಷಣ ಹಾಗೂ 1981 ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.
ಡಾ. ಎಪಿಜಿ ಅಬ್ದುಲ್ ಕಲಾಂ ಅವರು ಜುಲೈ 27, 2015 ರಲ್ಲಿ ಶಿಲ್ಲಾಂಗ್ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಉಪನ್ಯಾಸ ನೀಡುತ್ತಿರುವಾಗಲೇ ಕುಸಿದು ಬಿದ್ದು ವಿಧಿವಶರಾದರು.
ಡಾ. ಎ.ಪಿ.ಜಿ ಅಬ್ದುಲ್ ಕಲಾಂ ಅವರ ಸ್ಪೂರ್ತಿದಾಯಕ ನುಡಿಮುತ್ತುಗಳು
- ಕಠಿಣ ಪರಿಶ್ರಮಿಗಳಿಗೆ ದೇವರು ಸಹಕರಿಸುತ್ತಾನೆ.
- ಕನಸುಗಳನ್ನು ಸಾಕಾರಗೊಳಿಸುವ ಮುನ್ನ ಕನಸುಗಳನ್ನು ಕಾಣಿರಿ.
- ಯಾರನ್ನಾದರೂ ಸೋಲಿಸುವುದು ಬಹಳ ಸುಲಭ, ಆದರೆ ಗೆಲ್ಲುವುದು ಬಹಳ ಕಷ್ಟ. ಇತರರ ಹೃದಯ ಗೆಲ್ಲಿ
- ಧರ್ಮವೆನ್ನುವುದು ಶ್ರೇಷ್ಠ ವ್ಯಕ್ತಿಗೆ ಸ್ನೇಹ ಸಂಪಾದನೆಯ ದಾರಿ. ಅಲ್ಪನಿಗೆ ಅದು ಯುದ್ಧಕ್ಕೆ ದಾರಿ.
- ಕನಸು ಎಂದರೆ ನಿದ್ರೆಯಲ್ಲಿ ಕಾಣುವುದಲ್ಲ. ಕನಸು ಈಡೇರುವ ಮೊದಲು ನೀವು ನಿದ್ರಿಸಲಾರಿರಿ.
- ಮಳೆ ಬಂದಾಗ ಎಲ್ಲಾ ಪಕ್ಷಿಗಳು ಓಡಿ ಗೂಡು ಸೇರುತ್ತವೆ. ಆದರೆ, ಗರುಡ ಮೋಡದಾಚೆ ಹಾರಿ ಮಳೆಯಿಂದ ಪಾರಾಗುತ್ತದೆ.
- ನಿಮ್ಮ ಭವಿಷ್ಯ ನೀವು ಬದಲಾಯಿಸುವುದಿಲ್ಲ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಬದಲಿಸಬಹದು. ಒಳ್ಳೆಯ ಹವ್ಯಾಸಗಳನ್ನು ಹೊಂದಿರಿ.
- ಏಕಾಂಗಿಯೆಂದುಕೊಳ್ಳಬೇಡಿ. ಆಕಾಶವನ್ನು ನೋಡಿ. ಅವು ನಮ್ಮ ಜತೆಯಿದೆ. ಇಡೀ ಜಗತ್ತು ನಮ್ಮ ಜತೆಯಿದೆ. ಕನಸುಗಳನ್ನು ಕಾಣುವವರಿಗೆ ಮತ್ತು ಕಾರ್ಯಪ್ರವೃತ್ತರಾಗುವವರಿಗೆ ಜಗತ್ತು ಒಳ್ಳೆಯದ್ದನ್ನೇ ನೀಡುತ್ತದೆ.
- ಕಷ್ಟಗಳಿಗೆ ಹೆದರಬೇಡಿ. ಮಾನವನಿಗೆ ಕಷ್ಟಗಳು ಎದುರಾಗುವುದರಿಂದಲೇ ಯಶಸ್ಸನ್ನು ಅನುಭವಿಸಲು ಸಾಧ್ಯವಾಗುತ್ತದೆ