News Karnataka Kannada
Saturday, April 27 2024
ವಿಶೇಷ

ಬೇಸಿಗೆಯಲ್ಲಿ ಮಳೆಯೊಂದಿಗೆ ಬರುವ ಸಿಡಿಲಿನತ್ತ ಎಚ್ಚರವಿರಲಿ!

ಬೇಸಿಗೆಯಲ್ಲಿ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುವುದು ಮಾಮೂಲಿ. ಆದರೆ ಈ ಮಳೆಯ ಜತೆಗೆ ಬರುವ ಸಿಡಿಲು ಮಾತ್ರ ಅಪಾಯಕಾರಿ. ಈ ಸಿಡಿಲಿನ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸದಿದ್ದರೆ ಪ್ರಾಣ ತೆಗೆದು ಬಿಡುವುದರಲ್ಲಿ ಎರಡು ಮಾತಿಲ್ಲ.
Photo Credit : By Author

ಬೇಸಿಗೆಯಲ್ಲಿ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುವುದು ಮಾಮೂಲಿ. ಆದರೆ ಈ ಮಳೆಯ ಜತೆಗೆ ಬರುವ ಸಿಡಿಲು ಮಾತ್ರ ಅಪಾಯಕಾರಿ. ಈ ಸಿಡಿಲಿನ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸದಿದ್ದರೆ ಪ್ರಾಣ ತೆಗೆದು ಬಿಡುವುದರಲ್ಲಿ ಎರಡು ಮಾತಿಲ್ಲ.

ಬೇಸಿಗೆಯಲ್ಲಿ ಮಳೆಯೊಂದಿಗೆ ಬರುವ ಸಿಡಿಲಿಗೆ ಸಿಲುಕಿ ಸಾವನ್ನಪ್ಪುವ ವರದಿಗಳು ಹೆಚ್ಚಾಗಿ ಕೇಳಿ ಬರುತ್ತದೆ. ಹೊಲದಲ್ಲಿ ಕೆಲಸ ಮಾಡುವವರು ಮಳೆ ಬಂತೆಂದು ಮರದಡಿಯಲ್ಲಿ ನಿಲ್ಲುವುದು ಕಂಡು ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಮರಕ್ಕೆ ಸಿಡಿಲು ಬಡಿದು ಸಾವನ್ನಪ್ಪುವ ಸಾಧ‍್ಯತೆ ಹೆಚ್ಚಾಗಿರುತ್ತದೆ.

ಹೆಚ್ಚಿನ ಪ್ರಕರಣಗಳಲ್ಲಿ ಸಂದರ್ಭಗಳಲ್ಲಿ ಸಿಡಿಲಿಗೆ ಬಲಿಯಾಗುವವರು ಬಯಲಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಜಮೀನಿನಲ್ಲಿ ದುಡಿಯುವ, ದನ, ಕುರಿ ಮೇಯಿಸುವ ರೈತರೇ ಬಲಿಯಾಗುವುದು ಹೆಚ್ಚಾಗಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ದಾರಿಯಲ್ಲಿ ಹೋಗುತ್ತಿದ್ದವರು ಮಳೆ ಬಂತೆಂದು ಬಯಲಿನಲ್ಲಿರುವ ಮರದ ಕೆಳಗೆ ನಿಂತ ವೇಳೆ ಸಿಡಿಲು ಬಡಿದು ಸಾವನ್ನಪ್ಪುತ್ತಾರೆ.

ಮಳೆಗಾಲ ಆರಂಭಕ್ಕೂ ಬರುವ ಬೇಸಿಗೆ ಕಾಲದ ಪೂರ್ವ ಮುಂಗಾರು ಇಡೀ ವಾತಾವರಣವನ್ನು ತಂಪು ಗೊಳಿಸಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮುನ್ನುಡಿ ಬರೆಯುತ್ತದೆ. ಆದರೆ ಈ ವೇಳೆ ಬರುವ ಸಿಡಿಲು ಮಾತ್ರ ಅಪಾಯಕಾರಿ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಪ್ರಾಣವನ್ನೇ ತೆಗೆದು ಬಿಡುತ್ತದೆ.

ಇಂತಹ ಸಂದರ್ಭಗಳಲ್ಲಿ ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸಿಡಿಲು, ಗುಡುಗು ಕಾಣಿಸಿಕೊಂಡಾಗ ಯಾವ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು? ಎಂಬುದರ ಬಗ್ಗೆ  ಸಾರ್ವಜನಿಕರಿಗೆ  ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಒಂದಷ್ಟು ಸಲಹೆಗಳನ್ನು ನೀಡುತ್ತಲೇ ಬಂದಿದೆ ಅದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಬಹು ಮುಖ್ಯವಾಗಿದೆ.

ಬೇಸಿಗೆಯಲ್ಲಿ ಮಳೆ ಬರುವ ಮುನ್ಸೂಚನೆ ಕಾಣುತ್ತಿದ್ದಂತೆಯೇ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಅದರಲ್ಲೂ ಬಯಲಲ್ಲಿ ಕೆಲಸ ಮಾಡುವ ರೈತರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಗುಡುಗು- ಮಿಂಚು ಬರಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಯಾರಾದರು ಬಯಲು ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರೆ ತಕ್ಷಣವೇ ತಗ್ಗು ಪ್ರದೇಶದತ್ತ ಹೋಗಬೇಕು. ಜತೆಗೆ ಅಲ್ಲಿ ನಿಲ್ಲುವ ಬದಲು ಕುಳಿತುಕೊಳ್ಳಬೇಕು.

ಒಂದು ವೇಳೆ ತಗ್ಗು ಪ್ರದೇಶವಿಲ್ಲದೆ ಬಯಲಿನಲ್ಲೆ ಇರಬೇಕಾದ  ಪರಿಸ್ಥಿತಿ  ಎದುರಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. ಇನ್ನು ಮರಗಿಡವಿರುವ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ವಿದ್ಯುತ್ ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಪರಿಣಾಮ ಅಂತಹ ಪ್ರದೇಶಗಳ ಮೇಲೆಯೇ ಸಿಡಿಲು ಬಡಿಯ ಬಹುದು.

ಒಮ್ಮೊಮ್ಮೆ ಎತ್ತರದ ಗುಡ್ಡದ ಮೇಲಿದ್ದರೆ ತಗ್ಗು ಪ್ರದೇಶದ ಕಡೆಗೆ ಹೋಗಿ. ಕುರಿ ಮೇಯಿಸುತ್ತಾ  ಮಂದೆ ಅಥವಾ ಜಾನುವಾರುಗಳ ಮಧ್ಯೆ ನಿಂತಿದ್ದರೆ, ಅವುಗಳ ನಡುವೆ ಬಗ್ಗಿ ಕುಳಿತುಕೊಳ್ಳಿ, ಹೀಗೆ ಮಾಡುವುದರಿಂದ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ನಮ್ಮನ್ನು ಆವರಿಸಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ. ವಿದ್ಯುತ್ ಕಂಬ, ಎಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರ ಇರಬೇಡಿ. ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೊರವಿರಿ. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ. ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ. ಗುಡುಗು- ಸಿಡಿಲಿನ ಸಂದರ್ಭದಲ್ಲಿ ಫೋನ್ ಬಳಕೆ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಕೆಲಸವನ್ನಂತು ಮಾಡಲೇ ಬೇಡಿ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ  ಕುಳಿತುಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್ ಗಳಿಂದ ದೂರ ಇರಿ. ಮನೆಯ ಕಾಂಕ್ರಿಟ್ ಗೋಡೆಗಳನ್ನು ಸ್ಪರ್ಶಿಸದೆ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.

ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಈ ಸಲಹೆಯನ್ನು ಗಮನಿಸಿ ಒಂದಷ್ಟು ಮುಂಜಾಗ್ರತೆಯನ್ನು ನಾವು ತೆಗೆದುಕೊಂಡಿದ್ದೇ ಆದರೆ ಸಿಡಿಲಿನಿಂದ ಪ್ರಾಣ ಹೋಗುವುದನ್ನು ತಪ್ಪಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು