ಬಂಟ್ವಾಳ: ಮೂಡಬಿದ್ರೆಯಲ್ಲಿ ಬುಧವಾರ ಆರಂಭಗೊಳ್ಳಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ತಾಲೂಕಿನ ಕಲ್ಲಡ್ಕ ಶಿಲ್ಪಾಗೊಂಬೆ ಬಳಗದ 50 ಬೃಹತ್ ತಟ್ಟಿರಾಯ(ಬೇತಾಳ)ಗಳೂ ಸೇರಿದಂತೆ 150 ಕ್ಕೂ ಅಧಿಕ ಗೊಂಬೆಗಳು ಭಾಗವಹಿಸಲು ಸಜ್ಜಾಗಿನಿಂತಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಜಾಂಬೂರಿಯ ನೇತೃತ್ವ ವಹಿಸಿಕೊಂಡಿರುವ ಡಾ.ಎಂ.ಮೋಹನ ಆಳ್ವ ಅವರ ಪರಿಕಲ್ಪನೆಯಂತೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ಅವರು ತಟ್ಟಿರಾಯ ಬೇತಾಳ ಸಹಿತ ವಿವಿಧ ಗೊಂಬೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಅಂತಿಮ ಹಂತದ ಕಾರ್ಯ ನಡೆಸುತ್ತಿದ್ದಾರೆ.
ಸುಮಾರು 10ರಿಂದ 13 ಅಡಿಯ ತಟ್ಟಿರಾಯನ ಗೊಂಬೆಗಳು, ಕೀಲುಕುದುರೆಗಳು,ಸಣ್ಣ ಗೊಂಬೆಗಳು,ಕರಗ, ಜೋಕರ್, ಕಾರ್ಟೂನ್ ಗೊಂಬೆಗಳು ಸೇರಿದಂತೆ ಹಲವು ಕಲಾಕೃತಿಗಳು ಕಲ್ಲಡ್ಕದಲ್ಲಿ ಸಿದ್ಧಗೊಂಡಿದೆ.
ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ಮೂಲಕ ನಾಡಿನ ಅನೇಕ ಕಲಾವಿದರಿಗೆ ವೇದಿಕೆ ಒದಗಿಸುತ್ತಾ ಓರ್ವ ಕಲಾಪೋಷಕರಾಗಿರುವ ಮೋಹನ ಆಳ್ವರು ಕಳೆದ 25 ವರ್ಷಗಳಿಂದ ಶಿಲ್ಪಾಗೊಂಬೆ ಬಳಗವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿಯ ಜಾಂಬೂರಿಯ ಮೂಲಕವೂ ನಮ್ಮಂತ ಹಲವು ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟಿರುವುದು ಅಭಿಮಾನದ ಸಂಗತಿ ಎನ್ನುತ್ತಾರೆ ಶಿಲ್ಪಾ ಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ.
ತೆರೆದುಕೊಳ್ಳಲಿದೆ ಗೊಂಬೆಗಳ ಕಾರ್ಟೂನ್ ಪ್ರಪಂಚ..!
ದೇಶ ವಿದೇಶಗಳ ಸಾವಿರಾರು ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಭಾಗವಹಿಸುವ ಜಾಂಬೂರಿಯಲ್ಲಿ ಕಲ್ಲಡ್ಕ ಶಿಲ್ಪಾಗೊಂಬೆ ಬಳಗ ಮಕ್ಕಳನ್ನೇ ಕೇಂದ್ರವಾಗಿರಿಸಿಕೊಂಡು ಗೊಂಬೆಗಳ ಕಾರ್ಟೂನ್ ಪ್ರಪಂಚವೇ ತೆರೆದುಕೊಳ್ಳಲಿದೆ. ರಮೇಶ್ ಕಲ್ಲಡ್ಕ ಅವರ ಪುತ್ರ ನಿತಿನ್ ಕಲ್ಲಡ್ಕರವರ ನೇತೃತ್ವದಲ್ಲಿ ಕಾರ್ಟೂನ್ ನಲ್ಲಿ ಕಾಣಸಿಗುವ, ಮಿಕ್ಕಿ ಮೌಸ್, ಮಿನಿ ಮೌಸ್, ಮೋಟು,ಪಟ್ಲು, ಮಾಶ, ಟಾಮ್ ,ಜೆರ್ರಿ, ಚೋಟಾಭೀಮ್, ಡೊನಾಲ್ಡ್ ಡಕ್ ಮೊದಲಾದ ಗೊಂಬೆಗಳು ಜಾಂಬೂರಿಯ ಸುಸಂದರ್ಭದಲ್ಲಿಯೇ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಶಿಲ್ಪಾ ಗೊಂಬೆ ಬಳಗದ ಹಿರಿಮೆಗೆ ಮತ್ತೊಂದು ಗರಿ…
ಕಳೆದ 37 ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಗೊಂಬೆಗಳನ್ನು ಪರಿಚಯಿಸಿ, ಗೊಂಬೆ ಬಳಗವನ್ನು ಆರಂಭಿಸಿದ ರಮೇಶ್ ಕಲ್ಲಡ್ಕ ರವರ ಶಿಲ್ಪಾ ಗೊಂಬೆ ಬಳಗ ಜಾಂಬೂರಿಯಲ್ಲಿಯೂ ಪೂರ್ಣ ತಂಡದ ಜೊತೆ ಭಾಗವಹಿಸುತ್ತಿರುವುದು ವಿಶೇಷ ವೆನ್ನಿಸಿದೆ. ಮಂಗಳೂರಿನಲ್ಲಿ ನಡೆದ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ‘ಹಂಪಿ ಉತ್ಸವ’, ಮೈಸೂರು ದಸರಾ, ‘ಕರಾವಳಿ ಉತ್ಸವ’ದಲ್ಲಿ ನಡೆದ ಬೊಂಬೆ ಪ್ರದರ್ಶನ. ಕೊಂಕಣಿ ಸಮ್ಮೇಳನ, ಸಾಯಿಬಾಬಾ ಆಶ್ರಮ–ಪುಟ್ಟಪರ್ತಿ, ಮುಂಬೈ ಮತ್ತು ಕೇರಳದಲ್ಲಿಯೂ ತನ್ನ ಗೊಂಬೆಕುಣಿತವನ್ನು ಪ್ರದರ್ಶಿಸಿದ್ದ ಶಿಲ್ಪಾಗೊಂಬೆ ಬಳಗ ಅಂತರರಾಷ್ಟ್ರೀಯ ಜಾಂಬೂರಿಯಲ್ಲಿಯೂ ಪಾಲ್ಗೊಳ್ಳುತ್ತಿರುವುದು ಕಲ್ಲಡ್ಕ ಗೊಂಬೆ ಬಳಗದ ಹಿರಿಮೆಗೆ ಮತ್ತೊಂದು ಗರಿ ಬಂದಂತಾಗಿದೆ.