ಇದು ಒಂದು ಸಂದಿಗ್ಧ ಪರಿಸ್ಥಿತಿ. ಏಕೆಂದರೆ, ಆ ವ್ಯಕ್ತಿಗೆ ಕೌನ್ಸೆಲಿಂಗ್ ಸೆಷನ್ ಬೇಕು ಎಂದು ನಾವು ಭಾವಿಸಿದರೂ, ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಬೇಕಾದ ಅಗತ್ಯವಿದೆ ಎಂಬ ಅರಿವು ಅವರುಗಳಿಗೆ ಇಲ್ಲದೆ ಇರಬಹುದು.
ಅಂತಹ ಸನ್ನಿವೇಶದಲ್ಲಿ, ಕೆಲವರು ವ್ಯಕ್ತಿಯನ್ನು ಚಿಕಿತ್ಸಕ ಅಥವಾ ಮನೋವೈದ್ಯರ ಬಳಿ ಬಲವಂತವಾಗಿ ಕರೆತರುವ ಬಗ್ಗೆ ಯೋಚಿಸುತ್ತಾರೆ ಅಥವಾ ಅವರು ತಮ್ಮ ಸ್ನೇಹಿತರ ಬಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಮಾನಸಿಕ ಆರೋಗ್ಯ ಚಿಕಿತ್ಸಾಲಯಕ್ಕೆ ಕರೆದೊಯ್ಯುವರು. ಇದು ಒಳ್ಳೆಯ ವಿಚಾರವಲ್ಲ. ಏಕೆಂದರೆ ಯಾವಾಗ ವ್ಯಕ್ತಿಗೆ ತನ್ನನ್ನು ಮಾನಸಿಕ ತಜ್ಞರ ಬಳಿ ತಮ್ಮ ಅರಿವಿಲ್ಲದೆ ಕರೆತರಲಾಗಿದೆ ಎಂದು ತಿಳಿಯುತ್ತದೋ, ಆವಾಗ ಅವರು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿರೋಧ ವ್ಯಕ್ತಪಡಿಸುತ್ತಾರೆ. ಇದಕ್ಕೆ ಮೂಲ ಕಾರಣ ಮಾನಸಿಕ ಆರೋಗ್ಯದ ಕುರಿತು ಇರುವಂತಹ ಸಾಮಾಜಿಕ ಕಳಂಕ. ಹಾಗಾದಾಗ ಮಾನಸಿಕ ಚಿಕಿತ್ಸೆ (ಸೈಕೊಥೆರಪಿ) ಅಥವಾ ಫಾರ್ಮಾಕೋಥೆರಪಿ ( ಔಷಧಿಗಳನ್ನು ನೀಡುವುದು) ಪ್ರಯೋಜನಕಾರಿಯಾಗುವುದಿಲ್ಲ.
ಬದಲಾಗಿ ವಿರುದ್ಧ ಪರಿಣಾಮವನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಮುಂದುವರಿಯಬೇಕು?
ಮಾನಸಿಕ ಆರೋಗ್ಯಕ್ಕೆ ಅಂಟಿಕೊಂಡಿರುವ ಕಳಂಕವನ್ನು ಮುರಿಯುವುದು ಸುಲಭದ ಕೆಲಸವಲ್ಲ. ಇದು ಖಂಡಿತವಾಗಿಯೂ ಬಹಳ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ, ನಮ್ಮ ಕುಟುಂಬಗಳಲ್ಲಿ ನಾವು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರಾರಂಭಿಸಬಹುದು. ಮಾನಸಿಕ ಆರೋಗ್ಯ ಸಮಸ್ಯೆಗಳು ಅಂದಾಗ, ನಾವು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಪ್ರಾರಂಭಿಸಬೇಕು. ಇದು ಖಿನ್ನತೆ, ಆತಂಕ, ಸ್ಕಿಜೋಫ್ರೇನಿಯಾ, ಬುದ್ಧಿಮಾಂದ್ಯತೆ ಮತ್ತು ಮುಂತಾದ ತೀವ್ರ ಅಸ್ವಸ್ಥತೆಗಳಾಗಿರಬೇಕಾಗಿಲ್ಲ. ಇದು ಒಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಮತ್ತು ತಮ್ಮ ವಿಭಿನ್ನ ರೀತಿಯ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಪ್ರಾರಂಭವಾಗಬಹುದು. ಕುಟುಂಬದ ಹೆಚ್ಚಿನ ಸದಸ್ಯರು ಯಾವುದೇ ತೊಂದರೆಗಳಿಲ್ಲದೆ ತಮ್ಮ ಮಾನಸಿಕ ತುಮುಲಗಳನ್ನು ಹಂಚಿಕೊಳ್ಳಲು ಆರಂಭಿಸಿದಾಗ, ಅದು ನಿಜವಾಗಿಯೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗೆ ತನ್ನ ಸಮಸ್ಯೆಗಳನ್ನು ಹಂಚಿಕೊಳ್ಳಲು ಒಂದು ಉತ್ತಮ ಅವಕಾಶವನ್ನು ಮಾಡಿಕೊಟ್ಟಂತಾಗುತ್ತದೆ. ಆವಾಗ ಅವರನ್ನು ಶುಶ್ರೂಷೆಗೆ ಕರೆದುಕೊಂಡು ಹೋಗುವುದು ಸುಲಭ.