ಬೇಲೂರು: ಮೈತುಂಬ ಬಟ್ಟೆಯೂ ಇಲ್ಲದೆ, ತಿನ್ನಲು ಆಹಾರವೂ ಇಲ್ಲದೆ ಪರದಾಡುತ್ತಿದ್ದ ವೃದ್ಧೆಗೆ ಬಟ್ಟೆ ಮತ್ತು ಆಹಾರ ನೀಡಿ ಮಾನವೀಯತೆ ಮೆರೆದಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ವೃದ್ಧೆಯೊಬ್ಬರು ಮೈನಲ್ಲಿ ಬಟ್ಟೆಯಿಲ್ಲದೆ, ತಿನ್ನಲು ಆಹಾರವೂ ಇಲ್ಲದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇದನ್ನು ನೋಡಿದ ಸಾಮಾಜಿಕ ಕಾರ್ಯಕರ್ತರಾದ ನೂರ್ ಅಹಮದ್ ಹಾಗೂ ಸಂಪತ್ ಅವರು ವೃದ್ಧೆಗೆ ಬಟ್ಟೆ ಮತ್ತು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಮಾತನಾಡಿದ ಸೋಷಿಯಲ್ ಸರ್ವಿಸ್ ತಂಡದ ನೂರ್ ಅಹ್ಮದ್ ಹಾಗೂ ಸಂಪತ್ ಮಾಸ್ಟರ್ ಮಾತನಾಡಿ ಬೇಲೂರು ಪಟ್ಟಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾದ ಪ್ರವಾಸಿ ತಾಣವಾಗಿದ್ದು, ಸಹಜವಾಗಿ ಭಿಕ್ಷುಕರು ಅನಾಥರು ಈ ಊರಿಗೆ ಬರುವುದು ಸಾಮಾನ್ಯವಾಗಿದೆ. ಈ ಮಧ್ಯೆ ವೃದ್ಧೆ ಮೈತುಂಬ ಬಟ್ಟೆಯಿಲ್ಲದೆ ವಿವಸ್ತ್ರಳಾಗಿ ಮತ್ತು ಹೊದಿಕೆಯಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಸಂಕಷ್ಟ ಪರಿಸ್ಥಿತಿಯಲ್ಲಿದ್ದರು. ಇದನ್ನು ಮನಗಂಡು ನೀರು ಆಹಾರ ಹಾಗೂ ಆಕೆಗೆ ತಾತ್ಕಾಲಿಕ ಆರೈಕೆಯನ್ನು ಮಾಡಿ ಬಟ್ಟೆಯನ್ನು ತೊಡಿಸಿ ಬೆಡ್ ಶೀಟ್ ನೀಡಿದ್ದೇವೆ. ನಾವೂ ಕೂಡ ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಯಾರೂ ಕೂಡ ನಮಗೆ ಸಹಾಯ ಮಾಡುವುದಾಗಲಿ ಅಥವಾ ಹುರಿದುಂಬಿಸುವ ಕೆಲಸ ಮಾಡದೇ ಹೋದರೂ ನಾವು ನಮ್ಮ ಸಾಮಾಜಿಕ ಕಾರ್ಯವನ್ನಂತು ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೇಲೂರಿನಲ್ಲಿ ಬಹಳಷ್ಟು ಜನ ನಿರ್ಗತಿಕರು, ಅನಾಥರು ಕಂಡು ಬರುತ್ತಿದ್ದು, ಸಂಬಂಧಿಸಿದವರು ಇತ್ತ ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.