ಕನ್ನಡ ಭಾಷೆಯ ಉಳಿವಿಗಾಗಿ, ಅದರ ಸ್ಥಾನಮಾನಕ್ಕಾಗಿ ಶತಮಾನದಿಂದಲೂ ಹೋರಾಟಗಳು ನಡೆಯುತ್ತಲೇ ಬಂದಿವೆ. ಆದರೆ ಮತ್ತೊಂದು ಕಡೆ ಕರ್ನಾಟಕದಲ್ಲೇ ಕನ್ನಡದ ಬಗ್ಗೆ ನಿರಾಸಕ್ತಿ, ಅಸಡ್ಡೆ ಹಾಗೂ ಬೇರೆ ಭಾಷೆಗಳ ಬಗೆಗಿನ ವ್ಯಾಮೋಹ, ಆ ಭಾಷೆಗಳ ದಬ್ಬಾಳಿಕೆ ಹೆಚ್ಚಾಗುತ್ತಲೇ ಇದೆ. ಇಂತಹ ವಾತಾವರಣದಲ್ಲಿ ಕನ್ನಡದ ಸೇವೆ ಮಾಡುತ್ತಾ ನಮ್ಮ ನೆಲದ ಸೊಗಡು ಜಾನಪದ ಕಲೆಯನ್ನು ಬೆಳೆಸುತ್ತಾ ಮುಖ್ಯ ಭೂಮಿಕೆಗೆ ಬರದೇ ಎಲೆ ಮರೆಯ ಕಾಯಿಯಂತೆ ಬದುಕು ಸವೆಸುತ್ತಿರುವ ಅದೆಷ್ಟೋ ಕಲಾವಿದರನ್ನು ನಾವು ನೋಡಿದ್ದೇವೆ. ಅಂಥವರ ಸಾಲಿನಲ್ಲಿ ನಮ್ಮ ಲಾಲಸಾಬ ಮಲಿಕ್ ಸಾಬ ಪಶುಪತಿಹಾಳ ಸಹ ಒಬ್ಬರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ದವರಾದ ಇವರು ವಿಶೇಷ ಪ್ರತಿಭೆ ಉಳ್ಳವರಾಗಿದ್ದಾರೆ. ಸುಮಾರು ಮೂವತೈದು ವರ್ಷಗಳಿಂದ ಜನಪದ ಗೀತೆ, ರಿವಾಯತ್ ಪದಗಳು,ಭಕ್ತಿ ಗೀತೆಗಳು ಹಾಗೂ ಹೆಜ್ಜೆ ಮೇಳ, ಕೋಲಿನ ಮೇಳ ಇನ್ನು ಹಲವಾರು ಜಾನಪದ ಪ್ರಕಾರ ಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಲಾಲಸಾಬ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿರುವಾಗ ತಮ್ಮ ದೂರದ ಸಂಬಂಧಿಯಿಂದ ಹೆಜ್ಜೆ ಮೇಳವನ್ನ ಹಾಗೂ ಪದ ಹಾಡುವುದನ್ನು ಕಲಿತಿದ್ದಾರೆ. ಅವತ್ತಿನಿಂದ ಆರಂಭವಾದ ಇವರ ಕಲಾ ಆಸಕ್ತಿ ಇಂದಿಗೂ ಮುಂದುವರೆದಿದೆ. ಲಾಲಸಾಬ ಅವರು ಜಾನಪದ ಗೀತೆ, ರಿವಾಯತ್ ಪದ ಹಾಗೂ ಭಕ್ತಿ ಗೀತೆಗಳನ್ನು ಸೇರಿದಂತೆ ಸರಿಸುಮಾರು ಮೂರು ಸಾವಿರ ಪದಗಳನ್ನು ಹಾಡುತ್ತಾರೆ. ಕರ್ನಾಟಕದ ಹಲವಾರು ಭಾಗಗಳಿಗೆ ಹೋಗಿ ಸುಮಾರು ಆರು ಸಾವಿರ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಬಾಲ್ಯದಲ್ಲಿ ತಮ್ಮ ಮನೆಯಲ್ಲಿ ಹೇಳಿಕೊಳ್ಳುವಂತ ಆರ್ಥಿಕ ಸೌಲಭ್ಯ ಇಲ್ಲದ ಕಾರಣ ಎರಡನೆಯ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿದರು. ನಾಲ್ಕುಜನ ಸಹೋದರರನ್ನು ಹೊಂದಿರುವ ಇವರು , ಹಿರಿಯ ಮಗನಾದ ಕಾರಣದಂದ ಮನೆಯ ಜವಾಬ್ದಾರಿ ಹೊರುವ ಅನಿವಾರ್ಯ ಬಂದಾಗ ಕೂಲಿ ಮಾಡಲು ಪ್ರಾರಂಭಿಸುತ್ತಾರೆ. 1992 ರಿಂದ ಪಾನ ಕಟ್ಟುವದನ್ನೇ ತಮ್ಮ ವೃತ್ತಿಯಾಗಿಸಿಕೊಂಡರು.ಇವರಿಗೆ ಎರಡು ಗಂಡು ಮಕ್ಕಳಿದ್ದು ಅವರು ಐಸ್ ಮಾರಿ ಜೀವನ ಸಾಗಿಸುತ್ತಿದ್ದಾರೆ.
ಧಾರ್ಮಿಕ ಗುರುಗಳಿಂದ ಆಶೀರ್ವಾದ ಪಡೆದಿರುತ್ತಾರೆ:-
ಮೊಹರಂ ಹಾಗು ಇನ್ನಿತರ ಸಂದರ್ಭದಲ್ಲಿ ಹಾಡುವ ರಿವಾಯತ್ ಪದಗಳನ್ನು ಹಳೆ ಬಂಕಾಪುರದವರಾದ ಮಾಬೂಬಸಾಬ ಒಂಟಿ, ಹಜರೇಶ ಸಾವಿರ ಶೇಖ ಸನದಿ, ಮಹಮ್ಮದ್ ಹುಸೇನ್ ಶೇಖ ಸನದಿ ಯವರಿಂದ ರಿವಾಯತ್ ಪದಗಳನ್ನು ಕಲಿತಿದ್ದಾರೆ. ಅಷ್ಟೇ ಅಲ್ಲದೇ ಲಿಂಗಾಯತ ಪಂಚ ಪೀಠಗಳ ಆಶೀರ್ವಾದವನ್ನು ಪಡೆದಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಲಾಲಸಾಬ:-
ಲಾಲಸಾಬ್ ಜನಪದ ಗೀತೆಗಳು ಹಾಗು ಸಾವಿರ ರಿವಾಯತ್ ಪದಗಳನ್ನು ಹಾಡುವುದಷ್ಟೇ ಅಲ್ಲದೇ , ಗಣ್ಯರ ಜೀವನ ಚರಿತ್ರೆ ಅವರ ಕೌಟುಂಬಿಕ ಇತಿಹಾಸವನ್ನು ಪದ್ಯದ ಮೂಲಕ ಹೇಳುತ್ತಾರೆ. ಕನ್ನಡದ ಮೇರು ನಟ ಡಾ.ರಾಜಕುಮಾರ ಕುಟುಂಬದ ಚರಿತ್ರೆಯನ್ನು ಪ್ರಾಸವಾಗಿ ಬರೆದು ಶಿವರಾಜ ಕುಮಾರಗೆ ನೀಡಿ ಭೇಷ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ದಿನಾಂಕ ಹೇಳಿದರೆ ವಾರವನ್ನು ಹೇಳುವ ಇವರು ಕೇಳುಗರಲ್ಲಿ ಅಚ್ಚರಿ ಮೂಡಿಸಿದ್ದಾರೆ.ಮತ್ತು ಆದಿ- ಅಂತ್ಯ ಪ್ರಾಸ ಪದಗಳನ್ನು ಕಟ್ಟುವಲ್ಲಿ ನಿಸ್ಸೀಮರು. ಸಾಮಾಜಿಕ, ಐತಿಹಾಸಿಕ ಘಟನೆಗಳ ಬಗ್ಗೆ ಪದ ಕಟ್ಟಿ ಹಾಡುತ್ತಾರೆ. ಇಷ್ಟಕ್ಕೆ ನಿಲ್ಲದ ಇವರ ಸಾಧನೆ ಮುಂದು ವರೆದು ಬಭ್ರುವಾಹನ, ಸಂಗೊಳ್ಳಿರಾಯಣ್ಣ ನಂತಹ ಪಾತ್ರಗಳ ಏಕಪಾತ್ರಾಭಿನಯದ ಮೂಲಕ ಪ್ರಸ್ತುತ ಪಡೆಸುತ್ತಾರೆ. ಹೆಸರಿಗೊಂದು ಪ್ರಾಸ:-
ಲಾಲಸಾಬ ಯಾವುದೇ ಹೆಸರು ಹೇಳಿದರೂ ಅದಕ್ಕೆ ಮೂರು ಅಥವಾ ನಾಲ್ಕು ಸಾಲಿನ ಪ್ರಾಸವನ್ನು ಹೇಳುತ್ತಾರೆ. ಇವರ ಬಾಯಿಂದ ತಮ್ಮ ಹೆಸರಿಗೆ ಪ್ರಾಸ ಕೇಳುವುದಕ್ಕೆ ಹಲವಾರು ಜನ ಮುಗಿದ ಬೀಳುತ್ತಾರೆ. ಇತ್ತೀಚೆಗೆ ಇವರು ಕೇವಲ ಐದು ನಿಮಿಷದಲ್ಲಿ ಸುಮಾರು ನಲವತ್ತು ಜನರ ಹೆಸರಿನ ಮೇಲೆ ಪ್ರಾಸ ಅಲ್ಲಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದ್ದಾರೆ.
ಕಡಿಮೆ ಶಿಕ್ಷಣ ಅಪಾರ ಸಾಧನೆ:-
ಮನೆಯ ಪರಿಸ್ಥಿತಿಯ ಕಾರಣದಿಂದ ಇವರು ಕೇವಲ ಎರಡನೆಯ ಕ್ಲಾಸ್ ವರೆಗೆ ಮಾತ್ರ ಶಿಕ್ಷಣ ಪಡೆದರು. ಇಂದಿಗೂ ಇವರಿಗೆ ಓದಲು ಬರೆಯಲು ಅಷ್ಟಾಗಿ ಬರುವುದಿಲ್ಲ. ಆದರೆ ಇವರ ನಾಲಿಗೆ ಮೇಲೆ ಕನ್ನಡ ಅದೆಷ್ಟು ಸೊಗಸಾಗಿ ನಲಿಯುತ್ತದೆ ಎಂದರೆ ಅದನ್ನು ಕೇಳಿಯೇ ಅನುಭವಿಸಬೇಕು. ಶಿಕ್ಷಣಕ್ಕು ಸಾಧನೆಯು ಯಾವುದೇ ಸಂಬಂಧವಿಲ್ಲ ಎಂಬುದಕ್ಕೆ ಲಾಲಸಾಬ ಜೀವಂತ ಉದಾಹರಣೆ. ವೃತ್ತಿಗೆ ಬೆಂಬಲವಾಗಿರುವ ಲಾಲಸಾಬರ ಪ್ರವೃತ್ತಿ :-
ಲಾಲಸಾಬ ತಮ್ಮ ಹೊಟ್ಟೆ ಪಾಡಿಗಾಗಿ ಜಾತ್ರೆ, ಉತ್ಸವ,ಮದುವೆ ಗಳಂತಹ ಸಮಾರಂಭದಲ್ಲಿ ಪಾನ ಬೀಡಾ ಕಟ್ಟಿ ತಮ್ಮ ಜೀವನ ಸಾಗಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪದಗಳನ್ನು ಕಟ್ಟುತ್ತಾರೆ. ಅವರ ಪದಗಳಷ್ಟೇ ಅವರು ಕಟ್ಟುವ ಪಾನ್ ಗಳು ಸಹ ತುಂಬಾ ರುಚಿಕರವಾಗಿರುತ್ತದೆ ಎಂದು ಇವರ ಪಾನ್ ಸವಿದ ಜನರು ಅಭಿಪ್ರಾಯ. ಪಟ್ಟಿದ್ದಾರೆ. ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭಿಸಿವೆ:-
ಲಾಲಸಾಬ ಅವರ ಕಲಾಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳಿಂದ ಇಪ್ಪತ್ತೈದು ಪ್ರಶಸ್ತಿ ಗಳು ಇವರನ್ನು ಆರಿಸಿ ಬಂದಿವೆ.ಇವರಿಗೆ ‘ಆಶು ಕವಿ’, ‘ ಕಲಿಯುವದು ಶರೀಫ’ ಹಾಗೂ ವರೂರು ದಸರಾ ದರ್ಬಾರ್ ನಲ್ಲಿ ‘ ಕಲಿಯುಗದಲ್ಲಿ ಕವಿ ಜಾನಪದ ಪ್ರವೀಣ’ ಎಂಬ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ಅನಾರೋಗ್ಯದ ಮಧ್ಯೆಯೂ ಕಲಾಸೇವೆ :-
ಲಾಲಸಾಬ ಅವರಿಗೆ ಸುಮಾರು ವರ್ಷಗಳಿಂದ ಕಾಲಿಗೆ ಸಂಬಂಧಿಸಿದ ಅನಾರೋಗ್ಯ ಕಾಡುತ್ತಿದೆ. ಆದರೆ ಸೂಕ್ತ ಚಿಕಿತ್ಸೆ ಪಡೆಯಲು ಹಣವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿಯಲ್ಲೂ ತಮ್ಮ ಕಲಾಸೇವೆಯನ್ನು ನಿಲ್ಲಿಸದೇ ಮುನ್ನಡೆಸಿಕೊಂಡು ಹೋಗುತ್ತಿರುವುದು ಅವರ ಕಲಾಸಕ್ತಿಗೆ ಹಿಡಿದ ಕೈಗನ್ನಡಿ.
ಲಾಲಸಾಬ ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದರೂ ಹಿಂದೂ ಮಠಗಳ ಬಗ್ಗೆ ಪದಗಳನ್ನು ಬರೆದಿರುವಿದಷ್ಟೇ ಅಲ್ಲದೇ ಹಿಂದೂ ಮಠಗಳು ಬಗ್ಗೆ ವಿಶೇಷ ಭಕ್ತಿಯನ್ನು ಹೊಂದಿದ್ದಾರೆ. ಇವರ ಕನ್ನಡ ಭಾಷೆಯೂ ಸಹ ಅಷ್ಟೇ ಸ್ಪಷ್ಟವಾಗಿದೆ ಇವರು ಹಿಂದೂ- ಮುಸ್ಲಿಂ ಬಾಂಧವ್ಯದ ಕುರುಹಾಗಿದ್ದಾರೆ.
ಲಾಲಸಾಬ ಅವರು ಕರ್ನಾಟಕದ ವಿವಿಧ ಭಾಗಗಳಿಗೆ ಹೋಗಿ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ಕೂಗಳತೆ ದೂರದಲ್ಲಿ ವಿಶ್ವದ ಮೊದಲ ಜಾನಪದ ವಿಶ್ವವಿದ್ಯಾಲಯ ಇದ್ದರೂ ಅಲ್ಲಿಂದ ಯಾವುದೇ ಪ್ರೊತ್ಸಾಹ ವಿಲ್ಲ. ಜಾನಪದ ಉತ್ಸವ, ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಉತ್ಸವದಲ್ಲಿ ಬೇರೆ ಸಿಟಿಗಳಿಂದ ಕಲಾವಿದರನ್ನು ಕರೆಸುತ್ತಾರೆ. ಆದರೆ ನಮ್ಮಂತಹ ಲೋಕಲ್ ಕಲಾವಿದರಿಗೆ ಅವಕಾಶವನ್ನು ಕೊಡದೇ ಇರುವುದು ಬೇಸರವನ್ನುಂಟು ಮಾಡುತ್ತದೆ ಎಂದು ಲಾಲಸಾಬ ಹೇಳುತ್ತಾರೆ. ಸರ್ಕಾರ ಇಂತಹ ಅನನ್ಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತಕ್ಕುದಾದ ಮನ್ನಣೆ ನೀಡಿ, ಸಾಹಿತ್ಯ ಮತ್ತು ಕಲಾ ಪ್ರಪಂಚವನ್ನು ಶ್ರೀಮಂತಗೊಳಿಸುವ ಅವಶ್ಯಕತೆ ಇದೆ.
|
|
ಎಲೆ ಮರೆಯ ಕಾಯಿಯಂತೆ ಕನ್ನಡದ ಸೇವೆ ಮಾಡುತ್ತಿರುವ ಲಾಲಸಾಬ ಪಶುಪತಿಹಾಳ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.