ಮೈಸೂರು: ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠಾ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದ್ದರೆ ಇತ್ತ ಕೆ.ಆರ್.ನಗರ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ಧ ಚುಂಚನಕಟ್ಟೆಯಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದ್ದು, ಈಗಾಗಲೇ ಶ್ರೀಕೋದಂಡರಾಮನ ಬ್ರಹ್ಮರಥೋತ್ಸವ ಮುಗಿದು ತೆಪ್ಪೋತ್ಸವ ಸಂಭ್ರಮದಿಂದ ಜರುಗಿದೆ.
ತೆಪ್ಪೋತ್ಸವದ ಹಿನ್ನಲೆಯಲ್ಲಿ ಬೆಳಗ್ಗೆ ಶ್ರೀರಾಮ ಲಕ್ಷ್ಮಣ ಹಾಗೂ ಸೀತೆ ಉತ್ಸವ ಮೂರ್ತಿಗಳಿಗೆ ಪವಿತ್ರ ಕಾವೇರಿ ನದಿಯ ತೀರ್ಥದ ದಡದಲ್ಲಿ ಕಾವೇರಿ ನೀರಿನ ಮಜ್ಜನ ಮಾಡಿಸಿ. ವಿಧಿ-ವಿಧಾನಗಳ ಸಕಲ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದ ಅರ್ಚಕ ವೃಂದ ದೇವರ ಮೂರ್ತಿಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ದೇಗುಲಕ್ಕೆ ತಂದರು.
ತಡ ರಾತ್ರಿ ದೇವಾಲಯದಿಂದ ಚಿನ್ನಾಭರಣಗಳಿಂದ ಶೃಂಗಾರಗೊಂಡಿದ್ದ ಉತ್ಸವ ಮೂರ್ತಿಗಳನ್ನು ಮಂಗಳಕರ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕಾವೇರಿ ನದಿಯ ತೀರ್ಥ ಕಡಕ್ಕೆ ತರಲಾಯಿತು. ವಿವಿಧ ಪುಷ್ಪಗಳೊಂದಿಗೆ ಹಾಗೂ ಮ್ಯೂಸಿಕಲ್ ವಿದ್ಯುತ್ ದೀಪಗಳಿಂದ ಶೃಂಗಾರ ಗೊಂಡು ನಳನಳಿಸುತ್ತಿದ್ದ ತೆಪ್ಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿ, ಕಾವೇರಿ ನದಿಯ ಮಧ್ಯ ಭಾಗದಲ್ಲಿ ಮೂರು ಸುತ್ತು ಪ್ರದಕ್ಷಿಣೆಯೊಂದಿಗೆ ದೇವರಿಗೆ ಮಹಾ ಮಂಗಳಾರತಿ ಮಾಡುವಾಗ ನೆರೆದಿದ್ದ ಭಕ್ತರು ಜೈರಾಮ್ ಘೋಷ ಮೊಳಗಿಸಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಆ ದೃಶ್ಯವನ್ನು ಕಂಡು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಚಿತ್ತದಲ್ಲೇ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ, ಶಿವಕುಮಾರ್, ಉಪ ತಹಶೀಲ್ದಾರ್ ಶರತ್ ಕುಮಾರ್, ಆರ್. ಐ. ಚಿದಾನಂದ, ದೇವಾಲಯದ ಇ ಒ ರಘು, ಪಾರುಪತ್ತೆದಾರು ಯತಿರಾಜು, ಪವನ್, ಸಿಬ್ಬಂದಿಗಳಾದ ಶಿವಣ್ಣ, ತಿಮ್ಮಣ್ಣ, ಚಂದ್ರಣ್ಣ, ಮಣಿ, ಹರೀಶ, ಅರ್ಚಕ ವೃಂದ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸಾಲಿಗ್ರಾಮ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣ ರಾಜು ಹಾಗೂ ಸಬ್ ಇನ್ಸ್ ಪೆಕ್ಟರ್ ಕುಮುದ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.