ಮೈಸೂರು: ಪ್ರತಿ ಗ್ರಾಮಗಳಲ್ಲೂ ಹನುಮ ಮಂದಿರವಿರುತ್ತದೆ. ಹನುಮ ಎಂದರೆ ಅಂತಃ ಶಕ್ತಿಯ ಪ್ರತೀಕ’ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿಯ ಅಂಗವಾಗಿ ನಡೆದ ಸ್ವಾಮಿಗಳಿಗೆ ವಿಶೇಷ ಅಲಂಕಾರ ಹಾಗೂ ವಿವಿಧ ಬಗೆಯ ನೈವೇದ್ಯ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಮಾತನಾಡಿ, ಜೀವನದಲ್ಲಿ ಕೇವಲ ಹಣ ಸಂಪಾದಿಸಿದರೆ ನೆಮ್ಮದಿ ಸಿಗದು. ಭಕ್ತಿ, ಸತ್ಸಂಗ, ದಾನ, ಧರ್ಮ, ಆಧ್ಯಾತ್ಮ ಚಿಂತನೆಗಳಿಂದ ನೆಮ್ಮದಿ ಸಿಗುತ್ತದೆ. ಅದನ್ನೇ ಮುಕ್ತಿ ಎನ್ನುವರು’ ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಮನುಷ್ಯ ಹುಟ್ಟುವಾಗ ಹೇಗೆ ಖಾಲಿಯಾಗಿ ಬುರುವನೋ ಮರಣದಲ್ಲಿಯೂ ಖಾಲಿಯಾಗಿಯೇ ಹೋಗುತ್ತಾನೆ. ಆದರೆ ಈ ನಡುವಿನ ಜೀವನದಲ್ಲಿ ನಾವು ಮಾಡುವ ಧರ್ಮ ಕಾರ್ಯಗಳು ಹಾಗೂ ದೇವತಾ ಕಾರ್ಯಗಳು ನಮ್ಮ ಜೀವನವನ್ನು ಸಾರ್ಥಕಗೊಳಿಸುತ್ತದೆ ಎಂದರು.
ಇದೇ ವೇಳೆ ಆಂಜನೇಯ ಉತ್ಸವ ಮೂರ್ತಿಯನ್ನು ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಮಾಡಲಾಯಿತು ತದನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸುರೇಶ್, ಚರಣ್, ಗುರು, ಇರಲಾಲ್ ಹಾಗೂ ಇನ್ನಿತರರು ಭಾಗವಹಿಸಿದ್ದರು.